‘ಅರ್ಜಿ’ ಸಿಕ್ಕವರಿಗೆ ‘ಮನೆ’ ಪಡೆದಷ್ಟೇ ಸಂಭ್ರಮ!

ಹುಬ್ಬಳ್ಳಿ: ‘ಇನ್ನೇನು... ಮನೆ ಸಿಕ್ಕೇ ಬಿಟ್ತು’ ಎಂಬ ಸಂತಸದಲ್ಲಿದ್ದಾರೆ ‘ಆಶ್ರಯ’ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಅರ್ಜಿ ಕೈಗೆ ಸಿಕ್ಕ ನಿವೇಶನರಹಿತ ಜನ!
ಆದರೆ ಪಾಲಿಕೆಯ ಮೂಲಗಳ ಪ್ರಕಾರ, ಯಲ್ಲಾಪುರ ಗ್ರಾಮ ಮಂಟೂರು ರಸ್ತೆಯಲ್ಲಿರುವ 34.27 ಎಕರೆ ಪ್ರದೇಶದಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಡಿ ಜಿ–2 ಪರಿಕಲ್ಪನೆಯಲ್ಲಿ ನಿರ್ಮಿಸಿ ಹಂಚಿಕೆ ಮಾಡಲು ಉದ್ದೇಶಿಸಿದ ಸುಮಾರು 3,000 ‘ಆಶ್ರಯ’ ಮನೆ ಯೋಜನೆ ಇನ್ನೂ ಸ್ಪಷ್ಟ ರೂಪ ಪಡೆದಿಲ್ಲ.
‘ಅರ್ಜಿ ಆಹ್ವಾನಿಸಿದ ಕ್ರಮ, ಕೂಸು ಹುಟ್ಟು ಮುನ್ನವೇ ಕುಲಾವಿ ಹೊಲಿಸಿದರು ಎಂಬಂತಾಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ!
ಈ ಮಧ್ಯೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ‘ವಸತಿ ಯೋಜನೆ’ ಘೋಷಿಸಿ ಅರ್ಜಿ ವಿತರಿಸಲು ಆರಂಭಿಸಲಾಗಿದೆ. ಅರ್ಜಿ ಸ್ವೀಕರಿಸುವ ಅವಧಿ ಫೆ. 28ರೊಳಗೆ ಮುಗಿದು ವಾರ ಕಳೆಯುವಷ್ಟರಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ನಂತರ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದು ಇಡೀ ಪ್ರಕ್ರಿಯೆ ಸ್ಥಗಿತಗೊಳ್ಳುವುದು ಖಚಿತ. ಯಾವುದೇ ಪೂರ್ವಯೋಜನೆ ಇಲ್ಲದೆ ಅರ್ಜಿ ಆಹ್ವಾನಿಸಿರುವುದು ಚುನಾವಣಾ ಸ್ಟಂಟ್’ ಎಂಬ ಮಾತೂ ಪಾಲಿಕೆ ಅಂಗಳದಲ್ಲಿ ಕೇಳಿಬರುತ್ತಿದೆ.
‘ಶಾಸಕ ಪ್ರಸಾದ ಅಬ್ಬಯ್ಯ ಅವರ ನೇತೃತ್ವದಲ್ಲಿ ಪಾಲಿಕೆ ಆಯುಕ್ತ, ಆಶ್ರಯ ಯೋಜನೆ ವಿಭಾಗ ಮತ್ತು ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ‘ಆಶ್ರಯ’ ಯೋಜನೆಯಡಿ ಸುಮಾರು 3000 ಮನೆ ನಿರ್ಮಿಸಿ ಹಂಚಿಕೆ ಮಾಡಲು ವಸತಿರಹಿತರಿಂದ ಅರ್ಜಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಅದನ್ನು ಹೊರತುಪಡಿಸಿದರೆ, ಈ ನಿಟ್ಟಿನಲ್ಲಿ ಬೇರೆ ಯಾವುದೇ ಬೆಳವಣಿಗೆ ಆಗಿಲ್ಲ’ ಎಂದು ಪಾಲಿಕೆಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿರುವ ಪಾಲಿಕೆಯ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ, ‘ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ’ ಎಂದಷ್ಟೆ ಹೇಳಿದ್ದಾರೆ. ‘ಆಶ್ರಯ ಯೋಜನೆಯ ರೂಪುರೇಷೆ ಇನ್ನೂ ಅಂತಿಮಗೊಂಡಿಲ್ಲ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರಿದಿದೆ. ಈ ಮಧ್ಯೆಯೇ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಪಾಲಿಕೆಯ ಕಂದಾಯ ಅಧಿಕಾರಿ ಎಂ.ಬಿ. ಸಬರದ ತಿಳಿಸಿದ್ದಾರೆ.
ತಲೆಯ ಮೇಲೊಂದು ಸೂರಿಗಾಗಿ ಕಾತರಿಸುವ ಬಡವರ್ಗ, ಅರ್ಜಿ ಪಡೆಯುವ ಆಸೆಯಿಂದ ಬೆಳ್ಳಂಬೆಳಿಗ್ಗೆ ವಲಯ ಕಚೇರಿಗಳ ಎದುರು ಜಮಾಯಿಸುತ್ತಿದ್ದಾರೆ. ಅಂದಾಜು ಮೂರು ಸಾವಿರ ಮನೆ ಹಂಚಿಕೆಗೆ ಅರ್ಜಿ ಆಹ್ವಾನಿಸಿದ್ದರೂ, 30 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಬಹುದು ಎನ್ನುವ ನಿರೀಕ್ಷೆ ಪಾಲಿಕೆ ಅಧಿಕಾರಿಗಳದ್ದು.
ಪೂರ್ವಯೋಜನೆ ಇಲ್ಲ:‘ಆಶ್ರಯ ಮನೆ ಯೋಜನೆ ಮೂಲಕ ತಲೆಯ ಮೇಲೊಂದು ಸೂರು ಕಲ್ಪಿಸಿಕೊಳ್ಳಬೇಕೆಂಬ ಆಸೆಯಿಂದ ಅರ್ಜಿ ಪಡೆಯಲು ವಲಯ ಕಚೇರಿಗಳ ಎದುರು ಸಾಲುಗಟ್ಟಿ ನಿಂತವರನ್ನು ಕಂಡಾಗ ಮನಸ್ಸು ಕರಗುತ್ತದೆ. ಆಶ್ರಯ ಮನೆಗಾಗಿ ಈ ಹಿಂದೆ ಸಾವಿರಾರು ಮಂದಿ ಸಲ್ಲಿಸಿದ ಅರ್ಜಿಗಳು ಪಾಲಿಕೆ ಕಚೇರಿಯಲ್ಲಿವೆ. ಯಾವುದೇ ಪೂರ್ವಯೋಜನೆ ಇಲ್ಲದೆ ಅರ್ಜಿ ಆಹ್ವಾನಿಸಿ, ಜನರಿಗೆ ಮಂಕುಬೂದಿ ಎರಚುವುದು ಸರಿಯಲ್ಲ’ ಎಂದು ಪಾಲಿಕೆ ಚುನಾಯಿತ ಸದಸ್ಯ ಅಲ್ತಾಫ್ ಕಿತ್ತೂರ ಪ್ರತಿಕ್ರಿಯಿಸಿದ್ದಾರೆ.
ಮೋಸ ಹೋಗಬೇಡಿ: ಶಾಸಕ ಅಬ್ಬಯ್ಯ
‘ವಸತಿರಹಿತ ಮನೆ ಒದಗಿಸುವ ಉದ್ದೇಶದಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ವಲಯ ಕಚೇರಿ ನಂ. 8,9,10,11ರಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಪಾಲಿಕೆ ವೆಬ್ಸೈಟ್ನಿಂದಲೂ ಅರ್ಜಿ ಪಡೆದು ಸಲ್ಲಿಸಬಹುದು. ಜನರು ಕಳೆದ ನಾಲ್ಕು ದಿನಗಳಿಂದ ಹಗಲಿರುಳು ಸರದಿಯಲ್ಲಿ ನಿಂತು ಅರ್ಜಿ ಪಡೆಯುತ್ತಿದ್ದಾರೆ. ಅಮಾಯಕರನ್ನು ಗುರಿಯಾಗಿಸಿಕೊಂಡು ಅರ್ಜಿಗಳನ್ನು ಮನಬಂದಂತೆ ಹಣಕ್ಕೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಮೋಸಗಾರರಿಗೆ ಅವಕಾಶ ನೀಡಬಾರದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಮನವಿ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.