ಆಂಧ್ರ ಮಾದರಿ ಪರಿಹಾರ ನೀಡುವಂತೆ ಆಗ್ರಹ
ಶಿರಾ: ತಾಲ್ಲೂಕು ಬರಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೇಂಗಾ ತಾಕುಗಳಿಗೆ ಸೋಮವಾರ ಭೇಟಿ ನೀಡಿ ರೈತರಿಗೆ ಆಂಧ್ರ ಮಾದರಿಯಲ್ಲಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕಿನ ಹುಚ್ಚಗೀರನಹಳ್ಳಿ ಹಾಗೂ ರಂಗಾಪುರ ಗೇಟ್ಗಳಲ್ಲಿನ ಶೇಂಗಾ ತಾಕುಗಳ ಪರಿಶೀಲನೆ ನಡೆಸಿದ ನಂತರ ಸ್ಥಳದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಎಕರೆ ಶೇಂಗಾ ಬಿತ್ತನೆಗೆ ರೈತರು ಸುಮಾರು 10 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಆಂಧ್ರ ಮಾದರಿಯಲ್ಲಿ ಎಕರೆವಾರು ಪರಿಹಾರ ನೀಡುವಂತೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಸಂಪೂರ್ಣ ನಾಶವಾಗಿದ್ದು, ರೈತರು ಬಿತ್ತನೆಗೆ ಖರ್ಚು ಮಾಡಿದ ಹಣ ವಾಪಸ್ ಬಾರದೆ ನಷ್ಟ ಉಂಟಾಗಿದ್ದಲ್ಲದೆ ಸಾಲಗಾರರಾಗಿದ್ದಾರೆ. ಸರ್ಕಾರ ರೈತರ ಈ ಇಕ್ಕಟ್ಟಿನ ಪರಿಸ್ಥಿತಿ ಅರ್ಥ ಮಾಡಿಕೊಂಡು ಹೆಚ್ಚಿನ ಪರಿಹಾರ ನೀಡಬೇಕು. ಈ ಬಗ್ಗೆ ಸದನದಲ್ಲೂ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಉಪ ವಿಭಾಗಾಧಿಕಾರಿ ಶ್ಯಾಮಲಾ, ತಹಶೀಲ್ದಾರ್ ನಾಗಹನುಮಯ್ಯ, ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಅಲ್ಲಾ ಭಕಾಷ್ ಕೆ.ಪ್ಯಾರು, ಎಸ್.ಎಲ್.ರಂಗನಾಥ್, ಅಶೋಕ್, ಎನ್.ಸಿ.ದೊಡ್ಡಯ್ಯ ಇತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.