ಬೆಳ್ಳಂದೂರು ಕೆರೆಯಲ್ಲಿ ಬೆಂಕಿ, ದಟ್ಟ ಹೊಗೆ

ಬೆಂಗಳೂರು: ಮಹದೇವಪುರ ಸಮೀಪದ ಬೆಳ್ಳಂದೂರು ಕೆರೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿತು. ಇದರಿಂದಾಗಿ ಸ್ಥಳೀಯ ಜನರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.
ಕೆರೆ ದಂಡೆಯಿಂದ ಸ್ವಲ್ಪ ಒಳಗಿನ ಪ್ರದೇಶದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು. ಆದರೆ, ಬೆಂಕಿ ಜ್ವಾಲೆ ಮಾತ್ರ ಮೇಲಕ್ಕೆ ಕಾಣಿಸಿಲಿಲ್ಲ ಎಂದು ಸ್ಥಳೀಯರು ತಿಳಿಸಿದರು. ಯಮಲೂರು ಕೆರೆ ಕೋಡಿಯ ಸೇತುವೆಯ ಕೆಳಗೆ ಹರಿಯುತ್ತಿರುವ ನೀರಿನ ಮೇಲೆ ಕೂಡ ಬಿಸಿಯಾದ ಆವಿ ಹೊರಬರುತ್ತಿತ್ತು.
ಕೆರೆಯಲ್ಲಿ ರಾಸಾಯನಿಕ ತ್ಯಾಜ್ಯ ಹೆಚ್ಚಾಗಿ ಪರಸ್ಪರ ರಾಸಾಯನಿಕ ಕ್ರಿಯೆ ಉಂಟಾದ ಕಾರಣ ಬೆಂಕಿ, ಹೊಗೆ ಕಾಣಿಸಿಕೊಂಡಿದೆ. 10–15 ನಿಮಿಷ ಹೊಗೆ ಕಾಣಿಸಿಕೊಂಡಿತು ಎಂದು ಸ್ಥಳೀಯರಾದ ರಾಮಣ್ಣ ತಿಳಿಸಿದರು.
ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡಗಳು ಬೆಳೆದು ಒಣಗಿ ನಿಂತಿವೆ. ಆ ಒಣಗಿದ ಸೊಪ್ಪಿನ ಕೆಳಗಿನ ನೀರಿನಲ್ಲಿ ಉಂಟಾದ ರಾಸಾಯನಿಕ ಕ್ರಿಯೆಯಿಂದ ಬೆಂಕಿ ಹೊತ್ತಿಕೊಂಡು ಹೊಗೆ ಬಂದಿರಬಹುದು. ಮುಂದಿನ ದಿನಗಳಲ್ಲಿ ಮತ್ತೆ ಇದೇ ರೀತಿ ಬೆಂಕಿ ಕಾಣಿಸಿಕೊಂಡರೆ ಅನಾಹುತ ಸಂಭವಿಸಬಹುದು. ಹೊಗೆಯಿಂದ ಸುತ್ತಮುತ್ತಲಿನ ವಾತಾವರಣ ಹದಗೆಡುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಕೆರೆಗೆ ಭೇಟಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಳೆದ ವರ್ಷ ಬೆಳ್ಳಂದೂರು ಕೆರೆಯ ಯಮಲೂರು ಕೋಡಿಯಲ್ಲಿ ನೊರೆಯ ನಡುವೆ ಬೆಂಕಿ ಕಾಣಿಸಿಕೊಂಡಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.