ಬರ್ವಾಲಾ/ಚಂಡೀಗಡ (ಪಿಟಿಐ/ಐಎಎನ್ಎಸ್): ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ‘ದೇವಮಾನವ’ ರಾಮ್ಪಾಲ್ ಅವರನ್ನು ಬಂಧಿಸುವಲ್ಲಿ ಹರಿಯಾಣ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಸಾವಿರಾರು ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ರಾಮ್ಪಾಲ್ ಸೆರೆಸಿಕ್ಕಿದ್ದಾರೆ. ನಂತರ ಅವರನ್ನು ಆಂಬುಲನ್ಸ್ನಲ್ಲಿ ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಯಿತು. ಗುರುವಾರ ಅವರನ್ನು ಹಿಸ್ಸಾರ್ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಎರಡು ವಾರಗಳಿಂದ ರಾಮ್ಪಾಲ್ ಆಶ್ರಮದಲ್ಲಿ ಅಡಗಿಕೂತಿದ್ದರು. ಅವರನ್ನು ಬಂಧಿಸುವುದಕ್ಕಾಗಿ ಮಂಗಳವಾರ ಪೊಲೀಸರು ಆಶ್ರಮಕ್ಕೆ ಲಗ್ಗೆ ಇಟ್ಟಿದ್ದ ಸಂದರ್ಭದಲ್ಲಿ ಪೊಲೀಸರು ಹಾಗೂ ರಾಮ್ಪಾಲ್ ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿತ್ತು. ಘರ್ಷಣೆಯಲ್ಲಿ ೨೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಅನುಮಾನಾಸ್ಪದ ಸಾವು: ಈ ನಡುವೆ ಆಶ್ರಮದಲ್ಲಿ ನಾಲ್ವರು ಮಹಿಳೆಯರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಆಶ್ರಮದಲ್ಲಿ ಪೊಲೀಸರು ಹಾಗೂ ರಾಮ್ಪಾಲ್ ಬೆಂಬಲಿಗರ ಮಧ್ಯೆ ಮಂಗಳ ವಾರ ನಡೆದ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಹಿಳೆ ಹಾಗೂ ೧೮ ತಿಂಗಳ ಮಗು ಕೂಡ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಮ್ಪಾಲ್ ಸೆರೆ ಸಿಗುವವರೆಗೂ ಆಶ್ರಮದಲ್ಲಿ ಕಾರ್ಯಾಚರಣೆ ನಿಲ್ಲದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಖಡಾಖಂಡಿತವಾಗಿ ಹೇಳಿದ್ದರು.
ದೇಶದ್ರೋಹ ಆರೋಪ: ಈ ಮಧ್ಯೆ, ಹರಿಯಾಣ ಪೊಲೀಸರು ರಾಮ್ಪಾಲ್ ವಿರುದ್ಧ ದೇಶದ್ರೋಹದ ಆರೋಪ ಸೇರಿದಂತೆ ಹೊಸ ಪ್ರಕರಣದಾಖಲಿಸಿದ್ದಾರೆ. ‘ರಾಮ್ಪಾಲ್ ಜತೆ ಸಂಧಾನದ ಸಾಧ್ಯತೆ ಇಲ್ಲ. ಅವರ ವಿರುದ್ಧ ಗಂಭೀರ ಆರೋಪಗಳು ಇವೆ. ಅವರು ಶರಣಾಗಲೇಬೇಕು’ ಎಂದು ಹರಿಯಾಣ ಡಿಜಿಪಿ ಎಸ್.ಎನ್. ವಸಿಷ್ಠ ಚಂಡೀಗಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
70 ಜನರ ಬಂಧನ: ಆಶ್ರಮದಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದ ೭೦ ಬೆಂಬಲಿಗರನ್ನು (ಇವರಲ್ಲಿ ಹೆಚ್ಚಿನವರು ರಾಮ್ಪಾಲ್ ಖಾಸಗಿ ಕಮಾಂಡೊಗಳು) ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾಲಯವು ಇವರನ್ನು ಡಿಸೆಂಬರ್ ೩ರವೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿ ಆದೇಶ ಹೊರಡಿಸಿದೆ. ಬಂಧಿತರಲ್ಲಿ ರಾಮ್ಪಾಲ್ ಪುತ್ರ ಹಾಗೂ ಮುಖ್ಯಸ್ವಯಂಸೇವಕ ಪುರುಷೋತ್ತಮ್ ದಾಸ್ ಕೂಡ ಇದ್ದಾರೆ.
ಐಪಿಸಿ ಸೆಕ್ಷನ್ ೧೨೧ (ಭಾರತ ಸರ್ಕಾರದ ವಿರುದ್ಧ ಯುದ್ಧಸಾರುವುದು ಅಥವಾ ಯುದ್ಧ ಸಾರಲು ಯತ್ನಿಸುವುದು ಅಥವಾ ಇದಕ್ಕೆ ಪ್ರಚೋದನೆ ನೀಡುವುದು), ಸೆಕ್ಷನ್ ೧೨೧ಎ ( ದೇಶದ ವಿರುದ್ಧ ಅಪರಾಧ ಎಸಗುವುದಕ್ಕೆ ಪಿತೂರಿ), ಸೆಕ್ಷನ್ ೧೨೨ ( ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಉದ್ದೇಶದಿಂದ ಶಸ್ತ್ರಾಸ್ತ್ರಗಳ ಸಂಗ್ರಹ) ಅಡಿಯಲ್ಲಿ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.