ರಾಜೀವ್ ಹಂತಕರಿಗೆ ಸುಪ್ರೀಂ ಜೀವದಾನ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.
ಹೀಗಾಗಿ, 1991ರಿಂದಲೇ ಸೆರೆಮನೆಯಲ್ಲಿರುವ ಶಾಂತನ್, ಮುರುಗನ್ ಮತ್ತು ಪೇರ್ಅರಿವಲನ್ ಅವರಿಗೆ ಜೀವದಾನ ದೊರೆತಿದೆ.
ಈ ಮೂವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಬಗ್ಗೆ ತೀರ್ಮಾನಕ್ಕೆ ಬರಲು ಕೇಂದ್ರ ಸರ್ಕಾರವು 11 ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಂಡಿರುವುದು ಅಕ್ಷಮ್ಯ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ, ನ್ಯಾಯಮೂರ್ತಿಗಳಾದ ರಂಜನ್ ಸಹಾಯ್ ಮತ್ತು ಎಸ್.ಕೆ. ಸಿಂಗ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಕ್ಷಮಾದಾನದ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿವೇಚನಾರಹಿತ ವಿಳಂಬ ಆಗಿಲ್ಲ ಮತ್ತು ಗಲ್ಲು ಶಿಕ್ಷೆಗೆ ಒಳಗಾದ ಇವರು ಸೆರೆಮನೆಯಲ್ಲಿ ಯಾತನಾಮಯ ಬದುಕು ನಡೆಸುತ್ತಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಅದು ತಿರಸ್ಕರಿಸಿತು.
ಕ್ಷಮಾದಾನ ಅರ್ಜಿಯನ್ನು ನ್ಯಾಯೋಚಿತ ಅವಧಿಯಲ್ಲಿ ಇತ್ಯರ್ಥ ಮಾಡಬೇಕು. ಆ ಮೂಲಕ ತ್ವರಿತ ನಿರ್ಧಾರ ಕೈಗೊಳ್ಳಲು ಸಂದರ್ಭಾನುಸಾರ ರಾಜ್ಯಪಾಲರು ಅಥವಾ ರಾಷ್ಟ್ರಪತಿಯವರಿಗೆ ನೆರವಾಗಬೇಕು ಎಂದು ಪೀಠ ಸೂಚಿಸಿತು.
‘ಕ್ಷಮಾದಾನ ಅರ್ಜಿಗಳನ್ನು ಈಗಿನದಕ್ಕಿಂತ ಹೆಚ್ಚು ತ್ವರಿತವಾಗಿ ತೀರ್ಮಾನಿಸುವುದು ಸಾಧ್ಯ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿತು.
ಸರ್ಕಾರದ ವಿರೋಧ: ಗಲ್ಲು ಶಿಕ್ಷೆಯನ್ನು ಮರಣ ದಂಡನೆಗೆ ಇಳಿಸಬೇಕು ಎಂಬ ಮೂವರು ಹಂತಕರ ಮನವಿಯನ್ನು ಕೇಂದ್ರ ಸರ್ಕಾರ ಬಲವಾಗಿ ವಿರೋಧಿಸಿತ್ತು.
ಕ್ಷಮಾದಾನ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲು ಸೂಕ್ತವಾದ ಪ್ರಕರಣ ಇದಲ್ಲ ಎಂದು ಪ್ರತಿಪಾದಿಸಿತ್ತು. ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿದ್ದರೂ ಅದು ‘ವಿವೇಚನಾರಹಿತ, ವಿವರಣೆರಹಿತ ಮತ್ತು ಆತ್ಮಸಾಕ್ಷಿರಹಿತ’ ಎಂಬ ವ್ಯಾಖ್ಯಾನ ಸರಿಯಲ್ಲ ಎಂದು ವಾದಿಸಿತ್ತು.
ವಿಳಂಬದಿಂದಾಗಿ ಈ ಮೂವರು ತೀವ್ರ ವೇದನೆ ಅನುಭವಿಸಿದ್ದಾರೆ. ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಹಂತಕರ ಪರ ವಕೀಲರು ವಾದಿಸಿದರು.
ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರ ವಿವೇಚನಾರಹಿತ ವಿಳಂಬ ಮಾಡಿದರೆ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಸಬಹುದು ಎಂದು ಜನವರಿ 21ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಕಾಡುಗಳ್ಳ ವೀರಪ್ಪನ್ನ ನಾಲ್ವರು ಸಹಚರರು ಸೇರಿದಂತೆ ಗಲ್ಲು ಶಿಕ್ಷೆಗೆ ಒಳಗಾಗಿದ್ದ 15 ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಇದೇ ನೆಲೆಯಲ್ಲಿ ಈಗ ರಾಜೀವ್ ಹಂತಕರಿಗೂ ಜೀವದಾನ ದೊರೆತಿದೆ.
ಕೊನೆಯ ಭರವಸೆ
ಕೈದಿಗಳು ಮತ್ತು ಅವರ ಕುಟುಂಬದವರಿಗೆ ಕ್ಷಮಾದಾನವೊಂದೇ ಕೊನೆಯ ಭರವಸೆ. ಆದ್ದರಿಂದ ಇಂತಹ ಅರ್ಜಿಗಳನ್ನು ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು.
-ಸುಪ್ರೀಂ ಕೋರ್ಟ್ ಪೀಠ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.