<p>1944ರಿಂದ 1965ರವರೆಗೆ ಇಪ್ಪತ್ತೊಂದು ವರ್ಷಗಳ ಕಾಲ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು `ಜೀವನ~ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಈ ಸುದೀರ್ಘ ಅವಧಿಯಲ್ಲಿ `ಜೀವನ~ ಪ್ರತಿ ತಿಂಗಳೂ ಒಂದನೇ ತಾರೀಖು ತಪ್ಪದೆ ಪ್ರಕಟವಾಗಿದೆ.<br /> <br /> ಮಹಾತ್ಮ ಗಾಂಧಿ ನಿಧನರಾದ ಸಂದರ್ಭದಲ್ಲಿ (ಜನವರಿ 30) ಅವರ ಕುರಿತಂತೆ ಒಂದು ಲೇಖನ ಪ್ರಕಟಿಸುವ ಉದ್ದೇಶದಿಂದ ಆ ತಿಂಗಳ ಸಂಚಿಕೆ ನಾಲ್ಕನೇ ತಾರೀಖು ಹೊರಬಂದಿತು. ಉಳಿದಂತೆ ಎಂದೂ `ಜೀವನ~ ಅನಿಯಮಿತಕಾಲಿಕವಾಗಲಿಲ್ಲ. <br /> <br /> ನಿಯತಕಾಲಿಕೆ ಪತ್ರಿಕೆಗಳ ಇತಿಹಾಸದಲ್ಲಿ ಇದೊಂದು ದಾಖಲೆ ಮಾತ್ರವಲ್ಲ, ಪತ್ರಿಕಾ ಸಂಪಾದಕರ ಶ್ರದ್ಧೆ, ಶಿಸ್ತು, ಓದುಗರ ಬಗೆಗಿನ ಗೌರವ - ಎಲ್ಲಕಾಲಕ್ಕೂ ಒಂದು ಮಾದರಿ ಎನ್ನಬಹುದು.<br /> <br /> ಮಾಸ್ತಿಯವರು ತಮ್ಮ ಪತ್ರಿಕೆಗೆ ತಪ್ಪದೆ ಸಂಪಾದಕೀಯ ಟಿಪ್ಪಣಿ ಬರೆಯುತ್ತಿದ್ದರು. ಯಾವುದೇ ಪತ್ರಿಕೆಯಾಗಲಿ ಸಂಪಾದಕೀಯ ಅತ್ಯಂತ ಮಹತ್ವದ್ದು; ಅದು ಪತ್ರಿಕೆಯ ಆತ್ಮವಿದ್ದಂತೆ. ಸಂಪಾದಕೀಯ ಬರಹ ಪತ್ರಿಕೆಯ ನಿಲುವನ್ನು ಸೂಚಿಸುತ್ತದೆ, ಮಾತ್ರವಲ್ಲದೆ ಲೋಕ ಹಿತವಾದ ಅನೇಕ ಸಂಗತಿಗಳಲ್ಲಿ ಮಾರ್ಗದರ್ಶಕವೂ ಆಗಿರುತ್ತದೆ. <br /> <br /> ಸಮಕಾಲೀನ ಸಂಗತಿಗಳ ಆಗುಹೋಗುಗಳ ಅರಿವು, ಇತಿಹಾಸ ಪ್ರಜ್ಞೆ, ವಿಸ್ತಾರವಾದ ಅಧ್ಯಯನ, ಬಹುಜನಪರವಾದ ಸಾಮಾಜಿಕ ಕಾಳಜಿ- ಇವೆಲ್ಲವೂ ಸಂಪಾದಕೀಯ ಬರಹದ ವಿನ್ಯಾಸವನ್ನು ರೂಪಿಸುತ್ತವೆ. ಮಾಸ್ತಿಯವರ ಸಂಪಾದಕೀಯ ಬರಹಗಳು ಈ ದೃಷ್ಟಿಯಿಂದ ಅಧ್ಯಯನ ಯೋಗ್ಯ.<br /> <br /> ಮಾಸ್ತಿಯವರು 1951-1965ರವರೆಗೆ ಬರೆದ ಹದಿನಾಲ್ಕು ವರ್ಷಗಳ ಸಂಪಾದಕೀಯ ಟಿಪ್ಪಣಿಗಳನ್ನು ಐದು ಸಂಪುಟಗಳಲ್ಲಿ ಕಾಲಾನುಕ್ರಮ ರೀತಿಯಲ್ಲಿ 1967ರಲ್ಲಿ ಪ್ರಕಟಿಸಿದರು. ಈಗ `ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್~ (ಎಂ.ವಿ.ಜೆ.ಕೆ. ಟ್ರಸ್ಟ್) ಈ ಸಂಪಾದಕೀಯ ಬರಹಗಳನ್ನು ವಿಷಯಾನುಕ್ರಮವಾಗಿ ವಿಂಗಡಿಸಿ ಹನ್ನೆರಡು ಭಾಗಗಳಲ್ಲಿ ಪುನರ್ ಮುದ್ರಿಸಿದೆ. <br /> <br /> ಇದೊಂದು ಓದುಗ ಸ್ನೇಹಿ ಕ್ರಮ. ಇದರಿಂದ ಓದುಗರಿಗೆ ಆ ಕಾಲದ ವಿವರಗಳು, ಅದರ ಬಗ್ಗೆ ಮಾಸ್ತಿಯವರ ನಿಲುವು ತಕ್ಷಣ ಸಿಗುತ್ತದೆ. ಅಧ್ಯಯನ ಮಾಡುವವರಿಗೆ ಇದು ಅತ್ಯಂತ ಉಪಯುಕ್ತ. ಇಲ್ಲಿಯೇ ಮತ್ತೊಂದು ಮುಖ್ಯ ಸಂಗತಿಯನ್ನೂ ಪ್ರಸ್ತಾಪಿಸಬೇಕು.<br /> <br /> ನಮ್ಮ ಮಹತ್ವದ ಲೇಖಕರ ಕೃತಿಗಳು ಅಲಭ್ಯವೆನ್ನಿಸದೆ ಸಹೃದಯ ಓದುಗರಿಗೆ ಸಿಗುವಂತಿರಬೇಕು. ಸಮಾಜ ಜಡವಾಗದೆ ಜೀವಂತವಾಗಿರಬೇಕಾದರೆ ಶ್ರೇಷ್ಠ ಮನಸ್ಸುಗಳ ಚಿಂತನೆಗಳು ಸಮಕಾಲೀನ ಸನ್ನಿವೇಶಕ್ಕೆ ಒದಗಿಬಂದು ಚಲನಶೀಲತೆಗೆ ಕಾರಣವಾಗುವಂತಿರಬೇಕು. <br /> <br /> ಅಂಥ ಚಿಂತನೆಗಳ ಜೊತೆ ಸಂವಾದ ವಾಗ್ವಾದಗಳ ಮೂಲಕ ಹೊಸ ಹುಟ್ಟು ಸಾಧ್ಯ; ಬದಲಾವಣೆ ಸಾಧ್ಯ. ಎಂ.ವಿ.ಜೆ.ಕೆ. ಟ್ರಸ್ಟ್ ಮಾಸ್ತಿಯವರ ಎಲ್ಲ ಕೃತಿಗಳೂ ಓದುಗರಿಗೆ ಲಭ್ಯವಾಗುವ ವ್ಯವಸ್ಥೆ ಮಾಡುತ್ತಿರುವುದು ಸ್ತುತ್ಯಾರ್ಹ ಸಂಗತಿ.<br /> <br /> ಬೃಹತ್ ಗಾತ್ರದ ಈ ಸಂಪಾದಕೀಯ ಸಂಪುಟಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಮಾಸ್ತಿಯವರ ಓದಿನ, ತಿಳಿವಳಿಕೆಯ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುತ್ತದೆ. ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರಗಳನ್ನು ಅವರು ಇಲ್ಲಿ ಆಪ್ತವಾಗಿ ಮನೆಮಾತಿನ ಧಾಟಿಯಲ್ಲಿ ಚರ್ಚಿಸುತ್ತಾರೆ. <br /> <br /> ವಿನಯ ಬಿಡದೆ ಮೆಲುಮಾತಿನಲ್ಲೇ ತಮ್ಮ ನಿಲುವನ್ನು, ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸುತ್ತಾರೆ. ತಾವು ಒಪ್ಪದ ವಿಚಾರಗಳನ್ನೂ ಹೇಗೆ ಗೌರವದಿಂದ ಹೇಳಬಹುದು ಎಂಬುದಕ್ಕೆ ಮಾಸ್ತಿಯವರ ಈ ಬರಹಗಳು ಉತ್ತಮ ನಿದರ್ಶನ.<br /> <br /> ಮಾತ್ರವಲ್ಲ ಖಂಡಿಸಬೇಕಾದಾಗ ಸ್ಪಷ್ಟ ಮಾತುಗಳಲ್ಲಿ ವಿರೋಧಿಸಿ, ಆ ನಂತರ ಆ ವ್ಯಕ್ತಿ ಅಥವಾ ಸಂಸ್ಥೆ ಅಥವಾ ರಾಷ್ಟ್ರ ಒಳ್ಳೆಯದು ಮಾಡಿದಾಗ ಅದನ್ನೂ ಮುಕ್ತವಾಗಿ ಪ್ರಶಂಸಿಸುವ ಕ್ರಮವೂ ಇಲ್ಲಿದೆ. <br /> <br /> ಅಂದರೆ ನಿಷ್ಪಕ್ಷಪಾತ ದೃಷ್ಟಿ ಇಲ್ಲಿಯ ಬರಹಗಳ ಮೂಲ ಗುಣ. ಇಡೀ ಬರಹದ ವಿನ್ಯಾಸವನ್ನು ಮಾಸ್ತಿಯವರು ಪ್ರಮುಖವಾಗಿ ಗೌರವಿಸುವ `ಸಂಯಮ~ ಹಾಗೂ `ಸ್ವಾತಂತ್ರ್ಯ~ - ಈ ಎರಡು ಮೌಲ್ಯಗಳು ರೂಪಿಸಿದಂತೆ ತೋರುತ್ತದೆ.<br /> <br /> ಪತ್ರಿಕಾ ಮಾಧ್ಯಮದ ಬಗ್ಗೆ ಮಾಸ್ತಿ ತಮ್ಮ ಸಂಪಾದಕೀಯ ಬರಹಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿ, ಅದರ ಮಹತ್ವವನ್ನು ಮನಗಾಣಿಸುತ್ತಾರೆ. ಒಂದು ಭಾಷೆಯ ಉನ್ನತಿಯ ಮುಖ್ಯ ಲಕ್ಷಣಗಳಲ್ಲೊಂದು ಆ ಭಾಷೆಯಲ್ಲಿ ಹಲವು ಉತ್ತಮ ಪತ್ರಿಕೆಗಳಿರುವುದು ಎಂದು ಮಾಸ್ತಿ ಭಾವಿಸುತ್ತಾರೆ. <br /> <br /> ಅದರಲ್ಲೂ ಸಾಹಿತ್ಯಕ ಕಿರು ಪತ್ರಿಕೆಗಳ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. ಶ್ರೇಷ್ಠ ಪತ್ರಿಕೆ ಎಂದರೆ ಅದರಲ್ಲಿ ಪ್ರಕಟವಾದ ಬರಹಗಳು ಮರ್ಯಾದೆ ಮೀರದೆ ಒಟ್ಟು ಸಮಾಜದ ಕ್ಷೇಮ ಚಿಂತನೆ ಮಾಡುವಂತಿರಬೇಕು; ಅಲ್ಪವಾದ ಕ್ಷುದ್ರ ಅಥವಾ ಸಂಕುಚಿತ ಎನ್ನಬಹುದಾದ ದೃಷ್ಟಿಯಿಂದ ಪ್ರೇರಿತವಾಗಿರಬಾರದು; ಅವು ಪ್ರಕಟಿಸುವ ಸಂಗತಿ ಶುಚಿಯಾಗಿರಬೇಕು. ಇಂಥ ಪತ್ರಿಕೆ ಜನಪ್ರಿಯವಾಗುವುದಿಲ್ಲ ನಿಜ; ಆದರೆ ಜನಹಿತ ಸಾಧಿಸುತ್ತವೆ.<br /> <br /> ಜನಪ್ರಿಯತೆಯ ಹೆಸರಿನಲ್ಲಿ ರೋಚಕ ಬರಹಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದನ್ನು ದ್ರೋಹವೆಂದು ಮಾಸ್ತಿ ಭಾವಿಸುತ್ತಾರೆ. ಈ ಪತ್ರಿಕಾ ನಿಯಮಗಳನ್ನು ಅವರು ತಮ್ಮ ಸಂಪಾದಕತ್ವದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದರೆಂಬುದೂ ಮಹತ್ವದ ಸಂಗತಿ.<br /> <br /> ಪತ್ರಿಕೆ ಎಂದರೆ ಸಾಹಿತಿಗಳ ಕೆಲಸ ಎಂದು ಕೆಲವರು ಭಾವಿಸುತ್ತಾರೆ. ಪತ್ರಿಕೆಯ ಬರಹ, ಚಾಲನ ಸಾಹಿತಿಗಳ ಕೆಲಸ, ದಿಟ; ಆದರೆ ಅದರ ಪೋಷಣೆ ಜನತೆಯ ಕೆಲಸ, ಎಂದರೆ ದೇಶದ ಕಷ್ಟ ಸುಖಗಳನ್ನು ಕುರಿತು ಯೋಚಿಸಬಲ್ಲ ಪ್ರಬುದ್ಧರ ಕೆಲಸ.<br /> <br /> ಕಾರ್ಖಾನೆ ಕೈಗಾರಿಕೆ, ಉದ್ಯೋಗ ವ್ಯಾಪಾರ ಯಾವುದೇ ಉದ್ಯಮದಲ್ಲಿ ತೊಡಗಿರುವ ನಮ್ಮ ಹಿರಿಯರು ಇಂಥ ಪತ್ರಿಕೆಗಳಿಗೆ ಬೆಂಬಲ ನೀಡುವುದು ತಮ್ಮ ಕರ್ತವ್ಯ ಎಂದು ಕಾಣಬೇಕು. ಓದುಗರು ಕೊಂಡು ಓದುವ ಮೂಲಕ ಪತ್ರಿಕೆಯನ್ನು ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಬೇಕು; ಸರ್ಕಾರವೂ ಇಂಥ ಪತ್ರಿಕೆಗಳನ್ನು ಪ್ರೋತ್ಸಾಹಿಸಬೇಕು. <br /> <br /> ಮಾಸ್ತಿಯವರ ಪ್ರಕಾರ ಒಂದು ಪತ್ರಿಕೆಯನ್ನು ಬೆಳೆಸುವುದೆಂದರೆ ದೇಶ ಕಟ್ಟುವ ಕೆಲಸ. ಸಮೂಹ ಮಾಧ್ಯಮದ ಮಹತ್ವವನ್ನು, ಜವಾಬ್ದಾರಿಯನ್ನು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಅವರು ತಮ್ಮ ಸಂಪಾದಕೀಯ ಬರಹಗಳಲ್ಲಿ ಮನವರಿಕೆಯಾಗುವಂತೆ ಪ್ರತಿಪಾದಿಸುತ್ತಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಚಿಂತನೆ ಮನನೀಯವಾದುದು.<br /> <br /> ಮಾಸ್ತಿಯವರು ಮತ್ತೊಂದು ಮಹತ್ವದ ಸಂಗತಿಯನ್ನು ಪ್ರಸ್ತಾಪಿಸುತ್ತಾರೆ. ಸಾಹಿತ್ಯ, ಸಂಸ್ಕೃತಿ, ಸಮೂಹ ಮಾಧ್ಯಮ ಸರ್ಕಾರ ಪೋಷಿಸಬಹುದಾದ ಕ್ಷೇತ್ರವೇ ಹೊರತಾಗಿ ತಾನೇ ರೂಢಿಸಬಹುದಾದ ಕ್ಷೇತ್ರವಲ್ಲ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸಾಹಿತಿ, ಪತ್ರಕರ್ತ, ಅಧೀನನಲ್ಲದವ ಹೇಳಬಹುದಾದ ಅನೇಕ ಸಂಗತಿಗಳನ್ನು ಹೇಳಲಾಗದ ತೊಡಕಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ. <br /> <br /> ಪತ್ರಿಕೆ ಸರ್ಕಾರದಿಂದ ಸಹಾಯ ಪಡೆದ ಪತ್ರಿಕೆ ಆಗಬಹುದು; ಅದರ ಇಷ್ಟವನ್ನು ನಡೆಸುವ ಸೇವಕ ಆಗಬಾರದು. ಐದು ದಶಕಗಳ ಹಿಂದೆ ಮಾಸ್ತಿಯವರು ತಾಳಿದ ನಿಲುವು ಇಂದು ಮತ್ತೆ ಮತ್ತೆ ನಾವು ಚಿಂತಿಸಬೇಕಾದ ಸಂಗತಿಯಾಗಿದೆ. ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧವನ್ನು ಅವರಿಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.<br /> <br /> ಮಾಸ್ತಿಯವರು ತಮ್ಮ ಸಂಪಾದಕೀಯಗಳಲ್ಲಿ ತಮ್ಮ ಕಾಲದ ಸಾಹಿತ್ಯ, ಸಂಸ್ಕೃತಿ, ಭಾಷಾ ಸಮಸ್ಯೆ, ಏಕೀಕರಣ ಚಳವಳಿ, ಪ್ರಾಂತ್ಯವಿಚಾರ, ಕಾಶ್ಮೀರ ಸಮಸ್ಯೆ, ರಾಷ್ಟ್ರ ರಾಜಕಾರಣ, ಜಾಗತಿಕ ಬಿಕ್ಕಟ್ಟುಗಳು, ಆರ್ಥಿಕ ಸಂಗತಿ- ಹೀಗೆ ಅನೇಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ; ವಾಗ್ವಾದ ಸಂವಾದಗಳಿಗೆ ಓದುಗರನ್ನು ಆಹ್ವಾನಿಸಿದ್ದಾರೆ; ಬಂದ ಪ್ರತಿಕ್ರಿಯೆಗಳಿಗೆ ಮುಂದಿನ ಸಂಪಾದಕೀಯದಲ್ಲಿ ಸ್ಪಂದಿಸಿದ್ದಾರೆ. ಹೀಗೆ ಒಂದು ರೀತಿ ಈ ಬರಹಗಳು ಸಂವೇದನಾಶೀಲ ಮನಸ್ಸುಗಳೆಲ್ಲ ಸೇರಿ ಒಂದು ಸಾಮಾಜಿಕ ಚಲನೆಯುಂಟು ಮಾಡುವ ಪ್ರಯತ್ನದಂತೆ ತೋರುತ್ತದೆ. <br /> <br /> ನಾವು ಮಾಸ್ತಿಯವರು ಇಲ್ಲಿ ವ್ಯಕ್ತಪಡಿಸಿರುವ ಎಲ್ಲ ಅಭಿಪ್ರಾಯಗಳನ್ನೂ ಒಪ್ಪಬೇಕೆಂದಿಲ್ಲ; ಹಲವು ಸಲ ಒಪ್ಪುವುದೂ ಸಾಧ್ಯವಿಲ್ಲ. ಆದರೆ ಅವರ ವಿಚಾರಗಳನ್ನು ಗೌರವದಿಂದ ಚರ್ಚಿಸಬೇಕಾಗುತ್ತದೆ, ಉಪೇಕ್ಷಿಸಲು ಸಾಧ್ಯವಿಲ್ಲ. ಕೆಲವು ಸಲ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ಈ ಕಾಲಕ್ಕೂ ಸಲ್ಲುವಂಥವು. ಉದಾಹರಣೆಗೆ, ನೆಹರೂ ಅವರ ಬಗ್ಗೆ ಮಾಸ್ತಿಯವರ ಅಭಿಪ್ರಾಯ ಗಮನಿಸಿ: `ಪಂಡಿತ ನೆಹರೂ ವ್ಯಕ್ತಿತ್ವ ಅವರ ಜತೆಯ ಜನರ ತಲೆಯ ಮೇಲೆ ಮೂರು ಮೊಳ ಎದ್ದು ನಿಂತಿದೆ. <br /> <br /> ಅವರನ್ನು ಎದುರಿಸಲು ಯೋಗ್ಯತೆಯುಳ್ಳ ಧೀರ ಜನ ಕಾಂಗ್ರೆಸ್ಸನ್ನು ಬಿಟ್ಟು ನಡೆದಿದ್ದಾರೆ. ಹೀಗೆ ಏಕೈಕ ವೀರನಾಗಿ ಪಂಡಿತರು ಉದ್ದೇಶವಿಲ್ಲದೆ ಸರ್ವಾಧಿಕಾರದ ನೆಲೆಯಲ್ಲಿ ನಿಲ್ಲುವ ಸ್ಥಿತಿ ಒದಗಿದೆ. ಇದು ದೇಶಕ್ಕೆ ಕ್ಷೇಮವಲ್ಲ ಎನ್ನುವುದು ನಮ್ಮ ಸವಿನಯ ನಿವೇದನ~ (ಪುಟ 55, ಭಾಗ 1). ಒಂದು ಪಕ್ಷವಾಗಲೀ, ರಾಜ್ಯ, ರಾಷ್ಟ್ರಗಳಾಗಲೀ ಒಬ್ಬ ವ್ಯಕ್ತಿಯನ್ನು ಅನಗತ್ಯವಾಗಿ ವೈಭವೀಕರಿಸಿದರೆ ಅಥವಾ ಏಕವ್ಯಕ್ತಿಯ ಪ್ರಭಾವ ಇನ್ನಿಲ್ಲದಷ್ಟು ಆಕ್ರಮಿಸಿದರೆ ಆಗುವ ಅಪಾಯದ ಬಗ್ಗೆ ಮಾಸ್ತಿ ಇಲ್ಲಿ ಎಚ್ಚರಿಸುತ್ತಿದ್ದಾರೆ. <br /> <br /> ಪ್ರಸ್ತುತ ನಾವು ಇಂಥ ಅಪಾಯವನ್ನು ಕಾಣುತ್ತಿದ್ದೇವೆ. ಜನಸೇವಕರೆನ್ನಿಸಿಕೊಂಡ ಜನಪ್ರತಿನಿಧಿಗಳು ಸರ್ವಾಧಿಕಾರಿಗಳಾಗಿ ರೂಪುಗೊಳ್ಳುತ್ತಿರುವ, ತನ್ನಿಚ್ಛೆಗೆ ತಕ್ಕಂತೆ ಪಕ್ಷ, ಸಂಘಟನೆ, ರಾಜ್ಯ ಎಲ್ಲವನ್ನೂ ಬಳಸಿಕೊಳ್ಳುತ್ತಿರುವ ದುರಂತ ನಮ್ಮ ಕಣ್ಣ ಮುಂದಿದೆ.<br /> <br /> ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅ.ನ. ಕೃಷ್ಣರಾಯರು ಅಧ್ಯಕ್ಷ ಭಾಷಣ ಮಾಡಿದ್ದರ ಬಗ್ಗೆ ಮಾಸ್ತಿಯವರ ಟಿಪ್ಪಣಿ ಗಮನಿಸಿ: `ಶ್ರೀಮಾನ್ ಕೃಷ್ಣರಾಯರು ತಮ್ಮ ಭಾಷಣದಲ್ಲಿ ಹಲವಾರು ತಪ್ಪು ಮಾತುಗಳನ್ನಾಡಿದ್ದಾರೆ. ಈಚೆಗೆ ಇದನ್ನು ಇವರು ಒಂದು ಸಂಪ್ರದಾಯ ಮಾಡಿಕೊಂಡಿರುವಂತೆ ಕಾಣುತ್ತದೆ. ಇದು ತುಂಬಾ ವಿಷಾದಕರ (ಪುಟ 124, ಭಾಗ 2)~. ಮುಂದೆ ಮತ್ತೊಂದೆಡೆ ಮಾಸ್ತಿ ಅನಕೃ ಬಗ್ಗೆ ಪ್ರೀತಿಯಿಂದ ಮೆಚ್ಚಿ ಮಾತನಾಡಿದ್ದೂ ದಾಖಲಾಗಿದೆ.<br /> <br /> `ಸ್ವತಂತ್ರ ಭಾರತದಲ್ಲಿ ಸ್ತ್ರೀಯರ ಸ್ಥಾನ~ದ ಬಗ್ಗೆ ಮಾಸ್ತಿ ಅವರು ಚರ್ಚಿಸುತ್ತ ಕೌಟುಂಬಿಕ ಹಿನ್ನೆಲೆಯಲ್ಲಿ ಸ್ತ್ರೀಯ ಸಮಸ್ಯೆಯನ್ನು ವಿಶ್ಲೇಷಿಸುತ್ತಾರೆ; ಕುಟುಂಬ ರಕ್ಷಣೆ ಸ್ತ್ರೀಯ ಜವಾಬ್ದಾರಿ ಎಂಬ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. (ಪುಟ 98-105) ಮಾಸ್ತಿಯವರ ಚಿಂತನೆಯನ್ನು ಒಪ್ಪುವುದು ಕಷ್ಟ; ಅವರ ವಿಚಾರಗಳು ಪುರುಷ ಪ್ರಧಾನ ನೆಲೆಯ ಚಿಂತನೆಯ ಮುಂದುವರಿಕೆಯಂತೆ ತೋರುತ್ತವೆ.<br /> <br /> ಗಾಂಧಿ - ಅಂಬೇಡ್ಕರ್ ಇವರಲ್ಲಿ ನಿಸ್ಸಂದೇಹವಾಗಿ ಮಾಸ್ತಿಯವರ ಒಲವು ಗಾಂಧೀಜಿಯವರ ಕಡೆಗೆ. ಅಂಬೇಡ್ಕರ್ ಅವರ ವಿಚಾರಗಳನ್ನು ಮಾಸ್ತಿ ಕೆಲವು ಕಡೆ ಉಗ್ರವಾಗಿ ಖಂಡಿಸುತ್ತಾರೆ. ಒಂದು ಹಂತದಲ್ಲಿ, `ಅಂಬೇಡ್ಕರ್ ಮಹಾಶಯರು ತಮ್ಮ ಸ್ಥಾನದಲ್ಲಿ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ.<br /> <br /> ಇಂಥವರು ರಾಷ್ಟ್ರದಲ್ಲಿ ಮಂತ್ರಿಯಾಗಬಾರದು. ಅಂಬೇಡ್ಕರ್ ಇಷ್ಟರಲ್ಲೇ ಮಂತ್ರಿ ಸ್ಥಾನದಿಂದ ಬಿಡುಗಡೆ ಹೊಂದಬಹುದು ಎಂಬ ಸುದ್ದಿ ಹೊರಟಿದೆ. ಅದನ್ನು ಹೊಂದುವುದು ಅಂಬೇಡ್ಕರರಿಗೂ ಒಳಿತು; ರಾಷ್ಟ್ರಕ್ಕೂ ಒಳಿತು~ (ನೋಡಿ 129-131, ಭಾಗ 9) ಎಂದು ಅಭಿಪ್ರಾಯ ಪಡುತ್ತಾರೆ.<br /> <br /> ಈ ಎಲ್ಲವೂ ವಾಗ್ವಾದವನ್ನು, ಚರ್ಚೆಯನ್ನು ಬೆಳೆಸಬಹುದಾದಂಥ ವಿಚಾರಗಳು. ಜಾಗತಿಕ ಸಮಸ್ಯೆಗಳ ಬಗ್ಗೆಯೂ ಮಾಸ್ತಿಯವರ ಅನೇಕ ಅಭಿಪ್ರಾಯಗಳನ್ನು ನಾವು ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ.<br /> <br /> ಆರೋಗ್ಯಕರ ಚರ್ಚೆ, ಸಂವಾದ ಯಾವುದೇ ಸಮಾಜದಲ್ಲೂ ಬೆಳವಣಿಗೆಯ, ಆರೋಗ್ಯದ ಲಕ್ಷಣ. ವೈಭವೀಕರಣ ಅಥವಾ ಅಧೀನ ಸಂಸ್ಕೃತಿ ಒಂದು ಸಮಾಜವನ್ನು ಅವನತಿಯ ಹಾದಿಯ ಕಡೆಗೆ ಕೊಂಡೊಯ್ಯುತ್ತದೆ.<br /> <br /> ಮಾಸ್ತಿಯವರ ಸಂಪಾದಕೀಯ ಬರಹಗಳು ಆರೋಗ್ಯಕರ ಚರ್ಚೆಗೆ ಅವಕಾಶ ಕಲ್ಪಿಸುತ್ತವೆ; ಭಿನ್ನಾಭಿಪ್ರಾಯಗಳನ್ನು ದಿಟ್ಟವಾಗಿ ವ್ಯಕ್ತಪಡಿಸುತ್ತಾ ಪ್ರಭುತ್ವವನ್ನು ಪ್ರಶ್ನಿಸುವ ಮೂಲಕ ಜನಸಾಮಾನ್ಯರ ಆತ್ಮಗೌರವವನ್ನು ಎತ್ತಿ ಹಿಡಿಯುತ್ತವೆ. ಸಂವೇದನಾಶೀಲ ಮನಸ್ಸುಗಳನ್ನು ಚರ್ಚೆಗೆ ಆಹ್ವಾನಿಸುತ್ತವೆ.<br /> <br /> <strong>ಮಾಸ್ತಿ ಸಮಗ್ರ ಸಂಪಾದಕೀಯ</strong><br /> ಪು: 2523; ಬೆ: ರೂ. 1700<br /> ಪ: ಎಂ.ವಿ.ಜಿ.ಕೆ. ಟ್ರಸ್ಟ್, ಮಾಸ್ತಿ ಮನೆ, ಗವೀಪುರ ವಿಸ್ತರಣೆ, ಬೆಂಗಳೂರು - 560019</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1944ರಿಂದ 1965ರವರೆಗೆ ಇಪ್ಪತ್ತೊಂದು ವರ್ಷಗಳ ಕಾಲ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು `ಜೀವನ~ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಈ ಸುದೀರ್ಘ ಅವಧಿಯಲ್ಲಿ `ಜೀವನ~ ಪ್ರತಿ ತಿಂಗಳೂ ಒಂದನೇ ತಾರೀಖು ತಪ್ಪದೆ ಪ್ರಕಟವಾಗಿದೆ.<br /> <br /> ಮಹಾತ್ಮ ಗಾಂಧಿ ನಿಧನರಾದ ಸಂದರ್ಭದಲ್ಲಿ (ಜನವರಿ 30) ಅವರ ಕುರಿತಂತೆ ಒಂದು ಲೇಖನ ಪ್ರಕಟಿಸುವ ಉದ್ದೇಶದಿಂದ ಆ ತಿಂಗಳ ಸಂಚಿಕೆ ನಾಲ್ಕನೇ ತಾರೀಖು ಹೊರಬಂದಿತು. ಉಳಿದಂತೆ ಎಂದೂ `ಜೀವನ~ ಅನಿಯಮಿತಕಾಲಿಕವಾಗಲಿಲ್ಲ. <br /> <br /> ನಿಯತಕಾಲಿಕೆ ಪತ್ರಿಕೆಗಳ ಇತಿಹಾಸದಲ್ಲಿ ಇದೊಂದು ದಾಖಲೆ ಮಾತ್ರವಲ್ಲ, ಪತ್ರಿಕಾ ಸಂಪಾದಕರ ಶ್ರದ್ಧೆ, ಶಿಸ್ತು, ಓದುಗರ ಬಗೆಗಿನ ಗೌರವ - ಎಲ್ಲಕಾಲಕ್ಕೂ ಒಂದು ಮಾದರಿ ಎನ್ನಬಹುದು.<br /> <br /> ಮಾಸ್ತಿಯವರು ತಮ್ಮ ಪತ್ರಿಕೆಗೆ ತಪ್ಪದೆ ಸಂಪಾದಕೀಯ ಟಿಪ್ಪಣಿ ಬರೆಯುತ್ತಿದ್ದರು. ಯಾವುದೇ ಪತ್ರಿಕೆಯಾಗಲಿ ಸಂಪಾದಕೀಯ ಅತ್ಯಂತ ಮಹತ್ವದ್ದು; ಅದು ಪತ್ರಿಕೆಯ ಆತ್ಮವಿದ್ದಂತೆ. ಸಂಪಾದಕೀಯ ಬರಹ ಪತ್ರಿಕೆಯ ನಿಲುವನ್ನು ಸೂಚಿಸುತ್ತದೆ, ಮಾತ್ರವಲ್ಲದೆ ಲೋಕ ಹಿತವಾದ ಅನೇಕ ಸಂಗತಿಗಳಲ್ಲಿ ಮಾರ್ಗದರ್ಶಕವೂ ಆಗಿರುತ್ತದೆ. <br /> <br /> ಸಮಕಾಲೀನ ಸಂಗತಿಗಳ ಆಗುಹೋಗುಗಳ ಅರಿವು, ಇತಿಹಾಸ ಪ್ರಜ್ಞೆ, ವಿಸ್ತಾರವಾದ ಅಧ್ಯಯನ, ಬಹುಜನಪರವಾದ ಸಾಮಾಜಿಕ ಕಾಳಜಿ- ಇವೆಲ್ಲವೂ ಸಂಪಾದಕೀಯ ಬರಹದ ವಿನ್ಯಾಸವನ್ನು ರೂಪಿಸುತ್ತವೆ. ಮಾಸ್ತಿಯವರ ಸಂಪಾದಕೀಯ ಬರಹಗಳು ಈ ದೃಷ್ಟಿಯಿಂದ ಅಧ್ಯಯನ ಯೋಗ್ಯ.<br /> <br /> ಮಾಸ್ತಿಯವರು 1951-1965ರವರೆಗೆ ಬರೆದ ಹದಿನಾಲ್ಕು ವರ್ಷಗಳ ಸಂಪಾದಕೀಯ ಟಿಪ್ಪಣಿಗಳನ್ನು ಐದು ಸಂಪುಟಗಳಲ್ಲಿ ಕಾಲಾನುಕ್ರಮ ರೀತಿಯಲ್ಲಿ 1967ರಲ್ಲಿ ಪ್ರಕಟಿಸಿದರು. ಈಗ `ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್~ (ಎಂ.ವಿ.ಜೆ.ಕೆ. ಟ್ರಸ್ಟ್) ಈ ಸಂಪಾದಕೀಯ ಬರಹಗಳನ್ನು ವಿಷಯಾನುಕ್ರಮವಾಗಿ ವಿಂಗಡಿಸಿ ಹನ್ನೆರಡು ಭಾಗಗಳಲ್ಲಿ ಪುನರ್ ಮುದ್ರಿಸಿದೆ. <br /> <br /> ಇದೊಂದು ಓದುಗ ಸ್ನೇಹಿ ಕ್ರಮ. ಇದರಿಂದ ಓದುಗರಿಗೆ ಆ ಕಾಲದ ವಿವರಗಳು, ಅದರ ಬಗ್ಗೆ ಮಾಸ್ತಿಯವರ ನಿಲುವು ತಕ್ಷಣ ಸಿಗುತ್ತದೆ. ಅಧ್ಯಯನ ಮಾಡುವವರಿಗೆ ಇದು ಅತ್ಯಂತ ಉಪಯುಕ್ತ. ಇಲ್ಲಿಯೇ ಮತ್ತೊಂದು ಮುಖ್ಯ ಸಂಗತಿಯನ್ನೂ ಪ್ರಸ್ತಾಪಿಸಬೇಕು.<br /> <br /> ನಮ್ಮ ಮಹತ್ವದ ಲೇಖಕರ ಕೃತಿಗಳು ಅಲಭ್ಯವೆನ್ನಿಸದೆ ಸಹೃದಯ ಓದುಗರಿಗೆ ಸಿಗುವಂತಿರಬೇಕು. ಸಮಾಜ ಜಡವಾಗದೆ ಜೀವಂತವಾಗಿರಬೇಕಾದರೆ ಶ್ರೇಷ್ಠ ಮನಸ್ಸುಗಳ ಚಿಂತನೆಗಳು ಸಮಕಾಲೀನ ಸನ್ನಿವೇಶಕ್ಕೆ ಒದಗಿಬಂದು ಚಲನಶೀಲತೆಗೆ ಕಾರಣವಾಗುವಂತಿರಬೇಕು. <br /> <br /> ಅಂಥ ಚಿಂತನೆಗಳ ಜೊತೆ ಸಂವಾದ ವಾಗ್ವಾದಗಳ ಮೂಲಕ ಹೊಸ ಹುಟ್ಟು ಸಾಧ್ಯ; ಬದಲಾವಣೆ ಸಾಧ್ಯ. ಎಂ.ವಿ.ಜೆ.ಕೆ. ಟ್ರಸ್ಟ್ ಮಾಸ್ತಿಯವರ ಎಲ್ಲ ಕೃತಿಗಳೂ ಓದುಗರಿಗೆ ಲಭ್ಯವಾಗುವ ವ್ಯವಸ್ಥೆ ಮಾಡುತ್ತಿರುವುದು ಸ್ತುತ್ಯಾರ್ಹ ಸಂಗತಿ.<br /> <br /> ಬೃಹತ್ ಗಾತ್ರದ ಈ ಸಂಪಾದಕೀಯ ಸಂಪುಟಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಮಾಸ್ತಿಯವರ ಓದಿನ, ತಿಳಿವಳಿಕೆಯ ವಿಸ್ತಾರ, ವೈವಿಧ್ಯ ಬೆರಗು ಮೂಡಿಸುತ್ತದೆ. ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರಗಳನ್ನು ಅವರು ಇಲ್ಲಿ ಆಪ್ತವಾಗಿ ಮನೆಮಾತಿನ ಧಾಟಿಯಲ್ಲಿ ಚರ್ಚಿಸುತ್ತಾರೆ. <br /> <br /> ವಿನಯ ಬಿಡದೆ ಮೆಲುಮಾತಿನಲ್ಲೇ ತಮ್ಮ ನಿಲುವನ್ನು, ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸುತ್ತಾರೆ. ತಾವು ಒಪ್ಪದ ವಿಚಾರಗಳನ್ನೂ ಹೇಗೆ ಗೌರವದಿಂದ ಹೇಳಬಹುದು ಎಂಬುದಕ್ಕೆ ಮಾಸ್ತಿಯವರ ಈ ಬರಹಗಳು ಉತ್ತಮ ನಿದರ್ಶನ.<br /> <br /> ಮಾತ್ರವಲ್ಲ ಖಂಡಿಸಬೇಕಾದಾಗ ಸ್ಪಷ್ಟ ಮಾತುಗಳಲ್ಲಿ ವಿರೋಧಿಸಿ, ಆ ನಂತರ ಆ ವ್ಯಕ್ತಿ ಅಥವಾ ಸಂಸ್ಥೆ ಅಥವಾ ರಾಷ್ಟ್ರ ಒಳ್ಳೆಯದು ಮಾಡಿದಾಗ ಅದನ್ನೂ ಮುಕ್ತವಾಗಿ ಪ್ರಶಂಸಿಸುವ ಕ್ರಮವೂ ಇಲ್ಲಿದೆ. <br /> <br /> ಅಂದರೆ ನಿಷ್ಪಕ್ಷಪಾತ ದೃಷ್ಟಿ ಇಲ್ಲಿಯ ಬರಹಗಳ ಮೂಲ ಗುಣ. ಇಡೀ ಬರಹದ ವಿನ್ಯಾಸವನ್ನು ಮಾಸ್ತಿಯವರು ಪ್ರಮುಖವಾಗಿ ಗೌರವಿಸುವ `ಸಂಯಮ~ ಹಾಗೂ `ಸ್ವಾತಂತ್ರ್ಯ~ - ಈ ಎರಡು ಮೌಲ್ಯಗಳು ರೂಪಿಸಿದಂತೆ ತೋರುತ್ತದೆ.<br /> <br /> ಪತ್ರಿಕಾ ಮಾಧ್ಯಮದ ಬಗ್ಗೆ ಮಾಸ್ತಿ ತಮ್ಮ ಸಂಪಾದಕೀಯ ಬರಹಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿ, ಅದರ ಮಹತ್ವವನ್ನು ಮನಗಾಣಿಸುತ್ತಾರೆ. ಒಂದು ಭಾಷೆಯ ಉನ್ನತಿಯ ಮುಖ್ಯ ಲಕ್ಷಣಗಳಲ್ಲೊಂದು ಆ ಭಾಷೆಯಲ್ಲಿ ಹಲವು ಉತ್ತಮ ಪತ್ರಿಕೆಗಳಿರುವುದು ಎಂದು ಮಾಸ್ತಿ ಭಾವಿಸುತ್ತಾರೆ. <br /> <br /> ಅದರಲ್ಲೂ ಸಾಹಿತ್ಯಕ ಕಿರು ಪತ್ರಿಕೆಗಳ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. ಶ್ರೇಷ್ಠ ಪತ್ರಿಕೆ ಎಂದರೆ ಅದರಲ್ಲಿ ಪ್ರಕಟವಾದ ಬರಹಗಳು ಮರ್ಯಾದೆ ಮೀರದೆ ಒಟ್ಟು ಸಮಾಜದ ಕ್ಷೇಮ ಚಿಂತನೆ ಮಾಡುವಂತಿರಬೇಕು; ಅಲ್ಪವಾದ ಕ್ಷುದ್ರ ಅಥವಾ ಸಂಕುಚಿತ ಎನ್ನಬಹುದಾದ ದೃಷ್ಟಿಯಿಂದ ಪ್ರೇರಿತವಾಗಿರಬಾರದು; ಅವು ಪ್ರಕಟಿಸುವ ಸಂಗತಿ ಶುಚಿಯಾಗಿರಬೇಕು. ಇಂಥ ಪತ್ರಿಕೆ ಜನಪ್ರಿಯವಾಗುವುದಿಲ್ಲ ನಿಜ; ಆದರೆ ಜನಹಿತ ಸಾಧಿಸುತ್ತವೆ.<br /> <br /> ಜನಪ್ರಿಯತೆಯ ಹೆಸರಿನಲ್ಲಿ ರೋಚಕ ಬರಹಗಳನ್ನು ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದನ್ನು ದ್ರೋಹವೆಂದು ಮಾಸ್ತಿ ಭಾವಿಸುತ್ತಾರೆ. ಈ ಪತ್ರಿಕಾ ನಿಯಮಗಳನ್ನು ಅವರು ತಮ್ಮ ಸಂಪಾದಕತ್ವದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದರೆಂಬುದೂ ಮಹತ್ವದ ಸಂಗತಿ.<br /> <br /> ಪತ್ರಿಕೆ ಎಂದರೆ ಸಾಹಿತಿಗಳ ಕೆಲಸ ಎಂದು ಕೆಲವರು ಭಾವಿಸುತ್ತಾರೆ. ಪತ್ರಿಕೆಯ ಬರಹ, ಚಾಲನ ಸಾಹಿತಿಗಳ ಕೆಲಸ, ದಿಟ; ಆದರೆ ಅದರ ಪೋಷಣೆ ಜನತೆಯ ಕೆಲಸ, ಎಂದರೆ ದೇಶದ ಕಷ್ಟ ಸುಖಗಳನ್ನು ಕುರಿತು ಯೋಚಿಸಬಲ್ಲ ಪ್ರಬುದ್ಧರ ಕೆಲಸ.<br /> <br /> ಕಾರ್ಖಾನೆ ಕೈಗಾರಿಕೆ, ಉದ್ಯೋಗ ವ್ಯಾಪಾರ ಯಾವುದೇ ಉದ್ಯಮದಲ್ಲಿ ತೊಡಗಿರುವ ನಮ್ಮ ಹಿರಿಯರು ಇಂಥ ಪತ್ರಿಕೆಗಳಿಗೆ ಬೆಂಬಲ ನೀಡುವುದು ತಮ್ಮ ಕರ್ತವ್ಯ ಎಂದು ಕಾಣಬೇಕು. ಓದುಗರು ಕೊಂಡು ಓದುವ ಮೂಲಕ ಪತ್ರಿಕೆಯನ್ನು ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಬೇಕು; ಸರ್ಕಾರವೂ ಇಂಥ ಪತ್ರಿಕೆಗಳನ್ನು ಪ್ರೋತ್ಸಾಹಿಸಬೇಕು. <br /> <br /> ಮಾಸ್ತಿಯವರ ಪ್ರಕಾರ ಒಂದು ಪತ್ರಿಕೆಯನ್ನು ಬೆಳೆಸುವುದೆಂದರೆ ದೇಶ ಕಟ್ಟುವ ಕೆಲಸ. ಸಮೂಹ ಮಾಧ್ಯಮದ ಮಹತ್ವವನ್ನು, ಜವಾಬ್ದಾರಿಯನ್ನು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಅವರು ತಮ್ಮ ಸಂಪಾದಕೀಯ ಬರಹಗಳಲ್ಲಿ ಮನವರಿಕೆಯಾಗುವಂತೆ ಪ್ರತಿಪಾದಿಸುತ್ತಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಚಿಂತನೆ ಮನನೀಯವಾದುದು.<br /> <br /> ಮಾಸ್ತಿಯವರು ಮತ್ತೊಂದು ಮಹತ್ವದ ಸಂಗತಿಯನ್ನು ಪ್ರಸ್ತಾಪಿಸುತ್ತಾರೆ. ಸಾಹಿತ್ಯ, ಸಂಸ್ಕೃತಿ, ಸಮೂಹ ಮಾಧ್ಯಮ ಸರ್ಕಾರ ಪೋಷಿಸಬಹುದಾದ ಕ್ಷೇತ್ರವೇ ಹೊರತಾಗಿ ತಾನೇ ರೂಢಿಸಬಹುದಾದ ಕ್ಷೇತ್ರವಲ್ಲ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವ ಸಾಹಿತಿ, ಪತ್ರಕರ್ತ, ಅಧೀನನಲ್ಲದವ ಹೇಳಬಹುದಾದ ಅನೇಕ ಸಂಗತಿಗಳನ್ನು ಹೇಳಲಾಗದ ತೊಡಕಿಗೆ ಸಿಕ್ಕಿಹಾಕಿಕೊಳ್ಳುತ್ತಾನೆ. <br /> <br /> ಪತ್ರಿಕೆ ಸರ್ಕಾರದಿಂದ ಸಹಾಯ ಪಡೆದ ಪತ್ರಿಕೆ ಆಗಬಹುದು; ಅದರ ಇಷ್ಟವನ್ನು ನಡೆಸುವ ಸೇವಕ ಆಗಬಾರದು. ಐದು ದಶಕಗಳ ಹಿಂದೆ ಮಾಸ್ತಿಯವರು ತಾಳಿದ ನಿಲುವು ಇಂದು ಮತ್ತೆ ಮತ್ತೆ ನಾವು ಚಿಂತಿಸಬೇಕಾದ ಸಂಗತಿಯಾಗಿದೆ. ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧವನ್ನು ಅವರಿಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.<br /> <br /> ಮಾಸ್ತಿಯವರು ತಮ್ಮ ಸಂಪಾದಕೀಯಗಳಲ್ಲಿ ತಮ್ಮ ಕಾಲದ ಸಾಹಿತ್ಯ, ಸಂಸ್ಕೃತಿ, ಭಾಷಾ ಸಮಸ್ಯೆ, ಏಕೀಕರಣ ಚಳವಳಿ, ಪ್ರಾಂತ್ಯವಿಚಾರ, ಕಾಶ್ಮೀರ ಸಮಸ್ಯೆ, ರಾಷ್ಟ್ರ ರಾಜಕಾರಣ, ಜಾಗತಿಕ ಬಿಕ್ಕಟ್ಟುಗಳು, ಆರ್ಥಿಕ ಸಂಗತಿ- ಹೀಗೆ ಅನೇಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ; ವಾಗ್ವಾದ ಸಂವಾದಗಳಿಗೆ ಓದುಗರನ್ನು ಆಹ್ವಾನಿಸಿದ್ದಾರೆ; ಬಂದ ಪ್ರತಿಕ್ರಿಯೆಗಳಿಗೆ ಮುಂದಿನ ಸಂಪಾದಕೀಯದಲ್ಲಿ ಸ್ಪಂದಿಸಿದ್ದಾರೆ. ಹೀಗೆ ಒಂದು ರೀತಿ ಈ ಬರಹಗಳು ಸಂವೇದನಾಶೀಲ ಮನಸ್ಸುಗಳೆಲ್ಲ ಸೇರಿ ಒಂದು ಸಾಮಾಜಿಕ ಚಲನೆಯುಂಟು ಮಾಡುವ ಪ್ರಯತ್ನದಂತೆ ತೋರುತ್ತದೆ. <br /> <br /> ನಾವು ಮಾಸ್ತಿಯವರು ಇಲ್ಲಿ ವ್ಯಕ್ತಪಡಿಸಿರುವ ಎಲ್ಲ ಅಭಿಪ್ರಾಯಗಳನ್ನೂ ಒಪ್ಪಬೇಕೆಂದಿಲ್ಲ; ಹಲವು ಸಲ ಒಪ್ಪುವುದೂ ಸಾಧ್ಯವಿಲ್ಲ. ಆದರೆ ಅವರ ವಿಚಾರಗಳನ್ನು ಗೌರವದಿಂದ ಚರ್ಚಿಸಬೇಕಾಗುತ್ತದೆ, ಉಪೇಕ್ಷಿಸಲು ಸಾಧ್ಯವಿಲ್ಲ. ಕೆಲವು ಸಲ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ಈ ಕಾಲಕ್ಕೂ ಸಲ್ಲುವಂಥವು. ಉದಾಹರಣೆಗೆ, ನೆಹರೂ ಅವರ ಬಗ್ಗೆ ಮಾಸ್ತಿಯವರ ಅಭಿಪ್ರಾಯ ಗಮನಿಸಿ: `ಪಂಡಿತ ನೆಹರೂ ವ್ಯಕ್ತಿತ್ವ ಅವರ ಜತೆಯ ಜನರ ತಲೆಯ ಮೇಲೆ ಮೂರು ಮೊಳ ಎದ್ದು ನಿಂತಿದೆ. <br /> <br /> ಅವರನ್ನು ಎದುರಿಸಲು ಯೋಗ್ಯತೆಯುಳ್ಳ ಧೀರ ಜನ ಕಾಂಗ್ರೆಸ್ಸನ್ನು ಬಿಟ್ಟು ನಡೆದಿದ್ದಾರೆ. ಹೀಗೆ ಏಕೈಕ ವೀರನಾಗಿ ಪಂಡಿತರು ಉದ್ದೇಶವಿಲ್ಲದೆ ಸರ್ವಾಧಿಕಾರದ ನೆಲೆಯಲ್ಲಿ ನಿಲ್ಲುವ ಸ್ಥಿತಿ ಒದಗಿದೆ. ಇದು ದೇಶಕ್ಕೆ ಕ್ಷೇಮವಲ್ಲ ಎನ್ನುವುದು ನಮ್ಮ ಸವಿನಯ ನಿವೇದನ~ (ಪುಟ 55, ಭಾಗ 1). ಒಂದು ಪಕ್ಷವಾಗಲೀ, ರಾಜ್ಯ, ರಾಷ್ಟ್ರಗಳಾಗಲೀ ಒಬ್ಬ ವ್ಯಕ್ತಿಯನ್ನು ಅನಗತ್ಯವಾಗಿ ವೈಭವೀಕರಿಸಿದರೆ ಅಥವಾ ಏಕವ್ಯಕ್ತಿಯ ಪ್ರಭಾವ ಇನ್ನಿಲ್ಲದಷ್ಟು ಆಕ್ರಮಿಸಿದರೆ ಆಗುವ ಅಪಾಯದ ಬಗ್ಗೆ ಮಾಸ್ತಿ ಇಲ್ಲಿ ಎಚ್ಚರಿಸುತ್ತಿದ್ದಾರೆ. <br /> <br /> ಪ್ರಸ್ತುತ ನಾವು ಇಂಥ ಅಪಾಯವನ್ನು ಕಾಣುತ್ತಿದ್ದೇವೆ. ಜನಸೇವಕರೆನ್ನಿಸಿಕೊಂಡ ಜನಪ್ರತಿನಿಧಿಗಳು ಸರ್ವಾಧಿಕಾರಿಗಳಾಗಿ ರೂಪುಗೊಳ್ಳುತ್ತಿರುವ, ತನ್ನಿಚ್ಛೆಗೆ ತಕ್ಕಂತೆ ಪಕ್ಷ, ಸಂಘಟನೆ, ರಾಜ್ಯ ಎಲ್ಲವನ್ನೂ ಬಳಸಿಕೊಳ್ಳುತ್ತಿರುವ ದುರಂತ ನಮ್ಮ ಕಣ್ಣ ಮುಂದಿದೆ.<br /> <br /> ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅ.ನ. ಕೃಷ್ಣರಾಯರು ಅಧ್ಯಕ್ಷ ಭಾಷಣ ಮಾಡಿದ್ದರ ಬಗ್ಗೆ ಮಾಸ್ತಿಯವರ ಟಿಪ್ಪಣಿ ಗಮನಿಸಿ: `ಶ್ರೀಮಾನ್ ಕೃಷ್ಣರಾಯರು ತಮ್ಮ ಭಾಷಣದಲ್ಲಿ ಹಲವಾರು ತಪ್ಪು ಮಾತುಗಳನ್ನಾಡಿದ್ದಾರೆ. ಈಚೆಗೆ ಇದನ್ನು ಇವರು ಒಂದು ಸಂಪ್ರದಾಯ ಮಾಡಿಕೊಂಡಿರುವಂತೆ ಕಾಣುತ್ತದೆ. ಇದು ತುಂಬಾ ವಿಷಾದಕರ (ಪುಟ 124, ಭಾಗ 2)~. ಮುಂದೆ ಮತ್ತೊಂದೆಡೆ ಮಾಸ್ತಿ ಅನಕೃ ಬಗ್ಗೆ ಪ್ರೀತಿಯಿಂದ ಮೆಚ್ಚಿ ಮಾತನಾಡಿದ್ದೂ ದಾಖಲಾಗಿದೆ.<br /> <br /> `ಸ್ವತಂತ್ರ ಭಾರತದಲ್ಲಿ ಸ್ತ್ರೀಯರ ಸ್ಥಾನ~ದ ಬಗ್ಗೆ ಮಾಸ್ತಿ ಅವರು ಚರ್ಚಿಸುತ್ತ ಕೌಟುಂಬಿಕ ಹಿನ್ನೆಲೆಯಲ್ಲಿ ಸ್ತ್ರೀಯ ಸಮಸ್ಯೆಯನ್ನು ವಿಶ್ಲೇಷಿಸುತ್ತಾರೆ; ಕುಟುಂಬ ರಕ್ಷಣೆ ಸ್ತ್ರೀಯ ಜವಾಬ್ದಾರಿ ಎಂಬ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. (ಪುಟ 98-105) ಮಾಸ್ತಿಯವರ ಚಿಂತನೆಯನ್ನು ಒಪ್ಪುವುದು ಕಷ್ಟ; ಅವರ ವಿಚಾರಗಳು ಪುರುಷ ಪ್ರಧಾನ ನೆಲೆಯ ಚಿಂತನೆಯ ಮುಂದುವರಿಕೆಯಂತೆ ತೋರುತ್ತವೆ.<br /> <br /> ಗಾಂಧಿ - ಅಂಬೇಡ್ಕರ್ ಇವರಲ್ಲಿ ನಿಸ್ಸಂದೇಹವಾಗಿ ಮಾಸ್ತಿಯವರ ಒಲವು ಗಾಂಧೀಜಿಯವರ ಕಡೆಗೆ. ಅಂಬೇಡ್ಕರ್ ಅವರ ವಿಚಾರಗಳನ್ನು ಮಾಸ್ತಿ ಕೆಲವು ಕಡೆ ಉಗ್ರವಾಗಿ ಖಂಡಿಸುತ್ತಾರೆ. ಒಂದು ಹಂತದಲ್ಲಿ, `ಅಂಬೇಡ್ಕರ್ ಮಹಾಶಯರು ತಮ್ಮ ಸ್ಥಾನದಲ್ಲಿ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ.<br /> <br /> ಇಂಥವರು ರಾಷ್ಟ್ರದಲ್ಲಿ ಮಂತ್ರಿಯಾಗಬಾರದು. ಅಂಬೇಡ್ಕರ್ ಇಷ್ಟರಲ್ಲೇ ಮಂತ್ರಿ ಸ್ಥಾನದಿಂದ ಬಿಡುಗಡೆ ಹೊಂದಬಹುದು ಎಂಬ ಸುದ್ದಿ ಹೊರಟಿದೆ. ಅದನ್ನು ಹೊಂದುವುದು ಅಂಬೇಡ್ಕರರಿಗೂ ಒಳಿತು; ರಾಷ್ಟ್ರಕ್ಕೂ ಒಳಿತು~ (ನೋಡಿ 129-131, ಭಾಗ 9) ಎಂದು ಅಭಿಪ್ರಾಯ ಪಡುತ್ತಾರೆ.<br /> <br /> ಈ ಎಲ್ಲವೂ ವಾಗ್ವಾದವನ್ನು, ಚರ್ಚೆಯನ್ನು ಬೆಳೆಸಬಹುದಾದಂಥ ವಿಚಾರಗಳು. ಜಾಗತಿಕ ಸಮಸ್ಯೆಗಳ ಬಗ್ಗೆಯೂ ಮಾಸ್ತಿಯವರ ಅನೇಕ ಅಭಿಪ್ರಾಯಗಳನ್ನು ನಾವು ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಚರ್ಚೆಗೆ ಎತ್ತಿಕೊಳ್ಳಬಹುದಾಗಿದೆ.<br /> <br /> ಆರೋಗ್ಯಕರ ಚರ್ಚೆ, ಸಂವಾದ ಯಾವುದೇ ಸಮಾಜದಲ್ಲೂ ಬೆಳವಣಿಗೆಯ, ಆರೋಗ್ಯದ ಲಕ್ಷಣ. ವೈಭವೀಕರಣ ಅಥವಾ ಅಧೀನ ಸಂಸ್ಕೃತಿ ಒಂದು ಸಮಾಜವನ್ನು ಅವನತಿಯ ಹಾದಿಯ ಕಡೆಗೆ ಕೊಂಡೊಯ್ಯುತ್ತದೆ.<br /> <br /> ಮಾಸ್ತಿಯವರ ಸಂಪಾದಕೀಯ ಬರಹಗಳು ಆರೋಗ್ಯಕರ ಚರ್ಚೆಗೆ ಅವಕಾಶ ಕಲ್ಪಿಸುತ್ತವೆ; ಭಿನ್ನಾಭಿಪ್ರಾಯಗಳನ್ನು ದಿಟ್ಟವಾಗಿ ವ್ಯಕ್ತಪಡಿಸುತ್ತಾ ಪ್ರಭುತ್ವವನ್ನು ಪ್ರಶ್ನಿಸುವ ಮೂಲಕ ಜನಸಾಮಾನ್ಯರ ಆತ್ಮಗೌರವವನ್ನು ಎತ್ತಿ ಹಿಡಿಯುತ್ತವೆ. ಸಂವೇದನಾಶೀಲ ಮನಸ್ಸುಗಳನ್ನು ಚರ್ಚೆಗೆ ಆಹ್ವಾನಿಸುತ್ತವೆ.<br /> <br /> <strong>ಮಾಸ್ತಿ ಸಮಗ್ರ ಸಂಪಾದಕೀಯ</strong><br /> ಪು: 2523; ಬೆ: ರೂ. 1700<br /> ಪ: ಎಂ.ವಿ.ಜಿ.ಕೆ. ಟ್ರಸ್ಟ್, ಮಾಸ್ತಿ ಮನೆ, ಗವೀಪುರ ವಿಸ್ತರಣೆ, ಬೆಂಗಳೂರು - 560019</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>