ಸೋನಿಯಾ ವಿರುದ್ಧ ಜಗನ್ ವಾಗ್ದಾಳಿ

ನವದೆಹಲಿ(ಪಿಟಿಐ): ರಾಜಕೀಯ ಲಾಭ ಪಡೆಯುವ ಏಕೈಕ ಉದ್ದೇಶದಿಂದಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಂಧ್ರ ವಿಭಜನೆ ಮಾಡುತ್ತಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಆಪಾದಿಸಿದ್ದಾರೆ.
ಇಲ್ಲಿನ ಜಂತರ್ ಮಂತರ್ನಲ್ಲಿ ಅಭಿಮಾನಿಗಳೊಂದಿಗೆ ಸೋಮವಾರ ಧರಣಿ ನಡೆಸಿದ ಜಗನ್, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವುದಕ್ಕೋಸ್ಕರವೇ ಕೇಂದ್ರದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜ್ಯ ವಿಭಜನೆ ಮಾಡುತ್ತಿದೆ. ಇದಕ್ಕಾಗಿ ತೆಲಂಗಾಣದಲ್ಲಿ ಟಿಆರ್ಎಸ್ ಜತೆ ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸೋನಿಯಾ ಅವರ ಇಟಲಿ ಹಿನ್ನೆಲೆಯ ಬಗ್ಗೆ ಗೇಲಿ ಮಾಡಿದ ಜಗನ್, ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಅಲ್ಲ ಅದು ‘ಇಟಾಲಿಯನ್ ನ್ಯಾಷನಲ್ ಕಾಂಗ್ರೆಸ್’ ಎಂದು ವ್ಯಂಗ್ಯವಾಡಿದರು. ಬ್ರಿಟಿಷರೂ ಆಂಧ್ರಕ್ಕೆ ಮಾಡದ್ದನ್ನು ಸೋನಿಯಾ ಈಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಸೀಮಾಂಧ್ರ ಸಂಸದರನ್ನು ಅಮಾನತು ಮಾಡುವ ಹುನ್ನಾರದಿಂದಲೇ ಸಂಸದ ಲಗಡಪತಿ ರಾಜ ಗೋಪಾಲ್ ಅವರಿಂದ ಸಂಸತ್ತಿನಲ್ಲಿ ಪೆಪ್ಪರ್ ಸ್ಪ್ರೇ ಮಾಡಿಸಿದ್ದಾರೆ ಎಂದು ದೂರಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ ಯಾವುದೇ ನಾಯಕರು ಏಕೀಕೃತ ಆಂಧ್ರಕ್ಕೆ ಬೆಂಬಲ ನೀಡಿದರೆ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಜಗನ್ ಘೋಷಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.