ಮಂಗಳೂರು: ಚುನಾವಣಾ ಅಕ್ರಮ ತಡೆಗೆ ಜಿಲ್ಲಾಡಳಿತದಿಂದ 15 ಸ್ಥಳಗಳಲ್ಲಿ ತನಿಖಾ ಠಾಣೆಗಳನ್ನು ಸ್ಥಾಪಿಸಿದ್ದು, ಜಿಲ್ಲೆಯನ್ನು ಪ್ರವೇಶಿಸುವ ವಾಹನಗಳನ್ನು ಗುರುವಾರದಿಂದಲೇ ತಪಾಸಣೆ ನಡೆಸಲಾಗುತ್ತಿದೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತಲಪಾಡಿ, ಕೊಣಾಜೆ ಸೇರಿದಂತೆ ಆರು ಕಡೆಗಳಲ್ಲಿ ತನಿಖಾ ಠಾಣೆ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸುಳ್ಯ, ಅಡ್ಯನಡ್ಕ, ವಿಟ್ಲ, ಪುತ್ತೂರು ಸೇರಿದಂತೆ ಒಂಬತ್ತು ಕಡೆಗಳಲ್ಲಿ ತನಿಖಾ ಠಾಣೆಗಳು ಕಾರ್ಯಾರಂಭ ಮಾಡಿವೆ. ಇನ್ನೂ 11 ಸ್ಥಳಗಳಲ್ಲಿ ತನಿಖಾ ಠಾಣೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಚುನಾವಣೆಯಲ್ಲಿ ಬಳಸುವುದಕ್ಕಾಗಿ ಹಣ, ಮದ್ಯ, ಬಟ್ಟೆ, ಪಾತ್ರೆ, ಚಿನ್ನಾಭರಣದಂತಹ ವಸ್ತುಗಳನ್ನು ಸಾಗಿಸುವುದನ್ನು ಪತ್ತೆಹಚ್ಚಲು ತನಿಖಾ ಠಾಣೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಒಳಭಾಗದಲ್ಲೂ ಕೆಲವೆಡೆ ವಾಹನಗಳ ತೀವ್ರ ತಪಾಸಣೆಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಸೂಚಿಸಿದ್ದಾರೆ.
ಆಂಬುಲೆನ್ಸ್ ತಪಾಸಣೆ: ಎಲ್ಲ ತನಿಖಾ ಠಾಣೆಗಳಲ್ಲಿ ಆಂಬುಲೆನ್ಸ್ಗಳನ್ನೂ ತಪಾಸಣೆ ಮಾಡಲಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಹಣ, ಮದ್ಯ ಸಾಗಣೆಗೆ ಆಂಬುಲೆನ್ಸ್ಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಹಿಂದೆ ಹಲವು ಬಾರಿ ಕೇಳಿಬಂದಿತ್ತು. ಆದ್ದರಿಂದ ಈ ಬಾರಿ ಆಂಬುಲೆನ್ಸ್ಗಳನ್ನೂ ತಪಾಸಣೆಯ ವ್ಯಾಪ್ತಿಗೆ ತರುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು.
ಫ್ಲೆಕ್ಸ್, ಬ್ಯಾನರ್ ತೆರವು: ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲೆಯ ಹಲವು ಸ್ಥಳಗಳಲ್ಲಿ ಹಾಕಿರುವ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವ ಕೆಲಸವನ್ನೂ ಜಿಲ್ಲಾಡಳಿತ ಆರಂಭಿಸಿದೆ. ಚುನಾವಣಾ ನೀತಿಸಂಹಿತೆಯ ಅನ್ವಯ ಜಿಲ್ಲೆಯಾದ್ಯಂತ ರಾಜಕೀಯ ಪಕ್ಷಗಳ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಗಳನ್ನು ತೆರವುಗೊಳಿಸಲು ಹಲವು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಉಸ್ತುವಾರಿಯಲ್ಲಿ ಗುರುವಾರ ಜಿಲ್ಲೆಯ ಹಲವೆಡೆ ಕಾರ್ಯಾಚರಣೆ ನಡೆದಿದೆ.
**
ವಿಡಿಯೊ ರೆಕಾರ್ಡಿಂಗ್– ಚಿಂತನೆ
ಪ್ರತಿ ತನಿಖಾ ಠಾಣೆಯಲ್ಲಿ ಮೂರು ಪಾಳಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಪಾಳಿಯಲ್ಲಿ ಒಬ್ಬ ಎಎಸ್ಐ, ಒಬ್ಬರು ಹೆಡ್ ಕಾನ್ಸ್ಟೆಬಲ್ ಮತ್ತು ಮೂವರು ಕಾನ್ಸ್ಟೆಬಲ್ಗಳು ಇರುತ್ತಾರೆ. ಅವರೊಂದಿಗೆ ಒಬ್ಬ ವಿಡಿಯೊ ರೆಕಾರ್ಡರ್ ಮತ್ತು ಚುನಾವಣಾ ಅಕ್ರಮ ಪ್ರಕರಣಗಳಲ್ಲಿ ಕಾನೂನು ಕ್ರಮ ಜಾರಿಗಾಗಿ ನೇಮಿಸಿರುವ ಒಬ್ಬ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಇರುತ್ತಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.