ಇದು ಕೇವಲ ಕೂಡ್ಲೆಪ್ಪ ಅವರ ವ್ಯಕ್ತಿಕಥೆಯಾಗಿರದೆ, ಆ ಭಾಗದ ರೈತರ ಹೋರಾಟ ಕಥನವೂ ಆಗಿದೆ. ಬಯಲುಸೀಮೆಯ ದುಡಿಮೆ, ಪ್ರೀತಿ, ಜಗಳ, ಬಾಂಧವ್ಯ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ. ಸಾರ್ವಜನಿಕ ಜೀವನಕ್ಕೆ ಕಾಲಿಡಲು ಕೂಡ್ಲೆಪ್ಪ ತೆಗೆದುಕೊಂಡ ಪ್ರತಿಜ್ಞೆ, ನರಗುಂದದ ರೈತ ಬಂಡಾಯ, ಲಂಕೇಶ್ ಪತ್ರಿಕೆ ಪ್ರಭಾವ, ಇದರಿಂದ ಅಲ್ಲಲ್ಲಿ ಹುಟ್ಟಿಕೊಂಡ ರೈತ ಸಂಘಗಳ ಪ್ರಾಬಲ್ಯ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರದ ಕುಣಿತ... ಹೀಗೆ ವಿವಿಧ ಅಧ್ಯಾಯಗಳಲ್ಲಿ ಕಥನ ಸಾಗುತ್ತದೆ. ಕೃತಿಯ ಮುಖಪುಟದಲ್ಲಿ ರೇಖೆಯಾಗಿ ಮೂಡಿಬಂದ ಕೂಡ್ಲೆಪ್ಪ ಹಸಿರು ಟಾವೆಲ್ ಹಾಕಿಕೊಂಡು ಕೊನೆಗೊಮ್ಮೆ ಇಡೀ ಕಥೆಯನ್ನು ಕಣ್ಣಲ್ಲೇ ಹರಿಬಿಡುತ್ತಾರೆ ಎನ್ನುವಂತೆ ಭಾಸವಾಗುತ್ತದೆ.