ಪ್ರತ್ಯೇಕ ಶ್ರೇಣಿ ಅಧಿಕಾರಿಗಳ ನೇಮಕಕ್ಕೆ ಒತ್ತಾಯ

ಬೆಂಗಳೂರು: ‘ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಪ್ರತ್ಯೇಕ ಶ್ರೇಣಿಯ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅವರಿಗೆ 2 ವರ್ಷಗಳ ಸೂಕ್ತ ತರಬೇತಿ ನೀಡಬೇಕು’ ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟರಾವ್ ಘೋರ್ಪಡೆ ಹೇಳಿದರು.
ಕಾರಿಥಾಸ್ ಇಂಡಿಯಾ, ಕ್ರಾಸ್ ಬೆಂಗಳೂರು ಹಾಗೂ ಜನವಿಕಾಸ ಕರ್ನಾಟಕ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಪಂಚಾಯತ್ ರಾಜ್ ಸಬಲೀಕರಣ’ ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 5,773 ಗ್ರಾಮ ಪಂಚಾಯಿತಿಗಳಿದ್ದರೂ, 97 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳೇ ಇಲ್ಲ. ಇರುವ ಕಾರ್ಯದರ್ಶಿಗಳು 2–3 ಗ್ರಾಮ ಪಂಚಾಯಿತಿಗಳ ಹೊಣೆ ಹೊತ್ತಿರುವುದರಿಂದ ಅವರಿಗೆ ಸೂಕ್ತ ಮಾಹಿತಿಯೇ ಇರುವುದಿಲ್ಲ’ ಎಂದರು.
‘ಗ್ರಾಮ ಪಂಚಾಯಿತಿಗೆ ನೇಮಕ ಮಾಡುವ ಅಧಿಕಾರಿಗಳಿಗೆ 2 ವರ್ಷಗಳ ಸೂಕ್ತ ತರಬೇತಿ ನೀಡಬೇಕು. ನಂತರವಷ್ಟೇ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಮಾಣವನ್ನು 10 ವರ್ಷಗಳವರೆಗೆ ಹೆಚ್ಚಿಸಬೇಕು. ಅವರ ಅಧಿಕಾರ ಅವಧಿಯನ್ನು 29 ತಿಂಗಳಿನಿಂದ 60 ತಿಂಗಳವರೆಗೆ ಏರಿಸಬೇಕು’ ಎಂದು ಅವರು ಹೇಳಿದರು.
‘ಸರ್ಕಾರವು ತನ್ನ ಬಜೆಟ್ನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶೇ 3 ರಷ್ಟಾದರೂ ಅನುದಾನವನ್ನು ತೆಗೆದಿರಿಸಬೇಕು. ಈ ಮೂಲಕ ಸ್ಥಳೀಯ ಸಂಸ್ಥೆಗಳ ಬಲಪಡಿಸುವಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದರು.
ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಹಾಗೂ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ‘ಸಾಮಾಜಿಕ ಬದಲಾವಣೆಗೆ ಕೆಲವು ಕಾನೂನುಗಳಲ್ಲಿ ತಿದ್ದುಪಡಿ ತರುವ ಅಗತ್ಯವಿದ್ದು, ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ’ ಎಂದು ಹೇಳಿದರು.
‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ತಂದು, ನಗರ ಮತ್ತು ಪಟ್ಟಣ ಪ್ರದೇಶದ ಜನರಿಗಿರುವ ಸೌಲಭ್ಯಗಳು, ಸೌಕರ್ಯಗಳು ಗ್ರಾಮೀಣ ಮಟ್ಟದ ಜನರಿಗೂ ದೊರೆಯುವಂತಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜೆ.ಅಲೆಕ್ಸಾಂಡರ್, ಕಾರಿಥಾಸ್ ಇಂಡಿಯಾ ದಕ್ಷಿಣ ವಲಯದ ವ್ಯವಸ್ಥಾಪಕ ಜಿಮ್ಮಿ ಮ್ಯಾಥ್ಯು ಮತ್ತಿತರರು ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.