ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಗಪ್ಪ ಮುದೇನೂರು ಅವರ ಕವಿತೆ | ಎರೆ ಮಣ್ಣಿನ ಎರೆ ಬಣ್ಣದನೂರು ಕನಸಿನ ತೇರು...

Last Updated 14 ಜನವರಿ 2023, 19:30 IST
ಅಕ್ಷರ ಗಾತ್ರ

ಬಿತ್ತಿದ ಪ್ರತಿ ಬೀಜಕೂ ಅವರ ಬೆವರ ಹನಿಯ ಮುತ್ತು ತಾಗಿದೆ
ಬೆಳೆಯುವ ಪ್ರತಿ ಪೈರಿಗೂ ಅವಳು ಚೆರಗ ಚೆಲ್ಲಿದ ಚೆಲುವಿದೆ//

ಎರೆ ಮಣ್ಣಿನ ಎರೆ ಬಣ್ಣದ ನೂರು ಕನಸಿನ ತೇರಿದೆ
ಪ್ರತಿ ಪಾದದ ಪ್ರತಿ ಪಾಡ್ಯದ ಹಬ್ಬದೂಟದ ಕಂಪಿದೆ//

ಅವಳ ತೋಳಿನ ಅವಳ ಬಾಳಿನ ಅವಳ ಮಕ್ಕಳ ನಗುವಿದೆ
ಮಣ್ಣಗಂಧದ ಜೀವ ನಂದದ ತೂಗಿ ಬಾಗುವ ಮನಸ್ಸಿದೆ//

ಕನಕ ತೋರಣ ಮನಕೆ ಹೂಬನ ಚೆಲುವ ಕಟ್ಟಿದ ನಾಡಿದೆ
ಗುರು ಗೋವಿಂದರ ಶರೀಫ ಫಕೀರರ ಭಾವೈಕ್ಯದೂಟದ ಸವಿ ಇದೆ//

ಸರ್ವಜ್ಞ ಪಾಡಿದ ಚೌಡಯ್ಯನಾಡಿದ ಮದಗ ತುಂಗೆಯರ ಒಡಲಿದೆ
ಕೆಂಚಮ್ಮನ ಕಡುದುಃಖದ ಸೆರಗಿನಲ್ಲಿ ಕಟ್ಟಿದ ಜೀವನಾಣ್ಯದ ಬದುಕಿದೆ//

ಯಾಲಕ್ಕಿ ಕಂಪಿನ ಸೇವಂತಿಗಿಂಪಿನ ಮಧುರ ಹಾಡಿನ ಲಯವಿದೆ
ವರದಾ ಧರ್ಮೆಯರ ಕುಮುಧ್ವತಿ ತುಂಗ ಭದ್ರೆಯರ ಬಾಳುಕಟ್ಟಿದ ಸೌಹಾರ್ದವಿದೆ//

ಪುರದ ಪುಣ್ಯವೂ ಚಾಲುಕ್ಯ ಶಿಲ್ಪವೂ ರಾಷ್ಟ್ರಕೂಟರ ನಾಡ ಮಹಿಮೆ ಇದೆ
ಕನ್ನಡ ನುಡಿ ಚೆಲುವಲ್ಲಿ ಭಾರತ ಸಿಂಧೂರಶ್ಮಿ ಅರಳಿ ನಿಂತ
ವಿನಾಯಕನ ಗುಣಗಾನವಿದೆ//

ಹಾನಗಲ್ಲ ಗುರುವಿನ ಕ್ಷಾತ್ರತೇಜಸ್ಸಿನ ಪಂಚಾಕ್ಷರಿ ನಿಲುವಿನ ಬಲವಿದೆ
ಹುಕ್ಕೇರಿ ಸಿಂದಗಿ ಹೊಸಮಠ ಹಳೆಮಠಗಳ ಸುತ್ತ ಓಡಾಡಿದ ವಚನ ಗಂಧವಿದೆ//

ನವಿಲು ಕೃಷ್ಣಮೃಗ ಬಾಳನೊಗದೆತ್ತುಗಳ ಪರಿಸೆಯಲಿ ಮಿಂದೆದ್ದ ಸಂಕ್ರಾತಿ ಇದೆ
ಕಾರಣಿಕದ ನುಡಿಯ ಕನ್ನಡದ ಕಂಪಿನ ಶಾಲ್ಮೆಯವರೆಗೂ ಹಬ್ಬಿದ ನವತಾರುಣ್ಯವಿದೆ//

ವನವಾಸ ಕಳೆದ ಸುಖ ಸಂಮೃದ್ಧಿಯ ಪಡೆದ ಹೊಸಬೀಜ ಬಿತ್ತಿದ ರೖೆತನ ಕಸುವಿದೆ
ದೇವಗಿರಿಯಲಿ ನಿಂತು ಸುಗ್ಗಿ ಹಾಡಲಿ ಕಳಿತು 'ಕಟ್ಟುತ್ತೇವ ನಾವು' ಎಂದು ಮಿಡಿದ ಹೃದಯ ವೈಶಾಲ್ಯವಿದೆ/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT