<p><strong>ಪಟ್ನಾ/ನವದೆಹಲಿ (ಪಿಟಿಐ): </strong>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿಟ್ಟಿರುವ ಒಕ್ಕೂಟ ವೇದಿಕೆ ರಚನೆ ಪ್ರಸ್ತಾವಕ್ಕೆ ತೆಲುಗುದೇಶಂ ಪಕ್ಷ (ಟಿಡಿಪಿ) ಸಹ ಗುರುವಾರ ಬೆಂಬಲ ವ್ಯಕ್ತಪಡಿಸಿದೆ.<br /> <br /> ಈ ನಡುವೆ, ಎನ್ಡಿಎ ಸಖ್ಯ ಕಡಿದುಕೊಳ್ಳುವ ವಿಷಯದಲ್ಲಿ ಜೆಡಿಯು ಸ್ಪಷ್ಟವಾಗಿ ಏನನ್ನೂ ಹೇಳದಿರುವುದು ಬಿಜೆಪಿಗೆ ನುಂಗಲಾರ ಬಿಸಿ ತುಪ್ಪವಾಗಿದೆ.<br /> <br /> `ಒಕ್ಕೂಟ ವೇದಿಕೆ ಸೇರುವುದು ನೂರಕ್ಕೆ ನೂರು ಸತ್ಯ. ಈ ಸಂಬಂಧ ನಿತೀಶ್ ಕುಮಾರ್ ಹಾಗೂ ನವೀನ್ ಪಟ್ನಾಯಕ್ ಮತ್ತಿತರ ಮುಖಂಡರ ಜತೆ ಸಂಪರ್ಕದಲ್ಲಿದ್ದೇನೆ' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೈದರಾಬಾದ್ನಲ್ಲಿ ಹೇಳಿದ್ದಾರೆ.<br /> <br /> `ಯುಪಿಎ ಹಾಗೂ ಎನ್ಡಿಎ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿವೆ. ಇದೇ ಹೊತ್ತಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿದ್ದು, ಮುಂದಿನ ಸರ್ಕಾರ ರಚಿಸಲಿವೆ' ಎಂದು ನಾಯ್ಡು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> <strong>ಕಳವಳಕಾರಿ ವಿದ್ಯಮಾನ</strong>: `ಮೈತ್ರಿಕೂಟದಲ್ಲಿನ ಇತ್ತೀಚಿನ ವಿದ್ಯಮಾನಗಳು ಕಳವಳಕಾರಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಯು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಡಿಯಂಥ ಪ್ರಾದೇಶಿಕ ಪಕ್ಷಗಳು ಒಂದಾದರೆ ಚೆನ್ನಾಗಿರುತ್ತದೆ' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.<br /> <br /> ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರಗಿಟ್ಟು ಒಕ್ಕೂಟ ವೇದಿಕೆ ರಚಿಸುವ ಪ್ರಸ್ತಾಪವನ್ನು ಜೆಡಿಯು ಬೆಂಬಲಿಸಿದೆ ಎಂಬ ವರದಿ ಕುರಿತು ಕೇಳಿದ ಪ್ರಶ್ನೆಗೆ, `ಮಮತಾ ಬ್ಯಾನರ್ಜಿ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದ್ದಾರೆ. ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳು ಒಂದೇ ರೀತಿಯ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನುವುದು ಅವರ ಅನಿಸಿಕೆ. ನಾವು ಆ ನಿಟ್ಟಿನಲ್ಲಿ ಒಟ್ಟಾಗಿ ಚಿಂತನೆ ನಡೆಸಬೇಕಿದೆ' ಎಂದರು.<br /> <br /> `ಎಲ್ಲರೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡರೆ ಪರ್ಯಾಯ ವೇದಿಕೆ ರಚಿಸಬಹುದು. ಇದು ಆರಂಭಿಕ ಹಂತವಷ್ಟೆ. ತೃತೀಯ ರಂಗ ರಚನೆಯಾಗಿದೆ ಎಂದು ಊಹಾಪೋಹ ಹಬ್ಬಿಸಬಾರದು' ಎಂದು ನಿತೀಶ್ ಹೇಳಿದರು.<br /> <br /> <strong>ಮನವೊಲಿಕೆ ಯತ್ನ</strong>: ಈ ನಡುವೆ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ ಹಾಗೂ ಮುಖ್ತರ್ ಅಬ್ಬಾಸ್ ನಕ್ವಿ ಅವರು ಗುರುವಾರ ದೆಹಲಿಯಲ್ಲಿ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದರು.<br /> ಬಿಜೆಪಿ ಮುಖಂಡರು ಹಾಗೂ ಯಾದವ್ ನಡುವಿನ ಮಾತುಕತೆಯಲ್ಲಿ `ಸಕಾರಾತ್ಮಕ ಬೆಳವಣಿಗೆ' ಕಂಡುಬಂದಿಲ್ಲ ಎಂದು ಮೂಲಗಳು ಹೇಳಿವೆ.<br /> <br /> ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, `ಸದ್ಯಕ್ಕಂತೂ ಎನ್ಡಿಎ ಅಸ್ತಿತ್ವದಲ್ಲಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ' ಎಂದರು.<br /> <br /> ಬಿಜೆಪಿ ಜತೆಗಿನ ಸಖ್ಯ ಕಡಿದುಕೊಳ್ಳುವ ಯೋಚನೆಯನ್ನು ಕೈಬಿಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ `ಎರಡೂ ಪಕ್ಷಗಳ ನಡುವೆ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೂ ಸಮಾಲೋಚನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸಭೆ ಕರೆಯುತ್ತೇವೆ. ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನುಡಿದರು.<br /> <br /> ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಜೆಡಿಯು ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, `ನಾನೊಬ್ಬನೇ ನಿರ್ಧಾರಕ್ಕೆ ಬರಲಾಗದು' ಎಂದು ಜಾಣತನದಿಂದ ಉತ್ತರಿಸಿದರು.<br /> <br /> <strong>`ಮೈತ್ರಿ ಕುದುರಿಸಲು ಮಮತಾ ಚೌಕಾಸಿ'</strong><br /> <strong>ಕೋಲ್ಕತ್ತ (ಪಿಟಿಐ</strong>): ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಮೈತ್ರಿ ಕುದುರಿಸಲು ಚೌಕಾಸಿ ನಡೆಸುವುದಕ್ಕಾಗಿ ಮಮತಾ ಬ್ಯಾನರ್ಜಿ ಅವರು ಒಕ್ಕೂಟ ವೇದಿಕೆ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ಎಡಪಕ್ಷಗಳು ಟೀಕಿಸಿವೆ.<br /> <br /> `ಮಮತಾ ಅವರ ಈ ಹಿಂದಿನ ರಾಜಕೀಯ ನಡೆ ಎಲ್ಲರಿಗೂ ಗೊತ್ತಿದೆ. ಅವರು ಬೇರೆ ಪಕ್ಷಗಳ ಅನಿಸಿಕೆಗಳಿಗೆ ಕವಡೆ ಕಿಮ್ಮತ್ತು ನೀಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಹಾಗಾಗಿ ಒಕ್ಕೂಟ ವೇದಿಕೆ ಯಶಸ್ವಿಯಾಗುವುದಿಲ್ಲ' ಎಂದು ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಸೂರ್ಯಕಾಂತ ಮಿಶ್ರಾ ಹೇಳಿದ್ದಾರೆ.<br /> <br /> ಮಿಶ್ರಾ ಹೇಳಿಕೆಗೆ ದನಿಗೂಡಿಸಿರುವ ಸಿಪಿಐ ಮುಖಂಡ ಎ.ಬಿ.ಬರ್ದನ್, `ಕೇಂದ್ರದಲ್ಲಿ ಅಧಿಕಾರದ ಲಾಭ ಪಡೆದುಕೊಳ್ಳುವುದಕ್ಕೆ ಕೆಲವು ಮುಖ್ಯಮಂತ್ರಿಗಳು ಮಾತ್ರ ಮುಂದೆ ಬಂದಿದ್ದಾರೆ. ಅವರ ಈ ಆಯ್ಕೆ ಸೂಕ್ತವಾಗಿಲ್ಲ' ಎಂದಿದ್ದಾರೆ.<br /> <br /> <strong>ಲಖನೌ ವರದಿ:</strong> `ಲೋಕಸಭೆ ಚುನಾವಣೆಗೂ ಮುನ್ನ ತೃತೀಯ ರಂಗ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇಲ್ಲ' ಎಂದು ಸಮಾಜವಾದಿ ಪಕ್ಷ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ/ನವದೆಹಲಿ (ಪಿಟಿಐ): </strong>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿಟ್ಟಿರುವ ಒಕ್ಕೂಟ ವೇದಿಕೆ ರಚನೆ ಪ್ರಸ್ತಾವಕ್ಕೆ ತೆಲುಗುದೇಶಂ ಪಕ್ಷ (ಟಿಡಿಪಿ) ಸಹ ಗುರುವಾರ ಬೆಂಬಲ ವ್ಯಕ್ತಪಡಿಸಿದೆ.<br /> <br /> ಈ ನಡುವೆ, ಎನ್ಡಿಎ ಸಖ್ಯ ಕಡಿದುಕೊಳ್ಳುವ ವಿಷಯದಲ್ಲಿ ಜೆಡಿಯು ಸ್ಪಷ್ಟವಾಗಿ ಏನನ್ನೂ ಹೇಳದಿರುವುದು ಬಿಜೆಪಿಗೆ ನುಂಗಲಾರ ಬಿಸಿ ತುಪ್ಪವಾಗಿದೆ.<br /> <br /> `ಒಕ್ಕೂಟ ವೇದಿಕೆ ಸೇರುವುದು ನೂರಕ್ಕೆ ನೂರು ಸತ್ಯ. ಈ ಸಂಬಂಧ ನಿತೀಶ್ ಕುಮಾರ್ ಹಾಗೂ ನವೀನ್ ಪಟ್ನಾಯಕ್ ಮತ್ತಿತರ ಮುಖಂಡರ ಜತೆ ಸಂಪರ್ಕದಲ್ಲಿದ್ದೇನೆ' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೈದರಾಬಾದ್ನಲ್ಲಿ ಹೇಳಿದ್ದಾರೆ.<br /> <br /> `ಯುಪಿಎ ಹಾಗೂ ಎನ್ಡಿಎ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿವೆ. ಇದೇ ಹೊತ್ತಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿದ್ದು, ಮುಂದಿನ ಸರ್ಕಾರ ರಚಿಸಲಿವೆ' ಎಂದು ನಾಯ್ಡು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> <strong>ಕಳವಳಕಾರಿ ವಿದ್ಯಮಾನ</strong>: `ಮೈತ್ರಿಕೂಟದಲ್ಲಿನ ಇತ್ತೀಚಿನ ವಿದ್ಯಮಾನಗಳು ಕಳವಳಕಾರಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಯು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಡಿಯಂಥ ಪ್ರಾದೇಶಿಕ ಪಕ್ಷಗಳು ಒಂದಾದರೆ ಚೆನ್ನಾಗಿರುತ್ತದೆ' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.<br /> <br /> ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೊರಗಿಟ್ಟು ಒಕ್ಕೂಟ ವೇದಿಕೆ ರಚಿಸುವ ಪ್ರಸ್ತಾಪವನ್ನು ಜೆಡಿಯು ಬೆಂಬಲಿಸಿದೆ ಎಂಬ ವರದಿ ಕುರಿತು ಕೇಳಿದ ಪ್ರಶ್ನೆಗೆ, `ಮಮತಾ ಬ್ಯಾನರ್ಜಿ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದ್ದಾರೆ. ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳು ಒಂದೇ ರೀತಿಯ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನುವುದು ಅವರ ಅನಿಸಿಕೆ. ನಾವು ಆ ನಿಟ್ಟಿನಲ್ಲಿ ಒಟ್ಟಾಗಿ ಚಿಂತನೆ ನಡೆಸಬೇಕಿದೆ' ಎಂದರು.<br /> <br /> `ಎಲ್ಲರೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡರೆ ಪರ್ಯಾಯ ವೇದಿಕೆ ರಚಿಸಬಹುದು. ಇದು ಆರಂಭಿಕ ಹಂತವಷ್ಟೆ. ತೃತೀಯ ರಂಗ ರಚನೆಯಾಗಿದೆ ಎಂದು ಊಹಾಪೋಹ ಹಬ್ಬಿಸಬಾರದು' ಎಂದು ನಿತೀಶ್ ಹೇಳಿದರು.<br /> <br /> <strong>ಮನವೊಲಿಕೆ ಯತ್ನ</strong>: ಈ ನಡುವೆ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ ಹಾಗೂ ಮುಖ್ತರ್ ಅಬ್ಬಾಸ್ ನಕ್ವಿ ಅವರು ಗುರುವಾರ ದೆಹಲಿಯಲ್ಲಿ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದರು.<br /> ಬಿಜೆಪಿ ಮುಖಂಡರು ಹಾಗೂ ಯಾದವ್ ನಡುವಿನ ಮಾತುಕತೆಯಲ್ಲಿ `ಸಕಾರಾತ್ಮಕ ಬೆಳವಣಿಗೆ' ಕಂಡುಬಂದಿಲ್ಲ ಎಂದು ಮೂಲಗಳು ಹೇಳಿವೆ.<br /> <br /> ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, `ಸದ್ಯಕ್ಕಂತೂ ಎನ್ಡಿಎ ಅಸ್ತಿತ್ವದಲ್ಲಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ' ಎಂದರು.<br /> <br /> ಬಿಜೆಪಿ ಜತೆಗಿನ ಸಖ್ಯ ಕಡಿದುಕೊಳ್ಳುವ ಯೋಚನೆಯನ್ನು ಕೈಬಿಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ `ಎರಡೂ ಪಕ್ಷಗಳ ನಡುವೆ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರೊಂದಿಗೂ ಸಮಾಲೋಚನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸಭೆ ಕರೆಯುತ್ತೇವೆ. ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನುಡಿದರು.<br /> <br /> ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಜೆಡಿಯು ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, `ನಾನೊಬ್ಬನೇ ನಿರ್ಧಾರಕ್ಕೆ ಬರಲಾಗದು' ಎಂದು ಜಾಣತನದಿಂದ ಉತ್ತರಿಸಿದರು.<br /> <br /> <strong>`ಮೈತ್ರಿ ಕುದುರಿಸಲು ಮಮತಾ ಚೌಕಾಸಿ'</strong><br /> <strong>ಕೋಲ್ಕತ್ತ (ಪಿಟಿಐ</strong>): ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಮೈತ್ರಿ ಕುದುರಿಸಲು ಚೌಕಾಸಿ ನಡೆಸುವುದಕ್ಕಾಗಿ ಮಮತಾ ಬ್ಯಾನರ್ಜಿ ಅವರು ಒಕ್ಕೂಟ ವೇದಿಕೆ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ಎಡಪಕ್ಷಗಳು ಟೀಕಿಸಿವೆ.<br /> <br /> `ಮಮತಾ ಅವರ ಈ ಹಿಂದಿನ ರಾಜಕೀಯ ನಡೆ ಎಲ್ಲರಿಗೂ ಗೊತ್ತಿದೆ. ಅವರು ಬೇರೆ ಪಕ್ಷಗಳ ಅನಿಸಿಕೆಗಳಿಗೆ ಕವಡೆ ಕಿಮ್ಮತ್ತು ನೀಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಹಾಗಾಗಿ ಒಕ್ಕೂಟ ವೇದಿಕೆ ಯಶಸ್ವಿಯಾಗುವುದಿಲ್ಲ' ಎಂದು ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಸೂರ್ಯಕಾಂತ ಮಿಶ್ರಾ ಹೇಳಿದ್ದಾರೆ.<br /> <br /> ಮಿಶ್ರಾ ಹೇಳಿಕೆಗೆ ದನಿಗೂಡಿಸಿರುವ ಸಿಪಿಐ ಮುಖಂಡ ಎ.ಬಿ.ಬರ್ದನ್, `ಕೇಂದ್ರದಲ್ಲಿ ಅಧಿಕಾರದ ಲಾಭ ಪಡೆದುಕೊಳ್ಳುವುದಕ್ಕೆ ಕೆಲವು ಮುಖ್ಯಮಂತ್ರಿಗಳು ಮಾತ್ರ ಮುಂದೆ ಬಂದಿದ್ದಾರೆ. ಅವರ ಈ ಆಯ್ಕೆ ಸೂಕ್ತವಾಗಿಲ್ಲ' ಎಂದಿದ್ದಾರೆ.<br /> <br /> <strong>ಲಖನೌ ವರದಿ:</strong> `ಲೋಕಸಭೆ ಚುನಾವಣೆಗೂ ಮುನ್ನ ತೃತೀಯ ರಂಗ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇಲ್ಲ' ಎಂದು ಸಮಾಜವಾದಿ ಪಕ್ಷ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>