ಮಮತ ಅರಸೀಕೆರೆ ಅವರ ಕವಿತೆ ‘ಚಿತ್ರ ಸಂಕಲ್ಪ’

ಎಲ್ಲಾ ಬಗೆಯ
ಹಾಳೆಯಲ್ಲಿಯೂ,
ತುರುಸು ಬಿರುಸು
ಕ್ಯಾನ್ವಾಸಿನ ಮೇಲೂ
ಮೃದುವಾಗಿ ಸ್ಪರ್ಷಿಸಿ
ನಯವಾಗಿ, ಮೆದುವಾಗಿ
ಕುಂಚ ಮೂಡಿಸುವ
ಆಕಾರ, ಚಿತ್ರಬಿಂಬ
ವಿಷಯಾಧಾರಿತ
ಕಲ್ಪನೆಯ ವ್ಯಾಖ್ಯಾನ
ಆಳದ ಆಂತರ್ಯ
ಎತ್ತರಕ್ಕೆ ನಿಲುಕುವ
ರಮ್ಯ ಸಂಭವನೀಯತೆ
ಸೃಷ್ಟಿಕ್ರಿಯೆಯ ದಿವ್ಯಾರಂಭ
ಮತ್ತು ಅನನ್ಯ ಅಂತ್ಯ
ಶಕ್ತಿಯ ಒಳಪ್ರವಾಹ
ಚೌಕಟ್ಟಿನ ಪರದೆಯ
ಉಪರಿಯಲ್ಲಿ ಹಠಾತ್ತಾಗಿ
ಹಾರಾಡುವ ಸೃಜನಶೀಲ
‘ರಂಗಿ’ನಾಟ
ಕೆಲವೊಮ್ಮೆ ಸಾಕಾರ ,
ಮತ್ತೊಮ್ಮೆ ನಿರಾಕಾರ.
ಆದಿಮೂಲ ಪ್ರಕ್ರಿಯೆ
ಗೆರೆಗಳು ಸಂಧಿಸುತ್ತಾ
ಸೇರುವ ಓಕುಳಿಯ ಬಣ್ಣದ
ಆತ್ಯಂತಿಕ ರೂಪು
ಬಿಂದುವಿನ ನಾಭಿಯಿಂದ
ಬ್ರಹ್ಮಾಂಡದಂಚು ತಲುಪುವ
ಮಹಾಪಾತಾಳಿ ಪಯಣ
ಮೂರ್ತ ಅಮೂರ್ತ
ಚಿತ್ರ ವೈವಿಧ್ಯ
ಆ ಅನುಭವ, ಲಯಬದ್ಧ
ಏಕಾಗ್ರಚಿತ್ತದ ಸರಳ
ಸಹಜ ಭಾವಬದ್ಧತೆ
ಭೂಮಿ ಕ್ಷಿತಿಜಗಳ
ವರ್ಣಾಲಿಂಗನ
ಏಕಸೂತ್ರದಲ್ಲಿ ಬಂಧಿಸುವ
ಸಮಯ, ಸೀಮಾರೇಖೆಗಳ
ಏಕ ಪ್ರತ್ಯೇಕ ರೂಪಾಂತರಿತ
ಪಂಚಭೂತಗಳ ಸಮ್ಮಿಲನ
ಸ್ವಯಂಭೂವಿನಿಂದ
ಸ್ವಾಧಾರಿತ ಅನುಭೂತಿಯತ್ತ
ಚಲಿಸುವ ಮಹಾಅಭಿಯಾನ
ಕಲಾವಿದನ ಆತ್ಮಾನುಸಂಧಾನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.