ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇ ಬರೆದ ಕಥೆ: ನಕ್ಷತ್ರಲೋಕಕ್ಕೊಂದು ಟ್ರಿಪ್ಪು

Last Updated 13 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಈ ಕಥೆಯನ್ನು ಕಟ್ಟಿದವರು ನಂಜನಗೂಡು ತಾಲ್ಲೂಕು ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ‘ಬಿ’ ವಿಭಾಗದ ಮಕ್ಕಳು. ತಮ್ಮ ನೆಚ್ಚಿನ ಸಂತೋಷ ಗುಡ್ಡಿಯಂಗಡಿ ಮೇಷ್ಟ್ರು ಕೊಟ್ಟ ಮೊದಲ ಸಾಲಿಗೆ ಒಬ್ಬೊಬ್ಬರು ಒಂದೊಂದು ಸಾಲು ಸೇರಿಸುತ್ತಾ ರೂಪುಗೊಂಡಿದ್ದು ಈ ಕಥೆ. ಮನುಷ್ಯರ ಪಾತ್ರ ಬರಬಾರದು, ನಮ್ಮ ಸುತ್ತಲಿನ ಯಾವುದು ಬೇಕಾದರೂ ಪಾತ್ರವಾಗಬಹುದು ಮತ್ತು ಎಲ್ಲ ಪಾತ್ರಗಳಿಗೂ ಮಾತು ಬರುತ್ತದೆ ಎಂಬ ಮೇಷ್ಟ್ರು ಕೊಟ್ಟ ನಿಯಮಗಳನ್ನು ಎಚ್ಚರಿಕೆಯಿಂದ ಗಮನಿಸಿ ಮಕ್ಕಳು ಒಂದೊಂದೇ ಸಾಲು ಪೋಣಿಸಿದ ಕಥೆ ಇದು.

***

ಒಂಜಿನ ಸ್ವಾಮಾರ ಹೆಗ್ಡಳ್ಳಿ ಇಸ್ಕೂಲ್ನ ಒಂಬತ್ನೇ ‘ಬಿ’ ತರಗತಿಯ ಕ್ಲಾಸ್ ರೂಮು, ಡೆಸ್ಕು, ಬೆಂಚು, ಕಿಟ್ಕಿ, ಬಾಕ್ಲು, ಚಾಕ್ಪೀಸು, ಡಸ್ಟ್ ಬಿನ್, ಪೊರ್ಕೆ, ಡಸ್ಟರು ಎಲ್ಲಾವಿ ಟೂರ್ಗ ಹೋಗೋದು ಅಂದ್ಕ ಪ್ಲ್ಯಾನು ಮಾಡ್ತಾರ. ಆದ್ರ ಎಲ್ಲಿಗ ಹೋಗೋದು! ಅಂದ್ಕ ಎಲ್ರೂವಿ ಯೋಚಿಸ್ತಿರೋವಾಗ ಡೆಸ್ಟರು ‘ನಾವೆಲ್ಲ ನಕ್ಷತ್ರಲೋಕಕ್ಕ ಹೋಗೋಣ’ ಅಂತಾದ.

‘ನಾವ್ ಹೆಂಗ್ ಹೋಗೋದು’ ಅಂತ ಡೆಸ್ಕು ಕೇಳ್ತದ. ಆಗ ಡಸ್ಟ್ ಬಿನ್ನು ‘ನಾವೆಲ್ಲಾವಿ ಸೇರ್ಕಂಡು ಕಾಗಸ್ವಾಮಿ ನೆನಸ್ಗಂಡು ತಪಸ್ಸು ಮಾಡೋಣ’ ಅಂತಾದ. ಅದ್ಕ ಎಲ್ಲಾರೂ ಒಪ್ಗಂಡು ತಪಸ್ಸು ಮಾಡ್ತಾರ. ಕಾಗಸ್ವಾಮಿ ತಪಸ್ಗ ಮೆಚ್ಕಂಡು ಬಂದು ‘ತನ್ನಿಂದ ಯಾನ್ ಆಗ್ಬೇಕು’ ಅಂತ ಕೇಳ್ತಾನ. ಆಗ ಇವ್ರೆಲ್ಲಾವಿ ಸೇರ್ಕಂಡು ‘ನಾವು ಟೂರ್ಗ ಹೋಗ್ತೀವಿ. ಹಾರ್ಕಂಡೋಗಾಕ ನಮ್ಗ ದೊಡ್ಡ ರೆಕ್ಕೆ ಕೊಟ್ಬುಬುಡಿ ಕಾಗಸ್ವಾಮಿ’ ಅಂತ ಕೇಳ್ತಾರ. ‘ಹಂಗೆ ಆಗ್ಲಿ’ ಅಂತ ಕಾಗಸ್ವಾಮಿಯು ಆ ರೂಮ್ಗ ಎಲ್ಡು ದೊಡ್ಡ ರೆಕ್ಕೆ ಕೊಟ್ಟು ವೊಯ್ತನ.

ರೂಮು ದೊಡ್ಡ ರೆಕ್ಕಯ ಬೀಸ್ಗಂಡು ಮೇಲಕ್ಕ ಹಾರ್ಕಂಡು ಹೋಗ್ತಿರಬೇಕಾರ ಜೋರಾಗಿ ಮಳ ಬತ್ತದ. ಆ ಮಳ ಹೂದು ರೂಮು ಸೋರ್ತದ. ಆಗ ಬೆಂಚು ಡೆಸ್ಕು ತಾವು ತ್ಯಾವ ಆಯ್ತಿವಿ ಅಂದ್ಕಂಡು ಹೆದ್ರಕತವ. ಎಲ್ರಿಗೂ ಭಯ ಆಗಿ ಕಾಗಸ್ವಮಿನ ಕೂಗ್ತಾರ. ಕಾಗಸ್ವಾಮಿ ಬಂದು ಯಾನಾಯ್ತು ಅಂದ್ರ, ಇವ್ರೆಲ್ಲಾವಿ ‘ಮಳ ಹೂದು ರೂಮು ಸೋರ್ತದ. ನಮ್ಗ ಇನ್ನೂ ಬಲಿಷ್ಠವಾದ ರೆಕ್ಕೆ ಕೊಡು, ಬೇಗ ಬೇಗ ಹಾರಿ ಮಳೆಯಿಂದ ತಪ್ಪಿಸ್ಕಂತೀವಿ’ ಅಂತ ಬೇಡ್ತಾರ.

‘ಈಗ ಕೊಟ್ಟಿರೋ ರೆಕ್ಕೆ ಅಲ್ದೆಯಾ ಬ್ಯಾರೆದು ಕೊಡ್ಬೇಕಾ ನಿಮ್ಗ’ ಅಂತ ಕೋಪ ಮಾಡ್ಕಂಡು ಇರೋ ರೆಕ್ಕೆನೂ ಕಿತ್ಗಂಡೋಯ್ತನ. ಆವಾಗ ಎಲ್ರೂವಿ ಕಿಟ್ಕಿಯ ಕಳ್ದು ಮೊಳ ಹೊಡ್ದು ರೆಕ್ಕೆ ಮಾಡ್ತಾರ. ಕಿಟ್ಗಿಗ ‘ಜೋರಾಗಿ ರೆಕ್ಕೆಯ ಬೀಸು, ಇಲ್ಲಾಂದ್ರ ನಾವೆಲ್ಲಾವಿ ಬಿದ್ದೋಯ್ತಿವಿ’ ಅಂದಿದ್ದೆ ಕಿಟ್ಕಿ ರೆಕ್ಕೆಯಾಗಿ ಬೀಸ್ತದ. ಮತ್ತೂ ಮೇಲಕ್ಕ ಹಾರ್ತರ.

ಮುಂದಕ್ಕ ವೋಯ್ತಾ ವೋಯ್ತ ಕಿಟ್ಕಿಗ ಸುಸ್ತಾಗತ್ತ. ಆಗ ಗಾಳಿ ಇವ್ರು ಹಾರೋದ್ನ ನೋಡಿ ‘ವಿಮಾನ, ಹಕ್ಕಿ, ಹೆಲಿಕಾಪ್ಟ್ರು ಹಾರೋದ್ನ ನೋಡಿನಿ. ಇದ್ಯಾನ ರೂಮು ಹಾರ್ತದ! ಎಲ್ಲಿಗೋಯ್ತಿರಿ?’ ಅಂತ ಕೇಳ್ತು. ಎಲ್ರೂವಿ ‘ನಾವು ನಕ್ಷತ್ರಲೋಕಕ್ಕ ಟೂರ್ಗ ಒಯ್ತಿವಿ. ನಮ್ಗ ಹಾರಕ ಕಷ್ಟ ಆಯ್ತದ ವಸಿ ಹೆಲ್ಪ್ ಮಾಡು’ ಅಂತ ಕೇಳ್ಕತರ. ಗಾಳಿ ಅವ್ರಿಗ ಹೆಲ್ಪ್ ಮಾಡಾಕ ಬತ್ತು. ಆಗ ಕಾಗಸ್ವಾಮಿ ಬಂದ್ಬುಟ್ಟು ‘ನೀನು ಅವ್ರಗ ಹೆಲ್ಪು ಮಾಡ್ ಬ್ಯಾಡ’ ಅಂದ್ರೂ ಗಾಳಿ ಕಾಗಸ್ವಾಮಿ ಮಾತ್ನ ಕೇಳ್ದೆ ಹೆಲ್ಪ್ ಮಾಡ್ತದ.

ಮೇಲೆ ಮೇಲೆ ಹಾರ್ತ ನಕ್ಷತ್ರಲೋಕಕ್ಕ ಹತ್ರ ಆಗ್ತರ. ಆವಾಗ ಚಾಕ್ಪೀಸು ಇಣ್ಕಿ ನೋಡ್ವಾಗ ಕೆಳ್ಕ ಬೀಳತ್ತ. ಕಾಗಸ್ವಾಮಿ ಆ ಚಾಕ್ಪೀಸ್ನ ದೆಯ್ಯ ಮಾಡಿ ‘ಅವ್ರ್ ಟೂರ್ನ ಕೆಡ್ಸು’ ಅಂತಾನ. ಆ ದೆಯ್ಯ ಹೋಗಿ ರೆಕ್ಕಗ ಅಗತ್ಕಂಡು ಎತ್ತೆತ್ತಗೋ ಹಾರಿಸ್ತದ. ಅವ್ರು ನಕ್ಷತ್ರಲೋಕಕ್ಕ ಮತ್ತ ದೂರ ಆಗ್ಬುಡ್ತರ. ಎಲ್ರಿಗೂ ಭಯ ಆಗುತ್ತ. ಆಗ ಪೊರಕೆ ಹೋಗಿ ರೆಕ್ಕೆಗ ಚೆನ್ನಾಗ್ ಬಾರಿಸ್ತದ. ಆ ಏಟ್ಗ ಚಾಕ್ಪೀಸಿನ ದೆಯ್ಯ ಬುಟ್ಟೋಗಿ ಸರಿ ಆಗಿ ತಿರ್ಗ ನಕ್ಷತ್ರಲೋಕಕ್ಕ ಫಾಸ್ಟಾಗಿ ಹಾರ್ತರ.

ಎಲ್ರೂವಿ ಬಂದು ನಕ್ಷತ್ರಲೋಕದ ಮೇಲ ಲ್ಯಾಂಡ್ ಅಯ್ತರ. ಒಂದ್ಕಡ ಚಿನ್ನದ ಗಿಡ ಮರ್‌ಗಳು ಓಡಾಡ್ತವ. ಇನ್ನೊಂದ್ಕಡ ವಜ್ರದ ಬೆಟ್ಟ. ಅಲ್ಲೇ ಹಾಲಿನ ಹೊಳೆ ಹರಿತದ. ಅದ್ರ ಪಕ್ಕಕ್ಕ ಜೇನಿನ ಕೊಳ ಅದ. ಅಲ್ಲೊಂದ್ ಕೇಳಿದ್ನ ಕೊಡೋವಂತ ಬಾವಿ ಇತ್ತು. ಇದ್ನೆಲ್ಲಾ ನೋಡ್ತ ಚಾಕ್ಪೀಸು ಹಾಲು ಕುಡಿತಿನಿ ಅಂದ್ಕ ಹೊಳೆಗ ಇಳಿತು. ಜಾರಿ ಬಿದ್ಕಂತು. ಮುಳುಗ್ತಾ ಇರುವಾಗ ‘ಕಾಪಾಡಿ ಕಾಪಾಡಿ’ ಅಂದ್ಕ ಕೂಗ್ತಿತ್ತು. ಫ್ರೆಂಡ್ಸೆಲ್ಲ ಕೂಗಿದ್ರು.

ಬೆಂಚ್ಗಳು ಬಾವಿ ಹತ್ರಕ್ಕ ಹೋಗ್ಬುಟ್ಟು ‘ನಂ ಫ್ರೆಂಡು ಮುಳಿಕತನ, ಹೆಂಗಾರೂ ಮಾಡಿ ಕಾಪಾಡು’ ಅಂತ ಬೇಡ್ಕಂಡ್ರು. ಆಗ ಬಾವಿ ಒಳಗಿಂದ ಸೌಂಡು ಬತ್ತು. ನೀರೆಲ್ಲ ಸೇರಿ ದೊಡ್ಡದೊಂದು ಕೈ ಆಗಿ ಹೊಳೇಲಿ ಮುಳುಗ್ತಿದ್ದ ಚಾಕ್ಪೀಸನ್ನು ಹಿಡ್ದು ಎತ್ತಿದ್ರ ಅಲ್ಲಿ ಮರಿ ನಕ್ಷತ್ರ ಇತ್ತು. ಫ್ರೆಂಡ್ಸೆಲ್ಲ ಕೂಗಿದ್ರು ‘ಇದು ನಂ ಫ್ರೆಂಡಲ್ಲ’. ಆಗ ಮರಿ ನಕ್ಷತ್ರ ಹೇಳ್ತು ‘ನಾನೇಕಪ್ಪ ನಿಂ ಫ್ರೆಂಡು’. ಆದ್ರ ಇವ್ರು ಅಲ್ಲ ಅಂದ್ರು. ಆಗ ಬಾವಿ ಮಾತಾಡ್ತು. ‘ಇಲ್ಲಿ ಯಾರೇ ಹಾಲಿನ ಹೊಳೆಗ ಬಿದ್ರೂ ಮರಿ ನಕ್ಷತ್ರ ಅಯ್ತರ’ ಅಂತಾದ. ಇವ್ರೆಲ್ಲ ‘ಮತ್ತೀಗ ಯಾನ್ ಮಾಡೋದು’ ಅಂತ ಕೇಳುದ್ರ ಅದ್ಕ ಬಾವಿ, ‘ಇಲ್ಲಿರೋ ಜೇನಿನ ಕೊಳದಾಗ ಮುಳುಗಿಸಿದ್ರ ಮೊದ್ಲಿನಂಗ ಅಯ್ತರ’ ಅಂತಾದ. ಮರಿ ನಕ್ಷತ್ರನ್ನ ಜೇನಿನ ಕೊಳದಾಗ ಮುಳುಗಿಸಿ ಮ್ಯಾಕ್ಕೆ ತಗುದ್ರ ಅಲ್ಲಿ ಚಾಕ್ಪೀಸು ಇರುತ್ತ. ಅದು ಓಡ್ಬಂದು ಫ್ರೆಂಡ್ಸನ್ನ ತಬ್ಕಳತ್ತ. ಬಾವಿಯಿಂದ ಬಂದ ಕೈ ತಿರ್ಗ ವೊಂಟೋಯ್ತದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT