ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನಿಜ ಇತಿಹಾಸದ ಕಡೆಗಿನ ತೋರುಬೆರಳು

Last Updated 31 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪತ್ರಕರ್ತ, ಲೇಖಕಬ್ರಜ್‌ ರಂಜನ್‌ ಮಣಿ ಇಂಗ್ಲಿಷ್‌ನಲ್ಲಿ ಬರೆದ ಬಹು ಚರ್ಚಿತ ಕೃತಿ ‘ಡಿಬ್ರಾಹ್ಮನೈಸಿಂಗ್‌ ಹಿಸ್ಟರಿ: ಡಾಮಿನೆನ್ಸ್‌ ಅಂಡ್‌ ರೆಸಿಸ್ಟೆನ್ಸ್‌ ಇನ್‌ ಇಂಡಿಯನ್‌ ಸೊಸೈಟಿ’ಯನ್ನು ಪತ್ರಕರ್ತೆರೀಟಾ ರೀನಿ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕ ಅಬ್ರಾಹ್ಮಣ ದೃಷ್ಟಿಕೋನದಿಂದ ಇತಿಹಾಸವನ್ನು ಪರಿಶೀಲಿಸಿ ಅನೇಕ ಮೈನವಿರೇಳಿಸುವ ಮತ್ತು ಪೂರ್ವಗ್ರಹವನ್ನು ದೂರಸರಿಸುವಸತ್ಯಗಳನ್ನು ಓದುಗರ ಮುಂದಿಡುತ್ತದೆ.

ಭಾರತದಲ್ಲಿ ಇತಿಹಾಸದ ಬ್ರಾಹ್ಮಣೀಕರಣದ ವಿಮರ್ಶೆಗೆ ದೊಡ್ಡ ಪರಂಪರೆಯೇ ಇದೆ. ಅದರಲ್ಲಿ ಮುಖ್ಯ ಹೆಸರು – ಜ್ಯೋತಿಬಾ ಪುಲೆ, ನಾರಾಯಣ ಗುರು, ಅಯೋಥಿ ದಾಸ್‌, ಅಂಬೇಡ್ಕರ್‌ ಮತ್ತು ಪೆರಿಯಾರ್‌ ಅವರದಾಗಿತ್ತು. ಇದು ಇತಿಹಾಸದಲ್ಲಿ ನಡೆದಿರುವ ಮತ್ತು ನಿರಂತರವಾಗಿ ನಡೆಯುತ್ತಲೇ ಇರುವ ಬ್ರಾಹ್ಮಣ ರಾಜಕೀಯ, ಯಜಮಾನಿಕೆಯನ್ನು ತೀವ್ರ ಕಟು ವಿಮರ್ಶೆಗೆ ಒಳಪಡಿಸುತ್ತದೆ. ಇದು ಅಷ್ಟಕ್ಕೆ ನಿಲ್ಲದೇ ಜಾತಿ ಮತ್ತು ಬ್ರಾಹ್ಮಣವಾದದ ವಿರುದ್ಧ ನಿಂತ ಬೌದ್ಧಧರ್ಮದ ಬಗ್ಗೆ, ಭಾರತದ ಸಂಸ್ಕೃತಿಯನ್ನು ಬ್ರಾಹ್ಮಣವಾದಿ ಅಚ್ಚಿನಲ್ಲಿ ಕೂರಿಸುವ ಪ್ರಯತ್ನದ ಬಗ್ಗೆ ಈ ಅಧ್ಯಯನದಲ್ಲಿ ವಿವರಗಳಿವೆ.

ತಳ ಸಮುದಾಯದ ಸಂತ ಕವಿಗಳ ಭಕ್ತ ಚಳವಳಿ – ಅದಕ್ಕೆ ಬ್ರಾಹ್ಮಣವಾದದ ಪ್ರತಿರೋಧವನ್ನೂ ಗಮನಿಸಿ ದಾಖಲಿಸುತ್ತದೆ. ಇದಲ್ಲದೇ ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರ ನಿಲುವುಗಳಚರ್ಚೆಯೂ ಇಲ್ಲಿದೆ. ಇದರ ವ್ಯಾಪ್ತಿ ಸಹಜವಾಗಿಯೇ ದೊಡ್ಡದಾಗಿದೆ. ಜೊತೆಗೆ ಇದು ಹಳೆಯಮಹಾಕಾವ್ಯ, ಪುರಾಣ ಮತ್ತುವೈದಿಕ ಪಠ್ಯಗಳನ್ನು ಅಬ್ರಾಹ್ಮಣ ದೃಷ್ಟಿಕೋನದಿಂದಲೇ ಓದಿ ವ್ಯಾಖ್ಯಾನಿಸುತ್ತದೆ.ಇವೆಲ್ಲವೂ ಅಬ್ರಾಹ್ಮಣ ದೃಷ್ಟಿಕೋನ ಎನ್ನುವುದಕ್ಕಿಂತ ಕಣ್ಮರೆ ಮಾಡಲಾದ ನಿಜಗಳನ್ನು ತೆರೆದಿಡುವ ಪ್ರಯತ್ನ ಎನ್ನಬಹುದು. ಇದಕ್ಕೆ ಭಗವದ್ಗೀತೆಯೂ ಹೊರತಲ್ಲ.ಅದು ವೇದ, ಪುರಾಣಗಳನ್ನೂ ಕೂಡ ಒಳಗೊಳ್ಳುತ್ತದೆ.

ಯಜಮಾನಿಕೆಯ ವಿರುದ್ಧದ ಪ್ರತಿರೋಧ ಎಲ್ಲಕಡೆ ಇರುವಂಥದ್ದು. ಅಂಥ ಪ್ರತಿರೋಧದ ದನಿಗಳನ್ನು ಗುರುತಿಸುವ ಮತ್ತು ಅವನ್ನು ಸರಿಯಾದ ರೀತಿಯಲ್ಲಿ ದಾಖಲಿಸುವ ಕೆಲಸವನ್ನು ಈ ಪುಸ್ತಕ ಮಾಡುತ್ತದೆ. ಮತ್ತು ಅದನ್ನು ವ್ಯವಸ್ಥಿತವಾಗಿ ಸಂಯೋಜಿಸಿ ಎದುರಿಗಿಡುತ್ತದೆ. ಇದು ಬ್ರಾಹ್ಮಣಿಕೆಯು ತನ್ನ ನಿಯಮಗಳನ್ನು, ಅಧಿಕಾರವನ್ನು ಜಾರಿಗೊಳಿಸುವಲ್ಲಿ ಆದ ಅಪಾರ ಹಿಂಸೆಯನ್ನೂ ಗುರುತಿಸುತ್ತದೆ. ತನ್ನ ಅಧ್ಯಯನದ ಹಿಂದಿನ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕವಾದ ಎಲ್ಲ ಆಯಾಮಗಳನ್ನು, ಅಂಶಗಳನ್ನು ಗಣನೆಗೆ ತೆಗೆದುಕೊಂಡು ಇತಿಹಾಸದಿಂದಲೇ ಅದಕ್ಕೆ ಆಕರಗಳನ್ನು ಜೋಡಿಸುವುದು, ಇಲ್ಲವೇಹೆಕ್ಕಿಕೊಡುವುದು ಇದರ ವಾದಮಂಡನೆಯ ಪ್ರಮುಖ ಅಂಶ.

ಬ್ರಾಹ್ಮಣಿಕೆಯ ದುರುಳತನ, ಕುತಂತ್ರವೂ ಇತಿಹಾಸದ ಒಳಹೆಣಿಗೆಯಲ್ಲಿ ಇರುವುದನ್ನು ಈ ಅಧ್ಯಯನವು ಉದ್ದಕ್ಕೂಕಾಣಿಸುತ್ತಲೇ ಹೋಗಿದೆ.ಹಾಗಾಗಿ ಇತಿಹಾಸದ ಮೊಗಸಾಲೆಯಲ್ಲಿ ಓಡಾಡಿ ಬಂದವರು,ಸಾಗಿ ಬಂದ ದಾರಿಯನ್ನು ಬೇರೊಂದು ರೀತಿಯಲ್ಲಿ ನೋಡುವಂತೆ ಈ ಅಧ್ಯಯನ ಪ್ರೇರೇಪಿಸುತ್ತದೆ. ಅದು ಸತ್ಯದ ಮತ್ತು ಕಠಿಣವಾದ ದಾರಿ ಕೂಡ. ಅಸಮಾನತೆ, ಅನ್ಯಾಯ, ಅನಾಚಾರ, ಅಧರ್ಮದ ಮೇಲೆ ನಿಂತ ಹಿಂದೂ ಧರ್ಮದ ಕುರಿತು ತಿಳಿಸಲೆಂದೇ ಇದು ರಚನೆಯಾದಂತಿದೆ. ಮತ್ತು ಇದು ಎಲ್ಲ ಅಬ್ರಾಹ್ಮಣವಾದ ಸಾಗಿಬಂದ ಮತ್ತು ಮುಂದಕ್ಕೆ ಹೋಗಬೇಕಾದ ದಾರಿ ಎಂಬುದನ್ನು ನಾವಿಲ್ಲಿ ಮರೆಯಕೂಡದು.

ಯಾವುದನ್ನು ತೀವ್ರವಾಗಿ ಮತ್ತು ಉದ್ದೇಶಪೂರ್ವಕವಾಗಿ, ತಮ್ಮ ಲಾಭಕ್ಕಾಗಿ ನಿರಾಕರಿಸಲಾಗಿತ್ತೋ ಅಥವಾ ಬದಿಗೆ ಸರಿಸಲಾಗಿತ್ತೋ ಅದೇ ನಿಜವಾದ ಇತಿಹಾಸ ಎಂಬುದನ್ನು ಈ ಪುಸ್ತಕವು ಪ್ರತಿಪಾದಿಸುತ್ತದೆ. ಅದು ಭಾರತದ ರಾಷ್ಟ್ರೀಯವಾದವನ್ನು ನೋಡಿದ ರೀತಿಯಲ್ಲಿ ಪ್ರತಿಫಲಿತವಾಗಿದೆ. ಭಾರತದಸ್ವಾತಂತ್ರ್ಯಕ್ಕೂ ಮುನ್ನ ಬ್ರಾಹ್ಮಣ ಸಿದ್ಧಾಂತವನ್ನೇ ರಾಷ್ಟ್ರೀಯವಾದದ ಹೆಸರಿನಲ್ಲಿ ಉಳಿಸಿಕೊಂಡಿದ್ದನ್ನು ಈ ಪುಸ್ತಕದ 7ನೇ ಅಧ್ಯಾಯ ಹೇಳುತ್ತದೆ. ಅಂಬೇಡ್ಕರ್‌ ಬರುವುದಕ್ಕೂ ಮೊದಲೇ ದಲಿತ ನಾಯಕರು ಈ ರಾಷ್ಟ್ರೀಯವಾದವನ್ನು ವಿರೋಧಿಸಿದ್ದರು.

ಇಲ್ಲಿ ಇನ್ನೊಂದು ಕುತೂಹಲಕರ ಮತ್ತು ಚಿಂತನೆಗೆ ಅರ್ಹವಾದ ವಿವರವೂ ಇದೆ. ‘ವರ್ಣ, ಧರ್ಮ, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯವಾದಗಳನ್ನು ಪರಸ್ಪರ ಸಂಯೋಜಿಸುವಲ್ಲಿ ಗಾಂಧೀ ಭಾರೀ ಯಶಸ್ವಿಯಾದರು. ಆದರೆ, ಈ ಯಶಸ್ಸನ್ನು ದಲಿತ– ಬಹುಜನ ಹಿತಾಸಕ್ತಿಯನ್ನು ಬಲಿಕೊಟ್ಟು ಸಾಧಿಸಲಾಯಿತು’ (ಪು.422) ಎನ್ನುತ್ತಾರೆಲೇಖಕ ಮಣಿ. ರಾಷ್ಟ್ರೀಯವಾದ ಮತ್ತು ಗಾಂಧೀಜಿಯ ಕುರಿತ ನಮ್ಮ ಕಲ್ಪನೆ, ಅಭಿಪ್ರಾಯಗಳನ್ನು ಈ ಅಧ್ಯಾಯಅಲುಗಾಡಿಸುತ್ತದೆ.ಈ ಪುಸ್ತಕದ ಉದ್ದೇಶವೇ ನಮ್ಮ ಇತಿಹಾಸದ ಕುರಿತ ನಮ್ಮ ಈವರೆಗಿನ ತಿಳಿವಳಿಕೆಯನ್ನು ಅಲುಗಾಡಿಸಿ ಬೀಳಿಸುವುದಾಗಿದೆ.

ಭಾರತದ ಇತಿಹಾಸವನ್ನು ಅಂಚಿಗೆ ತಳ್ಳಲ್ಪಟ್ಟವರ ಕಣ್ಣಿನಿಂದ ನೋಡಿ ಬರೆದ ಈ ಅಧ್ಯಯನವು ಮುಂದಿನ ಇತಿಹಾಸ ಹೇಗಿರಬೇಕು ಎಂಬುದರ ಪುಟ್ಟ, ಆದರೆ, ಮಹತ್ವದ ಮುನ್ನುಡಿಯಾಗಿದೆ. ಕನ್ನಡದಲ್ಲಿಇಂತಹ ಅಧ್ಯಯನಗಳನ್ನು ಆಧರಿಸಿಯೇ ನಿಜವಾದ ಇತಿಹಾಸದ ಅಧ್ಯಯನಗಳು ರೂಪುಗೊಳ್ಳಬೇಕು. ಅದು ಸತ್ಯದ ಪರ ಇರುವವರ ಆಶಯವೂ ಹೌದು. ಅದಕ್ಕೆ ಎ. ರೀಟಾರೀನಿ ಅವರ ಈ ಉತ್ತಮ ಅನುವಾದವು ಅನುವು ಮಾಡಿಕೊಡುವಂತಿದೆ. ಅದು ಈ ದಿಸೆಯಲ್ಲಿ ಇತಿಹಾಸದ ಹತ್ತಾರು ಅಧ್ಯಯನಗಳಿಗೆ ದಾರಿ ಮಾಡಿಕೊಡಬಹುದು. ಈಗಾಗಲೇ ಓದಿರುವ ಮತ್ತು ಓದಲಿರುವ ಇತಿಹಾಸದ ಪಠ್ಯಗಳನ್ನು ನೋಡುವ ನಮ್ಮ ದೃಷ್ಟಿಯನ್ನು ಖಂಡಿತಕ್ಕೂ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT