ಮಂಡ್ಯ: ವ್ಯಕ್ತಿಗಳ ನಡುವಿನ ದ್ವೇಷಕ್ಕೆ ಎತ್ತು ಕಣ್ಣು ಕಳೆದುಕೊಂಡ ಪ್ರಕರಣ ಇದು. ದ್ವೇಷದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದ ಮಂಚೇಗೌಡ ಎಂಬವರಿಗೆ ಸೇರಿದ ಎತ್ತುಗಳ ಕಣ್ಣಿಗೆ ಆ್ಯಸಿಡ್ ಹಾಕಿದ್ದು, ಎರಡು ಎತ್ತುಗಳ ಎಡ ಕಣ್ಣು ಹಾನಿಗೊಂಡಿದೆ.
ಪಶು ವೈದ್ಯರೂ ಕೂಡಾ ಕಣ್ಣಿಗೆ ಹಾನಿ ಆಗಿರುವುದನ್ನು ದೃಢ ಪಡಿಸಿದ್ದು, ದೃಷ್ಟಿ ಬರುವುದು ಕಷ್ಟ ಎಂದು ಹೇಳಿದ್ದಾರೆ ಎಂದು ಈ ಕುರಿತು ಶಿವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎತ್ತುಗಳಿಗೆ ಆ್ಯಸಿಡ್ ಹಾಕಿರುವ ಆರೋಪದ ಮೇಲೆ ಶಿವಳ್ಳಿ ಠಾಣೆ ಪೊಲೀಸರು ಅದೇ ಗ್ರಾಮದ ಪ್ರಭಾಕರ ಎಂಬವರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಕಣ್ಣಿನಲ್ಲಿ ಉರಿ ಕಾಣಿಸಿಕೊಂಡ ಕೂಡಲೇ ಕಟ್ಟಿದ್ದ ಗೂಟವನ್ನು ಕಿತ್ತುಕೊಂಡು ಚಿಗಿಯ ಲಾರಂಭಿಸಿದವು. ಪಶುವೈದ್ಯರು ಬಂದು ಪರೀಕ್ಷಿಸುವ ವೇಳೆಗೆ ಹಾನಿ ಆಗಿತ್ತು ಮಂಚೇಗೌಡ ತಿಳಿಸಿದ್ದಾರೆ.
ಹಳೆಯ ದ್ವೇಷವೇ ಪ್ರಭಾಕರ ಈ ಕೃತ್ಯ ಎಸಗಲು ಕಾರಣ ಎಂದು ಆರೋಪಿಸಿದ್ದಾರೆ. ಪ್ರಭಾಕರ ಕೃತ್ಯದಿಂದಾಗಿ ಈಗ ದ್ವೇಷಕ್ಕೆ ಸಂಬಂಧವೇ ಇಲ್ಲದ ಎತ್ತುಗಳು ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.