ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ?

ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದ ನಾಗಶೆಟ್ಟಿಕೊಪ್ಪ ಗ್ರಾಮದ ಸಿಟಿಎಸ್ ಸಂಖ್ಯೆ 377ರಲ್ಲಿ ವಸತಿ ಅಪಾರ್ಟ್ಮೆಂಟ್ವೊಂದು ನಿರ್ಮಾಣವಾಗುತ್ತಿದೆ. ಕಟ್ಟಡ ಪರವಾನಗಿ ಪಡೆದ ನಕ್ಷೆಯನುಸಾರ ರಸ್ತೆ ಇಲ್ಲದಿರುವ ಬಗ್ಗೆ ನೆರೆ–ಹೊರೆಯವರಿಂದ ದೂರು ಬಂದಿದ್ದರಿಂದ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸುವಂತೆ ಪತ್ರೇಶ ಎಂಬುವರಿಗೆ ಮಹಾನಗರ ಪಾಲಿಕೆ ಕಳೆದ ಏಪ್ರಿಲ್ 28ರಂದು ಆದೇಶ ನೀಡಿದೆ. ಆದರೆ, ಗುರುವಾರವೂ ವಸತಿ ಅಪಾರ್ಟ್ಮೆಂಟ್ ನಿರ್ಮಾಣ ಕಾರ್ಯ ನಿರಾತಂಕವಾಗಿ ಸಾಗಿತ್ತು.
‘ಕಟ್ಟಡದ ಮುಂದೆ 9 ಮೀಟರ್ ಅಗಲದ ರಸ್ತೆ ಇದೆ ಎಂದು ನಕ್ಷೆಯಲ್ಲಿ ತೋರಿಸಿದ ಪತ್ರೇಶ ಅವರು, ಕಟ್ಟಡ ನಿರ್ಮಾಣಕ್ಕೆ ಅನುಮತಿ ತೆಗೆದುಕೊಂಡಿದ್ದಾರೆ. ಆದರೆ, ಕಟ್ಟಡದ ಮುಂದಿರುವ ರಸ್ತೆ 3 ಮೀಟರ್ ಅಗಲವೂ ಇಲ್ಲ. ಈ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣವಾದರೆ, ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ಗಳಾಗಲಿ, ಅಗ್ನಿಶಾಮಕವಾಹನಗಳಾಗಲಿ ಈ ರಸ್ತೆಯಲ್ಲಿ ಬರಲು ಸಾಧ್ಯವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳೀಯರ ಪರವಾಗಿ ಪಾಲಿಕೆಗೆ ತಕರಾರು ಸಲ್ಲಿಸಿದ್ದೆ’ ಎನ್ನುತ್ತಾರೆ ಕೇಶ್ವಾಪುರ ನಿವಾಸಿ ಮನಿಯಾರ್ ಶೇಖ್.
‘ತಕರಾರು ಸಲ್ಲಿಸಿದ ಮೇಲೆ, ಕಟ್ಟಡದ ಎದುರು 4.5 ಮೀಟರ್ ಅಗಲದ ರಸ್ತೆ ಇದೆ ಎಂದು ತೋರಿಸಿ, ಮತ್ತೆ ಅನುಮತಿ ಪಡೆದಿದ್ದಾರೆ. ಅದೂ ನಿಯಮದ ವಿರುದ್ಧವಿದ್ದುದರಿಂದ ನಿರ್ಮಾಣ ಸ್ಥಗಿತಗೊಳಿಸಲು ಪಾಲಿಕೆ ಮತ್ತೆ ಆದೇಶ ನೀಡಿದ್ದರೂ, ಕಟ್ಟಡ ನಿರ್ಮಾಣ ಮುಂದುವರೆದಿದೆ’ ಎಂದು ಶೇಖ್ ಆರೋಪಿಸುತ್ತಾರೆ.
‘ಮಹಾನಗರ ಪಾಲಿಕೆ ಆಯುಕ್ತರ ಬಳಿಯೂ ನೇರವಾಗಿ ಮಾತನಾಡಿದ್ದೇನೆ. ಕಟ್ಟಡ ನಿರ್ಮಾಣ ಮುಂದುವರೆದಿದ್ದರೆ ಪೊಲೀಸರಿಗೆ ದೂರು ಸಲ್ಲಿಸಿ ಎಂದು ಅವರು ಹೇಳಿದರು. ಪೊಲೀಸ್ ಕಂಪ್ಲೇಂಟ್ ಕೊಡಲು ಹೋದರೆ, ಇನ್ಸ್ಪೆಕ್ಟರ್ ಇಲ್ಲ, ಆಮೇಲೆ ಬನ್ನಿ ಎಂದು ಹೇಳಿ ದೂರು ಸ್ವೀಕರಿಸಲು ನಿರಾಕರಿಸಿದರು’ ಎಂದರು.
ಮಹಾನಗರ ಪಾಲಿಕೆ ನಗರ ಯೋಜಕಿ ವಿ.ಬಿ. ಡಂಬಳ ಅವರನ್ನು ಸಂಪರ್ಕಿಸಿದಾಗ, ‘ನಾವು ಕಟ್ಟಡ ನಿರ್ಮಾಣ ಸ್ಥಗಿತಗೊಳಿಸುವಂತೆ ಆಗಲೇ ಆದೇಶ ನೀಡಿದ್ದೇವೆ. ಇನ್ನೂ ನಿರ್ಮಾಣ ಮುಂದುವರೆದಿದೆಯೇ’ ಎಂದು ನಮ್ಮನ್ನೇ ಪ್ರಶ್ನಿಸಿದರು.
ಪಾಲಿಕೆ ಆಯುಕ್ತ ರಮಣದೀಪ ಚೌಧರಿಯವರನ್ನು ಸಂಪರ್ಕಿಸಿದಾಗ, ‘ನಗರ ಯೋಜನೆ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸುತ್ತೇನೆ’ ಎಂದು ಉತ್ತರಿಸಿದರು.
ನಗರ ಯೋಜನೆ ವಿಭಾಗದ ಉಪನಿರ್ದೇಶಕ ಜೆ.ಕೆ. ಗಂಜಿಗಟ್ಟಿ ‘ರಸ್ತೆ ಅಗಲ ಎಷ್ಟಾದರೂ ಇರಲಿ. ಅವರು ಕಟ್ಟಡ ನಿರ್ಮಿಸಲು ಬಿಡಿ. ನಿಯಮದ ಪ್ರಕಾರವೇ ಅವರು ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾರೆ. ಅವರಿಗೆ ತೊಂದರೆ ಕೊಡಬೇಡಿ ಎಂದು ಮೇಯರ್ ಶಿವು ಹಿರೇಮಠ ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದರು.
ಮೇಯರ್ ಅವರನ್ನು ಸಂಪರ್ಕಿಸಿದಾಗ, ‘ಯಾರೇ ಇರಲಿ, ಕಾನೂನು ಪ್ರಕಾರ ನಡೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.
‘ಅನುಮತಿ ಇದೆ’
ಕಟ್ಟಡ ನಿರ್ಮಾಣದಲ್ಲಿ ನಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಮನಿಯಾರ್ ಶೇಖ್ ಅವರೇ ಮನೆಯ ಮುಂದೆ ರಸ್ತೆಗೆ ಜಾಗ ಬಿಟ್ಟಿಲ್ಲ. ಮೊದಲು ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಿ ಎಂದು ಪಾಲಿಕೆ ಆದೇಶಿಸಿದ್ದು ನಿಜ. 4.5 ಮೀಟರ್ ಅಗಲದ ರಸ್ತೆ ಇದೆ ಎಂದು ಮನವರಿಕೆ ಮಾಡಿಕೊಟ್ಟ ಮೇಲೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು ಪತ್ರೇಶ ಅವರ ಸಹೋದರ ಎಂದು ಹೇಳಿಕೊಂಡ ಮಂಜುನಾಥ ಹಳ್ಯಾಳ ಎನ್ನುವ ವ್ಯಕ್ತಿ ದೂರವಾಣಿ ಮೂಲಕ ತಿಳಿಸಿದರು.
‘ಮತ್ತೆ ಅನುಮತಿ ಸಿಕ್ಕಿದ್ದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ನಿಮ್ಮ ಕಚೇರಿಗೇ ಅವುಗಳನ್ನು ತಂದುಕೊಡುತ್ತೇವೆ’ ಎಂದ ಅವರು ಮೂರು ದಿನ ಕಳೆದರೂ ಯಾವುದೇ ದಾಖಲೆಗಳನ್ನು ತಂದು ಕೊಡಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.