ಆರ್ಟಿಸ್ಟ್ಸ್ ಯುನೈಟ್ ಕರ್ನಾಟಕ ಕಲಾವಿದರ ತಂಡ ಜನವರಿಯಲ್ಲಿ ನೀಡಿದ್ದ, ‘ಪ್ರಜಾಪ್ರಭುತ್ವದ ಮೌಲ್ಯದ ರಕ್ಷಣೆಗೆ ಕಲಾವಿದರೆಲ್ಲ ಒಂದಾಗೋಣ’ ಎಂಬ ಕರೆಗೆ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ನೂರಾರು ಕಲಾವಿದರು ಸ್ಪಂದಿಸಿದ್ದರು. ಅದರ ಪ್ರತಿಫಲವೇ ‘ಮೇಕ್ ಆರ್ಟ್, ನಾಟ್ ವಾರ್’ ಕಾರ್ಯಕ್ರಮ.
‘ನಮ್ಮ ಕರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲ ಪ್ರಕಾರದ ಕಲಾವಿದರೂ ಸ್ಪಂದಿಸಿದ್ದಾರೆ. ತುಂಬ ಉತ್ಸಾಹದಿಂದ ಕಾರ್ಯಕ್ರಮ ನೀಡಲು ಒಪ್ಪಿದ್ದಾರೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಮೆಟ್ರೊ ನಗರಗಳಲ್ಲಿ ಅಭಿಯಾನದ ರೀತಿಯಲ್ಲಿ ಕಲಾವಿದರು ಒಂದಾಗುತ್ತಿದ್ದಾರೆ’ ಎಂದು ಸಂಘಟಕರಲ್ಲಿ ಒಬ್ಬರಾದ ಕೀರ್ತನಾ ಕುಮಾರ್ ಹೇಳುತ್ತಾರೆ.
‘ಮೇಕ್ ಆರ್ಟ್ ನಾಟ್ ವಾರ್’ ಹೆಸರಿನ ವಿಶಿಷ್ಟ ಕಾರ್ಯಕ್ರಮ ಮಾರ್ಚ್ 2ರಂದು ಕೊತ್ತನೂರಿನ ವಿಸ್ತಾರ್ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಚಿತ್ರ ಕಲಾವಿದರು, ನೃತ್ಯ, ನಾಟಕ, ಸಂಗೀತ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ. ಅವರ್ ಗೌರಿ, ಇನ್ದಿ ಶೇಡ್ ಆಫ್ ದಿ ಫಾಲನ್ ಚಿನಾರ್, ಡಿ ಸಿಡೇರ್ 7, ವಿ ಹ್ಯಾವ್ ನಾಟ್ ಕಮ್ ಹೀಯರ್ ಟು ಡೈ, ಸಿಕ್ಕಿದ್ರೆ ಶಿಕಾರಿ–ಇಲ್ದಿದ್ರೆ ಭಿಕಾರಿ ಮುಂತಾದ ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿವೆ.
ಅಶ್ವತ್ಥ್ ವರ್ಗೀಸ್ ಅವರ ಸ್ಯಾಕ್ಸೋಫೋನ್ ವಾದನವಿದೆ. ಅನುರಾಧಾ ವಿಕ್ರಾಂತ್ ತಂಡದಿಂದ ನೃತ್ಯ ಕಾರ್ಯಕ್ರಮವಿದೆ. ನಾಟಕದ ಓದು ಕೂಡಾ ಇರಲಿದೆ. ಸಂಜೆ 6ರಿಂದ 10ರವರೆಗೆ ನಿರಂತರ ಸಂಗೀತ ಕಾರ್ಯಕ್ರಮವಿದೆ. ಎಂ.ಡಿ. ಪಲ್ಲವಿ, ಗೌಲೆ ಭಾಯ್, ಸಂಧ್ಯಾ ವಿಶ್ವನಾಥನ್, ಸಿಲ್ವೆಸ್ಟರ್ ಪ್ರದೀಪ್, ಅಭಿಜಿತ್ ತಂಬೆ, ತಿರುಮಲ್ ಸೇರಿದಂತೆ ಅನೇಕ ಗಾಯಕರು ಸಂಗೀತ ಝರಿ ಹರಿಸಲಿದ್ದಾರೆ. ವಿಸ್ತಾರ್ ರಂಗ ಶಾಲೆಯ ತಂಡ ನಾಟಕ ಪ್ರದರ್ಶಿಸಲಿದೆ.
ಚಿತ್ರ ಕಲಾವಿದರಾದ ರೀಮಾ ಮೌದ್ಗಿಲ್, ಸಲ್ಮಿನ್ ಷರೀಫ್, ವಿವೇಕ್ ಚೊಕ್ಕಲಿಂಗಂ, ಅಜಯ್ ಚಂದ್ರನ್, ವಿವೇಕ್ ಧಗೆ, ಶಶಾಂಕ್ ಸತೀಶ್ ಸ್ಥಳದಲ್ಲಿಯೇ ಕಲಾಕೃತಿಗಳನ್ನು ರಚಿಸಲಿದ್ದಾರೆ. ಪ್ರೇಕ್ಷಕರ ಹಸಿವು ನೀಗಿಸುವ ವಿಶೇಷ ಖಾದ್ಯಗಳ ಸ್ಟಾಲ್ಗಳು, ವಿವಿಧ ವಸ್ತುಗಳ ಮಾರಾಟ ಮಳಿಗೆಗಳು ಇರುತ್ತವೆ. ಪ್ರವೇಶ ಉಚಿತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.