ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ಪಾಲ್‌ ಬಂಧನ

‘ದೇವಮಾನವ’ ವಿರುದ್ಧ ದೇಶದ್ರೋಹದ ಆರೋಪ
Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬರ್‌ವಾಲಾ/ಚಂಡೀಗಡ (ಪಿಟಿಐ/ಐಎಎನ್‌ಎಸ್‌): ನ್ಯಾಯಾಂಗ ನಿಂದನೆ  ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ‘ದೇವ­ಮಾನವ’ ರಾಮ್‌ಪಾಲ್‌ ಅವರನ್ನು ಬಂಧಿಸುವಲ್ಲಿ  ಹರಿಯಾಣ ಪೊಲೀಸರು ಕೊನೆಗೂ ಯಶಸ್ವಿ­ಯಾಗಿದ್ದಾರೆ.

ಸಾವಿರಾರು ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿ ಬುಧವಾರ ರಾತ್ರಿ ನಡೆಸಿದ ಕಾರ್ಯಾ­ಚರಣೆಯಲ್ಲಿ ರಾಮ್‌ಪಾಲ್‌ ಸೆರೆಸಿಕ್ಕಿದ್ದಾರೆ. ನಂತರ    ಅವರನ್ನು ಆಂಬುಲನ್ಸ್‌ನಲ್ಲಿ ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಯಿತು. ಗುರು­ವಾರ ಅವರನ್ನು ಹಿಸ್ಸಾರ್‌ ಕೋರ್ಟ್‌ ಮುಂದೆ ಹಾಜರುಪಡಿಸಲಾ­ಗುವುದು ಎಂದು ಮೂಲಗಳು ತಿಳಿಸಿವೆ.

ಎರಡು ವಾರಗಳಿಂದ ರಾಮ್‌ಪಾಲ್‌ ಆಶ್ರಮ­ದಲ್ಲಿ ಅಡಗಿಕೂತಿದ್ದರು. ಅವ­ರನ್ನು ಬಂಧಿಸುವುದ­ಕ್ಕಾಗಿ ಮಂಗಳವಾರ ಪೊಲೀಸರು ಆಶ್ರಮಕ್ಕೆ ಲಗ್ಗೆ ಇಟ್ಟಿದ್ದ ಸಂದರ್ಭದಲ್ಲಿ ಪೊಲೀಸರು ಹಾಗೂ ರಾಮ್‌ಪಾಲ್‌ ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿತ್ತು. ಘರ್ಷಣೆ­ಯಲ್ಲಿ ೨೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಅನುಮಾನಾಸ್ಪದ ಸಾವು: ಈ ನಡುವೆ ಆಶ್ರಮದಲ್ಲಿ ನಾಲ್ವರು ಮಹಿಳೆಯರು ಅನುಮಾನಾಸ್ಪದ ರೀತಿ­ಯಲ್ಲಿ ಮೃತಪಟ್ಟಿದ್ದಾರೆ. ಆಶ್ರಮದಲ್ಲಿ ಪೊಲೀಸರು ಹಾಗೂ ರಾಮ್‌ಪಾಲ್‌ ಬೆಂಬಲಿಗರ ಮಧ್ಯೆ ಮಂಗಳ ವಾರ ನಡೆದ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಹಿಳೆ ಹಾಗೂ ೧೮ ತಿಂಗಳ ಮಗು ಕೂಡ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಮ್‌ಪಾಲ್‌ ಸೆರೆ ಸಿಗುವವರೆಗೂ ಆಶ್ರಮದಲ್ಲಿ ಕಾರ್ಯಾ­ಚರಣೆ ನಿಲ್ಲದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಖಡಾಖಂಡಿತವಾಗಿ ಹೇಳಿದ್ದರು.

ದೇಶದ್ರೋಹ ಆರೋಪ: ಈ ಮಧ್ಯೆ, ಹರಿಯಾಣ ಪೊಲೀಸರು ರಾಮ್‌ಪಾಲ್‌ ವಿರುದ್ಧ  ದೇಶ­ದ್ರೋಹದ ಆರೋಪ ಸೇರಿದಂತೆ ಹೊಸ ಪ್ರಕರಣ­ದಾಖಲಿಸಿದ್ದಾರೆ. ‘ರಾಮ್‌ಪಾಲ್‌ ಜತೆ ಸಂಧಾನದ ಸಾಧ್ಯತೆ ಇಲ್ಲ. ಅವರ ವಿರುದ್ಧ ಗಂಭೀರ  ಆರೋಪ­ಗಳು ಇವೆ. ಅವರು  ಶರಣಾ­ಗಲೇಬೇಕು’ ಎಂದು ಹರಿ­ಯಾಣ ಡಿಜಿಪಿ ಎಸ್‌.ಎನ್‌. ವಸಿಷ್ಠ ಚಂಡೀಗಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

70 ಜನರ ಬಂಧನ: ಆಶ್ರಮದಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದ ೭೦ ಬೆಂಬಲಿಗರನ್ನು (ಇವರಲ್ಲಿ ಹೆಚ್ಚಿನವರು ರಾಮ್‌ಪಾಲ್‌ ಖಾಸಗಿ ಕಮಾಂಡೊಗಳು) ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನ್ಯಾಯಾ­ಲಯವು ಇವರನ್ನು ಡಿಸೆಂಬರ್‌ ೩ರವೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿ ಆದೇಶ ಹೊರಡಿಸಿದೆ. ಬಂಧಿತರಲ್ಲಿ ರಾಮ್‌ಪಾಲ್‌ ಪುತ್ರ ಹಾಗೂ ಮುಖ್ಯಸ್ವಯಂಸೇವಕ ಪುರು­ಷೋತ್ತಮ್‌ ದಾಸ್‌ ಕೂಡ ಇದ್ದಾರೆ.

ಐಪಿಸಿ ಸೆಕ್ಷನ್‌ ೧೨೧ (ಭಾರತ ಸರ್ಕಾರದ ವಿರುದ್ಧ ಯುದ್ಧಸಾರುವುದು ಅಥವಾ ಯುದ್ಧ ಸಾರಲು ಯತ್ನಿ­ಸುವುದು ಅಥವಾ ಇದಕ್ಕೆ ಪ್ರಚೋದನೆ ನೀಡುವುದು), ಸೆಕ್ಷನ್‌ ೧೨೧ಎ ( ದೇಶದ ವಿರುದ್ಧ ಅಪರಾಧ ಎಸಗುವುದಕ್ಕೆ ಪಿತೂರಿ), ಸೆಕ್ಷನ್‌ ೧೨೨ ( ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವ ಉದ್ದೇಶದಿಂದ ಶಸ್ತ್ರಾಸ್ತ್ರಗಳ ಸಂಗ್ರಹ) ಅಡಿಯಲ್ಲಿ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT