ನಮ್ಮಲ್ಲಿ ನಾಲ್ಕು ಯುಗಗಳ ಕಲ್ಪನೆ ಉಂಟಷ್ಟೆ. ಮೊದಲನೆಯ ಯುಗವೇ ಸತ್ಯಯುಗ. ಆ ಸತ್ಯಯುಗ ಆರಂಭವಾದದ್ದು ‘ಅಕ್ಷಯ ತೃತೀಯಾ’ದಂದು ಎನ್ನುವ ನಂಬಿಕೆ ಉಂಟು. ವೈಶಾಖಮಾಸದ ಶುಕ್ಲಪಕ್ಷದ ತೃತೀಯಾದಿನವೇ ‘ಅಕ್ಷಯ ತೃತೀಯಾ’. ಅಂದು ಆಚರಿಸುವ ಆಚರಣೆಗಳು ಅಕ್ಷಯವಾದ, ಎಂದರೆ ಮಿತಿಯೇ ಇಲ್ಲದಷ್ಟು ಫಲವನ್ನು ಕೊಡುತ್ತದೆ ಎನ್ನುವುದು ಇದರ ಹೆಗ್ಗಳಿಕೆ. ಆದುದರಿಂದ ಈ ದಿನ ದೇವತಾಪೂಜೆಯನ್ನು ಆಚರಿಸಬೇಕು; ದಾನವನ್ನು ಕೊಡಬೇಕು; ಜಪವನ್ನು ಮಾಡಬೇಕು; ತೀರ್ಥಸ್ನಾನವನ್ನು ಮಾಡಬೇಕು; ಅಧ್ಯಯನವನ್ನು ಆಚರಿಸಬೇಕು – ಎನ್ನುವುದು ಸಂಪ್ರದಾಯದ ನಿಲುವು. ಆದರೆ ಇತ್ತೀಚಿನ ದಿನಗಳಲ್ಲಿ ಇದು ’ಬಂಗಾರವನ್ನು ಕೊಳ್ಳುವ ಹಬ್ಬ’ವಾಗಿ ಮಾರ್ಪಾಡಾಗಿದೆ!