ನರ್ಸರಿ ವಿದ್ಯಾರ್ಥಿಗೆ ಮೋದಿ ಹೋಲಿಸಿದ ಖುರ್ಷಿದ್

ಫರೂಖಾಬಾದ್/ಉತ್ತರಪ್ರದೇಶ (ಪಿಟಿಐ): 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಿರ್ದೋಷಿ ಎಂದಿರುವುದು ನರ್ಸರಿ ವಿದ್ಯಾರ್ಥಿಗೆ ಒಳ್ಳೆಯ ಅಂಕ ನೀಡಿದಂತೆ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಟೀಕಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೋಷಿ ಎಂದು ಹೇಳಿದ್ದನ್ನೇ ಪಿಎಚ್ಡಿ ಎಂದು ಭಾವಿಸಿರುವ ಮೋದಿ, ಅದನ್ನೇ ದೊಡ್ಡದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಖುರ್ಷಿದ್ ವ್ಯಂಗ್ಯವಾಡಿದ್ದಾರೆ.
ಗುಜರಾತ್ನಲ್ಲಿ ಕೋಮು ಗಲಭೆ ನಡೆದಾಗ ಮೋದಿ ಮುಖ್ಯಮಂತ್ರಿ ಆಗಿದ್ದರು. ಅವರ ಸಂಪುಟ ಸಹೋದ್ಯೋಗಿ ಆಗಿದ್ದ ಮಾಯಾ ಕೊಡ್ನಾನಿ ಸೇರಿದಂತೆ 170 ಜನರಿಗೆ ಜೀವಾವಧಿ ಶಿಕ್ಷೆ ಆಗಿದೆ ಎನ್ನುವುದನ್ನು ಮರೆಯಬಾರದು ಎಂದು ಸಚಿವರು ಹೇಳಿದ್ದಾರೆ.
ವಿಕಿಲೀಕ್್ಸ ಸ್ಥಾಪಕ ಜೂಲಿಯನ್ ಅಸಾಂಜ್ ಅವರು ಮೋದಿ ಭ್ರಷ್ಟರಲ್ಲ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ ಖುರ್ಷಿದ್, ‘ಅಷ್ಟೊಂದು ಆತ್ಮವಿಶ್ವಾಸವಿರುವವರು (ಮೋದಿ) ಎಲ್ಲರಿಂದಲೂ ಏಕೆ ಬೆಂಬಲ ಯಾಚಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
ಎಂಟು ವರ್ಷಗಳ ಹಿಂದೆ ಇದೇ ವಿಕಿಲೀಕ್್ಸ, ‘ಮೋದಿ ನಂಬಿಕೆಗೆ ಅನರ್ಹ ವ್ಯಕ್ತಿ ಮತ್ತು ಬೆದರಿಕೆಯ ಮೂಲಕ ಆಡಳಿತ ನಡೆಸುತ್ತಿದ್ದಾರೆ’ ಎಂದಾಗ
ಮೋದಿ, ತಮಗೆ ಯಾರೂ ಪ್ರಮಾಣಪತ್ರ ನೀಡುವುದು ಬೇಡ ಎಂದಿದ್ದನ್ನು ಖುರ್ಷಿದ್ ಇಲ್ಲಿ ಉಲ್ಲೇಖಿಸಿದ್ದಾರೆ.
ಅಸಂಬದ್ಧ ಹೇಳಿಕೆ– ಬಿಜೆಪಿ (ನವದೆಹಲಿ ವರದಿ): ಮೋದಿ ಅವರ ಬಗ್ಗೆ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ನೀಡಿದ ಹೇಳಿಕೆ ಸಂಪೂರ್ಣ ಅಸಂಬದ್ಧದಿಂದ ಕೂಡಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಬಗ್ಗೆ ಖುರ್ಷಿದ್ ಅಸಂಬದ್ಧವಾಗಿ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಳ ಹಂತದ ಮತ್ತು ಉನ್ನತ ಮಟ್ಟದ ನ್ಯಾಯಾಲಯಗಳಿಗೆ ಅವುಗಳದೇ ಆದಘನತೆ ಗೌರವಗಳಿವೆ. ಆದ್ದರಿಂದ ಅವುಗಳ ಬಗ್ಗೆ ಅಗೌರವದಿಂದ ಮಾತನಾಡುವುದು ಅಸಂಬದ್ಧವಾಗುತ್ತದೆ ಎಂದು ಜಾವಡೇಕರ್ ಹೇಳಿದ್ದಾರೆ.
2002ರ ಕೋಮು ಗಲಭೆಯಲ್ಲಿ ಮೋದಿ ಅವರ ಪಾತ್ರವಿಲ್ಲ ಎಂದು ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ ಹೇಳಿದ್ದರೂ ತೀವ್ರ ಹತಾಶೆಗೆ ಒಳಗಾಗಿರುವ ಕಾಂಗ್ರೆಸ್, ಗುಜರಾತ್ ಗಲಭೆಯ ವಿಚಾರವನ್ನು ಜೀವಂತವಾಗಿರಲು ಸದಾ ಅದನ್ನೇ ಜಪಿಸುತ್ತಿದೆ ಎಂದು ಜಾವಡೇಕರ್ ಟೀಕಿಸಿದ್ದಾರೆ.
ಗುಜರಾತ್ ಮುಸ್ಲಿಮರು ಮತ್ತು ಇತರರು ಕೋಮು ಗಲಭೆಯನ್ನು ಮರೆತಿದ್ದಾರೆ. ಆದರೆ ಖುರ್ಷಿದ್ ಹತಾಶರಾಗಿ ನ್ಯಾಯಾಂಗದ ಘನತೆಗೆ ಚ್ಯುತಿ ತರುವ ರೀತಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರ ಮುಖಂಡರು ಹಾಗೂ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್, ಗುಜರಾತ್ ಗಲಭೆಯನ್ನು ಜೀವಂತವಾಗಿ ಇರಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.