‘ಪ್ರಭಾವಿಗಳಿಂದಲೇ ಒತ್ತುವರಿ’

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ 368 ನಿರ್ಮಾಣ ಸಂಸ್ಥೆಗಳ ಬೃಹತ್ ಕಟ್ಟಡಗಳು, 29 ಟೆಕ್ ಪಾರ್ಕ್ಗಳು, 150 ಐಟಿ–ಬಿಟಿ ಕಂಪೆನಿಗಳು ಹಾಗೂ 30ಕ್ಕೂ ಅಧಿಕ ಮಾಲ್ಗಳು, ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿವೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಹುತೇಕ ಬಿಲ್ಡರ್ಗಳು ರಾಜಕಾಲುವೆಗಳ ದಿಕ್ಕನ್ನೇ ಬದಲಿಸಿರುವ ಉದಾಹರಣೆಗಳು ಇವೆ. ರಾಜಕಾಲುವೆಗಳು, ಕೆರೆಗಳು ಹಾಗೂ ಮೀಸಲು ಪ್ರದೇಶಗಳ ಪೈಕಿ ಶೇ 75ರಷ್ಟು ಪ್ರದೇಶಗಳನ್ನು ಬೃಹತ್ ವಾಣಿಜ್ಯ ಸಂಕೀರ್ಣಗಳು, ಟೆಕ್ಪಾರ್ಕ್ಗಳು ಒತ್ತುವರಿ ಮಾಡಿವೆ. ಪ್ರಭಾವಿ ರಾಜಕಾರಣಿಗಳೂ ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಒತ್ತುವರಿಯಾಗಿರುವ ಜಾಗಗಳ ಒಟ್ಟು ಮೌಲ್ಯ 1.2 ಲಕ್ಷ ಕೋಟಿ’ ಎಂದರು.
‘ರಾಜ್ಯಸಭಾ ಸದಸ್ಯ ಎಂ.ವಿ. ರಾಜೀವ್ ಗೌಡ, ಸಚಿವ ಎಂ.ಆರ್. ಸೀತಾರಾಮ್, ಶಾಸಕರಾದ ಕೆ.ಜೆ.ಜಾರ್ಜ್, ಆರ್.ವಿ. ದೇವರಾಜ್, ಎನ್.ಎ. ಹ್ಯಾರೀಸ್, ಶಾಮನೂರು ಶಿವಶಂಕರಪ್ಪ, ಜಿ.ಎ. ಬಾವಾ (ಅವರ ಪಾಲುದಾರಿಕೆಯ ವಿಶ್ವಾಸ್ ಬಾವಾ ಸಂಸ್ಥೆ), ಕೆಎಸ್ಎಸ್ಐಡಿಸಿ ಅಧ್ಯಕ್ಷ ಬಿ. ಗುರಪ್ಪ ನಾಯ್ಡು ಅವರು ಒತ್ತುವರಿ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
‘ಶೋಭಾ, ಪ್ರೆಸ್ಟೀಜ್, ಮಂತ್ರಿ, ಬ್ರಿಗೇಡ್, ನಿತೇಶ್, ಮಹಾವೀರ್, ಟಾಟಾ ಹೌಸಿಂಗ್ ಕಾರ್ಪೊರೇಷನ್ನಂತಹ ಕಟ್ಟಡ ನಿರ್ಮಾಣ ಸಂಸ್ಥೆಗಳು, ಮಾನ್ಯತಾ, ಆರ್ಎಂಜೆಡ್, ಸಲಾರ್ಪುರಿಯಾ, ಬಾಗ್ಮನೆ, ಬೃಂದಾವನದಂತಹ ಟೆಕ್ಪಾರ್ಕ್ಗಳು, ಯು.ಬಿ.ಸಿಟಿ, ಒರಾಯನ್, ಗರುಡಾ, ಪಿವಿಆರ್, ಫೋರಂ ವ್ಯಾಲ್ಯೂ ನಂತಹ ಮಾಲ್ಗಳು ಒತ್ತುವರಿ ಮಾಡಿವೆ’ ಎಂದು ಅವರು ಹೇಳಿದರು.
‘ಒತ್ತುವರಿ ಮಾಡಲು ಅಧಿಕಾರಿಗಳಾದ ಬಿ.ಪಿ. ಇಕ್ಕೇರಿ, ಕೆ.ಎನ್. ದೇವರಾಜ್, ಉಮಾನಂದ ರೈ, ರಾಮಚಂದ್ರಮೂರ್ತಿ, ಸರ್ಫರಾಜ್ ಖಾನ್, ಮುನಿರಾಜು, ಲಕ್ಷ್ಮಿನರಸಯ್ಯ, ಭೀಮಪ್ಪ, ಬಿ. ಹೀರಾನಾಯಕ್ ಸೇರಿದಂತೆ 30ಕ್ಕೂ ಅಧಿಕ ಅಧಿಕಾರಿಗಳು ನೆರವು ನೀಡಿದ್ದಾರೆ’ ಎಂದು ಅವರು ಆರೋಪಿಸಿದರು.
‘ಎಲ್ಲ ಬಗೆಯ ಒತ್ತುವರಿಗಳ ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ, ಶ್ರೀಮಂತ, ಪ್ರಭಾವಿ ಸಂಸ್ಥೆಗಳ ವಿರುದ್ಧ ಬಿಬಿಎಂಪಿ, ಬಿಡಿಎ ಯಾವುದೇ ಕ್ರಮ ಕೈಗೊಂಡಿಲ್ಲ. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನರ ವಿರುದ್ಧ ಮಾತ್ರವೇ ಗದಾಪ್ರಹಾರ ನಡೆಸುತ್ತಿರುವುದು ನ್ಯಾಯೋಚಿತವಲ್ಲ’ ಎಂದು ಅವರು ಹೇಳಿದರು.
ಅಂಕಿಅಂಶ
* 857ಕಿ.ಮೀ. ರಾಜಕಾಲುವೆಗಳು
* 3,428 ಎಕರೆ ಮೀಸಲು ಪ್ರದೇಶ
* 1,500 ಎಕರೆ ಮೀಸಲು ಪ್ರದೇಶ ಒತ್ತುವರಿ
***
ಗುರುತು, ಗಾಬರಿಯಾದ ನಿವಾಸಿಗಳು
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಲಹಾಸೂತ್ರಗಳ ಅನ್ವಯ ಕರ್ನಾಟಕ ಸರೋವರ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ (ಕೆಎಲ್ಸಿಡಿಎ) ಅಧಿಕಾರಿಗಳು, ಹೆಬ್ಬಾಳ ಕೆರೆ ಮೀಸಲು ಪ್ರದೇಶವನ್ನು (ಬಫರ್) ಮಾಪಿಸುತ್ತಿದ್ದರೆ, ಸುತ್ತಲಿನ ಮೂರು ಬಡಾವಣೆ ನಿವಾಸಿಗಳ ಎದೆ ಬಡಿತ ಏರಿಳಿತವಾಗುತ್ತಿತ್ತು!
ಭದ್ರಪ್ಪ ಬಡಾವಣೆ, ಹೆಬ್ಬಾಳ ಸರೋವರ ಬಡಾವಣೆ ಹಾಗೂ ಬಾಲಾಜಿ ಬಡಾವಣೆಯಲ್ಲಿ ಮೀಸಲು ಪ್ರದೇಶವನ್ನು ಅಳೆದು ಅಧಿಕಾರಿಗಳು ಗುರುತು ಹಾಕಿದರು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಗಳು, ಅಧಿಕಾರಿಗಳನ್ನು ವಿಚಾರಿಸಲು ಆರಂಭಿಸಿದರು.
ಕೆರೆ ಮೀಸಲು ಪ್ರದೇಶದಲ್ಲಿ ಇರುವ ಕಟ್ಟಡಗಳನ್ನು ಗುರುತಿಸುವಂತೆ ಮೇಲಾಧಿಕಾರಿಗಳು ಹೇಳಿದ್ದಾರೆ. ಅದನ್ನು ಮಾಡುತ್ತಿದ್ದೆವೆ ಎಂದು ಗುರುತು ಹಾಕುತ್ತಿದ್ದ ಅಧಿಕಾರಿಗಳು, ಸ್ಥಳೀಯರಿಗೆ ಉತ್ತರಿಸಿದರು.
‘ನಗರದಲ್ಲಿ ಹಲವು ತಂಡಗಳು ಹಲವು ಕಾರ್ಯಾಚರಣೆ ನಡೆಸುತ್ತಿವೆ. ಒಂದೆಡೆ ಬಿಬಿಎಂಪಿಯು ರಾಜಕಾಲುವೆ ಮೇಲಿನ ಕಟ್ಟಡಗಳನ್ನು ಒಡೆದು ಹಾಕುತ್ತಿದೆ. ಮತ್ತೊಂದೆಡೆ ಕೆಎಲ್ಸಿಡಿಎ,ಕೆರೆ ಮೀಸಲು ಪ್ರದೇಶವನ್ನು ಅಳೆದು ಗುರುತು ಮಾಡುತ್ತಿದೆ. ನಗರದಲ್ಲಿ ಒಂದರ್ಥದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ. ರಾಜಕಾಲುವೆ ಮೇಲೆ ಹಾಗೂ ಕೆರೆ ಮೀಸಲು ಪ್ರದೇಶದಲ್ಲಿರುವ ಎಲ್ಲಾ ಕಟ್ಟಡಗಳನ್ನು ಸರ್ಕಾರ ಒಡೆದು ಹಾಕಿದರೆ, ಅರ್ಧದಷ್ಟು ಬೆಂಗಳೂರೇ ಹೋಗುತ್ತದೆ. ನಾವು ಯಾವುದಾದರೂ ವಿದೇಶದಲ್ಲಿ ಬದುಕಬೇಕಾಗುತ್ತದೆ’ ಎಂದು ಹೆಬ್ಬಾಳ ಸರೋವರ ಬಡಾವಣೆಯ ನಿವಾಸಿ ಕಿರಣ್ ಕುಮಾರ್ ತಿಳಿಸಿದರು.
‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ಆದೇಶವು ಪೂರ್ವಾನ್ವಯ ಅಲ್ಲ. ಅದು ಭವಿಷ್ಯದಲ್ಲಿ ಕಟ್ಟುವ ಕಟ್ಟಡಗಳಿಗೆ ಅನ್ವಯಿಸುತ್ತದೆ. ಆದ್ದರಿಂದ ಗುರುತು ಮಾಡುವ ಕೆಲಸ ನಿಲ್ಲಿಸಿ’ ಎಂದು ಆತಂಕದಲ್ಲಿದ್ದ ನಿವಾಸಿಗಳು ಅಧಿಕಾರಿಗಳಿಗೆ ತಿಳಿಸಿದರು.
‘ಈ ಸಂಬಂಧ ಚರ್ಚ್ಸ್ಟ್ರೀಟ್ನಲ್ಲಿರುವ ಕೆಎಲ್ಸಿಡಿಎ ಕಚೇರಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸರ್ವೇ ಕಾರ್ಯದಲ್ಲಿ ತೊಡಗಿದ್ದ ಎಂಜಿನಿಯರ್ ಒಬ್ಬರನ್ನು ಈ ಕುರಿತು ಸಂಪರ್ಕಿಸಿದಾಗ, ಎನ್ಜಿಟಿ ನೀಡಿದ ಇತ್ತೀಚಿನ ಆದೇಶದಂತೆ, ಹೆಬ್ಬಾಳ ಕೆರೆ ಮೀಸಲು ಪ್ರದೇಶದಲ್ಲಿ ಇರುವ ಕಟ್ಟಡಗಳನ್ನು ಗುರುತಿಸುವಂತೆ ಕೆರೆ ಒತ್ತುವರಿ ಪತ್ತೆ ಕುರಿತ ಸದನ ಸಮಿತಿ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
‘ನಾವು ನಮ್ಮ ಮೇಲಾಧಿಕಾರಿಗಳ ಸೂಚನೆಯನ್ನಷ್ಟೇ ಪಾಲಿಸುತ್ತಿದ್ದೇವೆ’ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.