ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ ನಿಲ್ಲುವಳಲ್ಲ..

Last Updated 11 ಜೂನ್ 2016, 19:30 IST
ಅಕ್ಷರ ಗಾತ್ರ

ಅಸ್ಮಿತಾ
ಲೇ:
ದೀಪಾ ಗಿರೀಶ್
ಪ್ರ: ಅನಿಕೇತನ, ‘ಚೈತ್ರ ಸೌರಭ’, ನಂ.122, 2ನೇ ಮುಖ್ಯ ರಸ್ತೆ, 4ನೇ ಕ್ರಾಸ್, 10ನೇ ಬ್ಲಾಕ್, ನಾಗರಭಾವಿ 2ನೇ ಹಂತ, ಬೆಂಗಳೂರು: 560 072

‘ನಾ ನಿಲ್ಲುವಳಲ್ಲ’– ಕಿವಿಯೊಳಗೆ ಗುಯ್‌ಗುಡುತ್ತಿರುವ ಹಳೆಯ ದನಿಗಳ ಕರುಳ ಕೊಯ್ದು, ನಿಸರ್ಗವ ಧೇನಿಸಿ ಕೇಳಿಸಿಕೊಂಡರೆ ಕೇಳುವ ದನಿ ಇದೇ ಇರಬಹುದೇನೋ.

ಹರಿಯುತ್ತಲೇ ಇರುವ ಕಾವ್ಯ ಪ್ರವಾಹದೊಂದಿಗೆ, ನಿರಂತರವಾಗಿ ಆಗುತ್ತಲೇ ಇರುವ ಲೋಕವಾಸ್ತವದ ಜೊತೆಗೆ ನಡೆಯುವ, ನಡೆಯುತ್ತ ಅಲ್ಲಲ್ಲಿ ಎಡವುವ, ಮತ್ತೆ ತಡವುತ್ತ ತಡವುತ್ತ ಅವಳ ತುದಿಬೆರಳ ಹಿಡಿವ ಆಟದಂತಿರುವ ಕಾವ್ಯ ಪ್ರಯತ್ನ ಈ ಕವಯಿತ್ರಿಯದು.

ಬರೆಯುತ್ತಿರುವಂತೆಯೇ ಅಳಿಸುವ ಪ್ರಕ್ರಿಯೆಯೊಂದು ಜೀವ ತಳೆಯಬಲ್ಲುದಾದರೆ ಯಾನ ನಿಸೂರಾಗಿ ಸಾಗಬಲ್ಲುದು. ತಾವು ಬರೆದದ್ದೆಲ್ಲ ಎಂದಿಗೂ ಉಳಿಯಬೇಕೆನ್ನುವ ಮೊಂಡಾಟದ ಕವಿಗಳೇ ಸುತ್ತ ತುಂಬಿರುವಾಗ ಇಂತಹ ಪ್ರಯತ್ನಗಳು ಹಿತವಾಗಿ ಮುಟ್ಟುತ್ತವೆ:

ಸಮಾಧಿಯ ಮುಂದೆ
ಬಿದ್ದು ಹೊರಳಾಡಿ
ರೋದಿಸುತ್ತಿದ್ದಾಳೆ
ಪಾಪದ ಹುಡುಗಿ

ಎಷ್ಟೆಲ್ಲ ಕನಸು
ಜೊತೆಯಲ್ಲೇ ಕಂಡೆವು
ಏನೆಲ್ಲಾ ನೋವು
ಜೊತೆಯಾಗೇ ಉಂಡೆವು
ಗೋರಿ ಮೇಲಿನ ಹೂವ
ಸರಿಸಿ ಸರಿಸಿ ಮುತ್ತಿಕ್ಕುತ್ತಿದ್ದಾಳೆ
ಹೂವಿನೆಣದ ವಾಸನೆಗೆ
ರೋಸುತ್ತಿದ್ದಾಳೆ

....ಒಳಗಿಂದ ಅವಳೆಂದಳು
ಇನ್ನೆಷ್ಟು ಹಲುಬುತ್ತೀ
ಬಾ ಒಳಗೆ ಕತ್ತಲಾಯಿತು
ತನ್ನಾತ್ಮವನು ಸಂತೈಸಿದಳು...
(ಸಾಂತ್ವನ)

ಹೊಸ ಪೀಳಿಗೆಯ ಕಾವ್ಯ ಸಂವೇದನೆಗೆ ತಕ್ಷಣದ ಪ್ರಕಾಶವೂ ಪ್ರತಿಕ್ರಿಯೆಯೂ ಸಿಗಬಲ್ಲ ಅವಕಾಶಗಳಿರುವ ಕಾಲ ಇದು. ಎಲ್ಲವನ್ನೂ ಸೊನ್ನೆ–ಒಂದರ ಸಾಂಗತ್ಯಕ್ಕೆ ಒಳಪಡಿಸಿ ಕರಗಿಸಿ ಮತ್ತೆ ಅದನ್ನೇ ನಮ್ಮ ಇಂದ್ರಿಯ ಗೋಚರ ಗಾತ್ರಕ್ಕೆ ಹಿಗ್ಗಲಿಸುವ ಹೊಸ ಮೀಮಾಂಸೆಯನ್ನು ಅಳವಡಿಸಿಕೊಂಡ ಕವಿಗಳು ಮತ್ತು ಓದುಗರ ನಡುವೆ ಕಾವ್ಯ ಪ್ರಕ್ರಿಯೆ ನಡೆಯುತ್ತಿದೆ.

ಹೊಸ ಮಾಧ್ಯಮಗಳನ್ನು ‘ಯಾರ ಹಂಗೇನು’ ಎಂಬಂತೆ ಅವರು ಸಂಭ್ರಮದಿಂದ ಬಳಸುತ್ತಿದ್ದಾರೆ ಅಥವಾ ಬಳಸಿ ಸಂಭ್ರಮಿಸುತ್ತಿದ್ದಾರೆ. ಇದು ಎಲ್ಲ ಅಭಿವ್ಯಕ್ತ ಪ್ರಪಂಚವನ್ನು ‘ಸೊನ್ನೆ–ಒಂದಕ್ಕೆ’ ಇಳಿಸುವ ಸರ್ವ–ನಿರಸನವೇ ಆಗಿದ್ದರೆ ಆತಂಕಕಾರಿಯೇನಲ್ಲ ಎನಿಸುತ್ತದೆ.

ಆದರೆ ನಿರಸನದ ಮುಂದ? ಎನ್ನುವ ಪ್ರಶ್ನೆಯನ್ನು ಅಷ್ಟು ಸರಳವಾಗಿ ಇದಿರಾಗಲು ಸಾಧ್ಯವಿಲ್ಲ. ಎಲ್ಲವನ್ನು ವ್ಯಕ್ತಿಕೇಂದ್ರಿತ ನೆಲೆಗೆ ತಂದು ಅಲ್ಲೇ ನಿಲ್ಲಿಸಿಕೊಂಡಾಗ ಸಂಬಂಧದ ಜಗತ್ತೇ ಬಿದ್ದು ಹೋಗುತ್ತದೆ.

ಚರಿತ್ರೆಯಲ್ಲಿನ ಅನೇಕ ದಾರ್ಶನಿಕರು, ಮಹಾಕವಿಗಳು ಈ ಪ್ರಶ್ನೆಯನ್ನು ಜೀವಪರವಾಗಿ, ನಿಸರ್ಗಪರವಾಗಿ ಇದಿರಾಗಿದ್ದಾರೆ. ಇನ್ನು ಕೆಲವರು ಯುದ್ಧಕ್ರೌರ್ಯ, ಧರ್ಮಕ್ರೌರ್ಯ, ರಾಜ್ಯಕ್ರೌರ್ಯದ ಪರವಾಗಿ ಇದಿರಾಗಿದ್ದಾರೆ.

ಇಂತಹ ಗಂಭೀರ ತಾತ್ವಿಕ ಪ್ರಶ್ನೆಗಳನ್ನು ಹೊಸ ಪೀಳಿಗೆಯ ಕವಿಗಳು  ಮುನ್ನೆಲೆಗೆ ತಂದುಕೊಳ್ಳಬೇಕಾಗುತ್ತದೆ. ಅಗತ್ಯವೋ ಅನಗತ್ಯವೋ ಅಂತೂ ವೇಗಕ್ಕೆ ಸಿಕ್ಕಿರುವ ಒಂದು ವರ್ಗದ ಅಭಿವ್ಯಕ್ತಿಯನ್ನು ಗಮನಿಸಬೇಕಾಗುತ್ತದೆ.

ಈ ಪ್ರಶ್ನೆಗಳು ದೀಪಾ ಗಿರೀಶ್ ಕಾವ್ಯ ಪ್ರಯತ್ನಕ್ಕೆ ಮಾತ್ರವಲ್ಲ, ಬೇರೆ ಬೇರೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಸಮಾನ ಪ್ರಯತ್ನಗಳನ್ನು ಗಮನಿಸಿದಾಗ ಇದಿರಿಗೆ ಬರುತ್ತವೆ. ಅಂತಹ ಕೆಲವು ಬಿಕ್ಕಟ್ಟಿನ ನೋಟಗಳನ್ನು ಇಲ್ಲಿಯ ಕೆಲವು ಕಾವ್ಯ ತುಣುಕುಗಳು ಹೊಳೆಯಿಸುತ್ತವೆ:

ಸಿಹಿಯೊಡಲ
ಯಾವನದಿಯೂ ಕಣ್ಣೀರಾಗದೇ
ಕಡಲ ಸೇರಿದ್ದರೆ
ಅವನ್ಯಾಕೆ ಉಪ್ಪಾಗುತ್ತಿದ್ದ?

ನಾ ಬರೆದುಕೊಳ್ಳುತ್ತಲೇ ಇದ್ದೆ
ನೀ ಅಳಿಸುತ್ತಲೇ ಹೋದೆ
ಎಷ್ಟೆಂದರೂ
ನೀ ಕಡಲು
ನಾ ಮಳಲು

ನಾ ಕಡಲ ಮೇಲೂ ನಡೆಯಬಲ್ಲೆ
ಅದಕ್ಕೆ ನನ್ನ ತೇಲಿಸುವ ಗುಣವಿಲ್ಲವಷ್ಟೇ
ನನ್ನ ಅಹಂಭಾರಕ್ಕೆ
ಕಡಲು ನಕ್ಕು

ನುಂಗಿತು
ಕಡಲೆಲ್ಲ ಅಲೆ ಉಕ್ಕುವುದು
ನನ್ನ ಸಲುವಾಗೇ
ನಾನಿಲ್ಲದ ಹೊತ್ತು
ಅಲೆಯುಕ್ಕುವುದೋ
ಇಲ್ಲವೋ ನೋಡಲು

ಸದ್ಯ, ನಾನಿರುವುದಿಲ್ಲ!!
ಕಡಲಿನ ಅಗಾಧತೆಯನ್ನು ಕಂಡರೂ ಅದರಲ್ಲಿ ಕರಗದೆ ಉಳಿದು ಕಾಣಿಸಿಕೊಡುವ ‘ನಾನು’ ಕೋನ್‌ಗಳಂತಹ ರಚನೆಗಳಾಗಿವೆ. ಇನ್ನು ಕೆಲವು ರಚನೆಗಳಂತೂ ಹುಟ್ಟುತ್ತಲೇ ಕುಚ್ಚು ಕುಲಾವಿ ಕಟ್ಟಿಕೊಂಡು ತೇಲುತ್ತ ಬರುವ ಎಕ್ಕದ ಬೀಜದಂತೆ, ಮಿರ್ಜಾ ಗಾಲಿಬನ ಗಜಲ್‌ಗಳಿಂದ ಬೇರ್ಪಟ್ಟು ತೇಲುತ್ತ ಬಂದ ದ್ವಿಪದಿಗಳಂತೆಯೂ ಇದಿರಾಗುತ್ತವೆ.

ಬಿಟ್ಟು ಬಂದ ನನ್ನ
ಪಾದದಚ್ಚಿನ ಬಿರುಕಿಗೆ
ಮುಲಾಮು ತಿಕ್ಕುತ್ತಿರಬೇಕು
ಅವನು ಈ ಹೊತ್ತಿಗೆ

ಸುಖಾ ಸುಮ್ಮನೆ
ತುಟಿ ಅದುರುತ್ತದೆ
ಛೇ... ಬಂದೀಯ ಜೋಕೆ
ಇನ್ನೊಮ್ಮೆ ಕನಸಿಗೆ

ತಮ್ಮ ಸಂಕಲನವನ್ನು ಇದೊಂದು ಅಸ್ಮಿತೆಯ ಹುಡುಕಾಟವೆಂದೇ ಕವಯಿತ್ರಿ ಕರೆದುಕೊಂಡಿದ್ದಾರೆ. ವಿಳಾಸವಿಲ್ಲದ ಅನೇಕ ದನಿಗಳು ತಮ್ಮನ್ನು ಕಂಡುಕೊಳ್ಳುವ, ತಮ್ಮನ್ನು ಇರುವಂತೆ ಕಾಣಿರೆಂದು ಹಂಬಲಿಸುವ ಅಸ್ಮಿತೆಯ ಹುಡುಕಾಟಗಳು ಇಲ್ಲಿನ ಕವನಗಳಲ್ಲಿ ಅನುರಣಿಸಿವೆ.

ಈವರೆಗೆ ದನಿಯಿಲ್ಲದವರು ಮಾತನಾಡಿದರೆ ಅವುಗಳನ್ನು ಹೊರಲಾರದೆ ನಮ್ಮ ಪಾರಂಪರಿಕ ರೂಪಕಜಗತ್ತು ಪರದಾಡುತ್ತದೆ. ವಿಶೇಷವೆಂದರೆ ಗಂಡಸರ ಈವರೆಗಿನ ಕಾವ್ಯ ಮೀಮಾಂಸೆಯ ಪರಿಕರಗಳನ್ನು ಇಡಿಯಾಗಿ ಅಲ್ಲಿಟ್ಟು ಇತ್ತೀಚಿನ ದಶಕಗಳಲ್ಲಿ ಕವಯಿತ್ರಿಯರು– ವಿಶೇಷವಾಗಿ ಸವಿತಾ ನಾಗಭೂಷಣ, ಲಲಿತಾ ಸಿದ್ಧಬಸವಯ್ಯ,

ವಿನಯಾ ವಕ್ಕುಂದ, ಎಚ್.ಎಲ್. ಪುಷ್ಪ,  ಮುಂತಾದವರು ಮಾಡುತ್ತಿರುವ ಗಂಭೀರ ಪ್ರಯತ್ನಗಳನ್ನು ಹೊಸ ಬೆಳಕಿನಲ್ಲಿ ಓದಬೇಕಿದೆ. ಹೊಸ ಮಾಧ್ಯಮಗಳನ್ನು ರೂಢಿಸಿಕೊಂಡಿರುವ ಇತ್ತೀಚಿನ ಪೀಳಿಗೆಯ ಅಭಿವ್ಯಕ್ತಿಯನ್ನು ಇದಿರಾಗಲು ಸಹ ಅನೇಕ ಇಕ್ಕಟ್ಟುಗಳು ಸಹಜವಾಗಿ ಇವೆ.

ದೀಪಾ ಗಿರೀಶ್ ಅವರ ಕವನಸಂಕಲನವು ಇಂತಹ ಅನೇಕ  ಸಂಗತಿಗಳನ್ನು ಮುನ್ನೆಲೆಗೆ ತರುತ್ತದೆ. ರಂಗಚಟುವಟಿಕೆಗಳಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿರುವ ದೀಪಾ, ಗಾರ್ಮೆಂಟ್‌ಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಹೆಣ್ಣುಮಕ್ಕಳ ಹಿತಕ್ಕಾಗಿ ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವವರು.

ನಮ್ಮ ಸುತ್ತಲಿನ ಮಹಿಳಾ ನ್ಯಾಯಾನ್ಯಾಯದ ಸೂಕ್ಷ್ಮಗಳನ್ನು ದಕ್ಕಿಸಿಕೊಂಡವರು. ಎಲ್ಲ ಕಳಕೊಂಡವರ ಪರವಾಗಿ ನುಡಿವ ದನಿಗೆ ಇರುವ ಸಾಂತ್ವನದ ಗುಣ ಈ ಕವನಸಂಕಲನದ ಉದ್ದಕ್ಕೂ ಅನುರಣಿಸಿದೆ. ಮಲಾಲ ಬಗೆಗಿನ ಕವನದ ಕೆಲವು ಸಾಲುಗಳನ್ನು ಇಲ್ಲಿ ಹೇಳಬೇಕು:

ನಿಮ್ಮಂತೆ ನಾವೂ
ನೆತ್ತರ ಹರಿವಿಗೆ ಕಾರಣರಾಗಿದ್ದೇವೆ
ಆದರೆ ನಮ್ಮ ಅಮ್ಮಂದಿರಿಗೆ
ಆ ಬಗ್ಗೆ ಎಂದೂ ಗೌರವ ಮೂಡುವಂತೆ
ಬದುಕಿದ್ದೇವೆ
ಅವರು ಹೆರುವಾಗ ಹರಿಸಿದ ರಕ್ತ
ಸಾರ್ಥಕಗೊಳಿಸಿದ್ದೇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT