‘ಹಣ್ಣಿನ ಬೆಳಿ ಬ್ಯಾಡ್ ಅಂದ್ರೂ ಕೇಳಿಲ್ಲರೀ ಯಪಾ’

ಇಂಡಿ: ‘ಹಣ್ಣಿನ ಬೆಳಿ ಬ್ಯಾಡ್ ಅಂದ್ರೂ ಮಕ್ಕಳು ನನ್ನ ಮಾತ ಕೇಳದೇ ದ್ರಾಕ್ಷಿ, ಲಿಂಬೆ, ದಾಳಿಂಬೆ ಬೆಳಿ ಮಾಡ್ಯಾರೀ.. ಎಪಾ... ಇನ್ನ ತಿಂಗಳದಾಗ ದ್ರಾಕ್ಷಿ ಹಣ್ಣ ಕೈಗೆ ಬರತಿತ್ತರೀ. ಮಳೆರಾಯ ನಮ್ಮ ಹೈರಾಣ ನೋಡಲಿಲ್ಲರೀ.. ಗಬಕ್ಕನೇ ಆಲಿಕಲ್ಲ ಮಳಿ ಸುರಿಸೀ ನಮ್ಮ ಆಶ್ಯಾ ಎಲ್ಲಾ ಮಣ್ಣಪಾಲ ಮಾಡ್ಯಾನರೀ.. ‘
ಆಲಿಕಟ್ಟು ಮಳೆಗೆ ನೆಲಕ್ಕುರುಳಿದ ದ್ರಾಕ್ಷಿ ಬೆಳೆಯ ಹೊಲದಲ್ಲಿ ಕುಳಿತು ಗಂಗಾಬಾಯಿ ಕುಂಬಾರ ಕಣ್ಣೀರಿಟ್ಟ ಪ್ರಸಂಗ ಮನ ಕಲಕುವಂತಿತ್ತು.
‘ಭತಗುಣಕಿ ಗ್ರಾಮೀಣ ಬ್ಯಾಂಕನ್ಯಾಗ ಲಕ್ಷಗಟ್ಟಲೇ ಸಾಲ ಮಾಡ್ಯಾರೀ... ಬೆಳಿ ಬೆಳೆದು ತೀರಸ್ತೀವಿ ಅಂತಾ ಹೇಳ್ಯಾರ. ದ್ರಾಕ್ಷಿ ಬೆಳಿಗಿ ಔಷಧ ಹೊಡಿಲ್ಯಾಕ್ ಇಂಡ್ಯಾಗಿನ (ಇಂಡಿ) ರಾಜೇಶ ಅಗ್ರೋ ಸೆಂಟರನ್ಯಾಗ್ 3 ಲಕ್ಷದ ಔಷಧ ಉದ್ರಿ ತಂದಾರ. ಅದು ಹ್ಯಾಂಗ್ ಮುಟ್ಟಸಬೇಕಂತ ಚಿಂತಿ ಆಗ್ಯಾದ ನೋಡ್ರಿ..’ ಎಂದು ಜಮೀನಿಗೆ ಭೇಟಿ ನೀಡಿದ ಪತ್ರಕರ್ತರ ಎದುರು ಗಂಗಾಬಾಯಿ ತಮ್ಮ ಅಳಲು ತೋಡಿಕೊಂಡರು.
‘ಬ್ಯಾಸಗೀ ದಿನದಾಗ ಲಿಂಬಿಹಣ್ಣ ಮತ್ತು ದಾಳಿಂಬೆ ಹಣ್ಣ ತುಟ್ಟಿ ಆಗತಾವ ಅಂತ ಬ್ಯಾಸಗೀಗಿ ಬರಂಗ ಕಾಯಿ ಹಿಡದೇನಿ. ಆದ್ರ ಆಲಿಕಲ್ಲ ಮಳಿ ಬಂದು ಸಣ್ಣ ಗಾತ್ರದ ಹಸರ ಲಿಂಬಿಕಾಯಿ, ದಾಳಿಂಬೆ ಹಣ್ಣಿನ ಹೂವು ಎಲ್ಲಾ ಉದರಿ ಬಿಟ್ಟಾವ. ಮೂರೂ ಹಣ್ಣಿನ ಹಂಗಾಮ ಕೈಕೊಟ್ಟಾವ’ ಎಂದು ಗೋಳಾಡಿದರು.
ಅಪಾರ ಹಾನಿ: ಆಲಿಕಲ್ಲು ಮಳೆಯಿಂದ ತಾಲ್ಲೂಕಿನ ತೋಟಗಾರಿಕೆ ಮತ್ತು ಇನ್ನಿತರ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತೋಟಗಾರಿಕಾ ಅಧಿಕಾರಿ ಸಿ.ಬಿ. ಪಾಟೀಲ ತಿಳಿಸಿದ್ದಾರೆ.
ತಾಲ್ಲೂಕಿನ ಬರಡೋಲ, ಜೇವೂರ, ಡುಮಕನಾಳ, ಸಿಗಣಾಪುರ, ದೇವರ ನಿಂಬರಗಿ, ಜಿಗಜೀವಣಗಿ, ಚಡಚಣ, ಭತಗುಣಕಿ, ಬೂದಿಹಾಳ, ಲಾಳಸಂಗಿ, ಅಹಿರಸಂಗ, ಸಾಲೋಟಗಿ, ರೂಗಿ, ರೋಡಗಿ, ಗೊಳಸಾರ, ಅಗರಖೇಡ, ಹಿರೇಬೇವನೂರ, ಮಣ್ಣೂರ ಸೇರಿದಂತೆ ಸುಮಾರು 60 ಗ್ರಾಮಗಳಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ.
ಸುಮಾರು 700 ಹೆಕ್ಟೇರ್ ದ್ರಾಕ್ಷಿ, 2000 ಹೆಕ್ಟೇರ್ ಲಿಂಬೆ, 250 ಹೆಕ್ಟೇರ್ ದಾಳಿಂಬೆ ಅಲ್ಲದೆ ಸುಮಾರು 500 ಹೆಕ್ಟೇರ್ನಲ್ಲಿ ಬೆಳೆದಿರುವ ತರಕಾರಿ ಬೆಳೆಗಳಾದ ಈರುಳ್ಳಿ, ಬದನೆ, ಮೆಣಸಿನಕಾಯಿ, ಟೊಮ್ಯಾಟೋ ಮುಂತಾದ ಬೆಳೆಗಳು 500 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ಒಂದು ಹೆಕ್ಟೇರ್ ದ್ರಾಕ್ಷಿಗೆ ₨ 7ರಿಂದ 8 ಲಕ್ಷ, ಲಿಂಬೆ ಒಂದು ಹೆಕ್ಟೇರ್ಗೆ ₨1.5 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಇವುಗಳಲ್ಲದೇ ಜೋಳ, ಗೋಧಿ, ಕಡಲೆ, ಕಬ್ಬು ಮುಂತಾದ ಬೆಳೆಗಳೂ ಕೂಡಾ ಆಲಿಕಲ್ಲು ಮಳೆಯಿಂದ ಹಾನಿಗೊಳಗಾಗಿವೆ. ತಾಲ್ಲೂಕಿನಲ್ಲಿ ಬೆಳೆಗಳ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಸಿ.ಬಿ. ಪಾಟೀಲ ತಿಳಿಸಿದ್ದಾರೆ. ಆಲಿಕಲ್ಲು ಮಳೆಯ ಹಾನಿಯ ಬಗ್ಗೆ ಖಚಿತವಾಗಿ ತಿಳಿಯಲು ಕನಿಷ್ಠ ಒಂದು ವಾರ ಕಾಲ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕಬ್ಬು, ಜೋಳ: ಹಾನಿ
ಆಲಮೇಲ: ಅಕಾಲಿಕವಾಗಿ ಸೋಮವಾರ ಸಂಜೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಆಲಮೇಲ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆದು ನಿಂತಿದ್ದ ಕಬ್ಬು, ಜೋಳ ನೆಲಕಚ್ಚಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲವು ಕಡೆ ರಾಶಿ ಹಂತದಲ್ಲಿದ್ದ ಜೋಳದ ತೆನೆಯು, ಹಾಗೂ ಕಟಾವು ಮಾಡಿದ್ದ ಕಬ್ಬು ಕಾರ್ಖಾನೆಗೆ ಸಾಗಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಗದ್ದೆಯಿಂದ ಹೊರ ಬರಲಾಗಿಲ್ಲ. ಕೆಲವರ ಹೊಲಗಳಲ್ಲಿ ಕಬ್ಬು ಕಟಾವು ಮಾಡಿ ಟ್ರ್ಯಾಕ್ಟರ್ಗಳಲ್ಲಿ ತುಂಬಿದಾಗ ಮಳೆ ಬಂದಿದ್ದರಿಂದ ಗದ್ದೆಯಲ್ಲೇ ಸಿಲುಕಿಕೊಂಡಿವೆ. ಕಟಾವು ಮಾಡಿದ ಕಬ್ಬನ್ನು ಸಾಗಿಸಲು ಸಾಧ್ಯವಾಗದೆ, ಒಣಗುವ ಭೀತಿ ಕಾಡುತ್ತಿದೆ. ಈಗ ಹೊಲದಲ್ಲಿ ಸಿಕ್ಕಿಕೊಂಡಿರುವ ಟ್ರ್ಯಾಕ್ಟರ್ ಹೊರಬರಲು ಕನಿಷ್ಠ 5ರಿಂದ 6 ದಿನ ಬೇಕಾಗುತ್ತದೆ. ಅಲ್ಲಿಯವರೆಗೆ ಕಟಾವ್ ಮಾಡಿದ ಕಬ್ಬಿನಲ್ಲಿರುವ ಕಬ್ಬಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ.
ಸರ್ಕಾರ ಪರಿಹಾರ ನೀಡದಿದ್ದರೆ ಬದುಕು ಕಷ್ಟ ಎಂಬುದು ರೈತರ ಆತಂಕ.
ದೇವಣಗಾಂವ, ಕಡಣಿ, ಕುಮಸಗಿ, ದೇವರನಾವದಗಿ ಮೊದಲಾದ ಗ್ರಾಮಗಳಲ್ಲಿ ಸಾಕಷ್ಟು ಕಬ್ಬು ಕಟಾವು ಗೊಂಡು ಸಾಗಣೆ ಸಂದರ್ಭದಲ್ಲಿ ಟ್ರ್ಯಾಕ್ಟರ್ ಗದ್ದೆಯ ಕಚ್ಚಾ ರಸ್ತೆಯಲ್ಲಿಯೇ ಸಿಕ್ಕಿಕೊಂಡಿದ್ದು ಸಮಸ್ಯೆಗೆ ಇನ್ನೊಂದು ಕಾರಣವಾಗಿದೆ.
ಮಳೆಗೆ ದ್ರಾಕ್ಷಿ ನೆಲಪಾಲು
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.
ತಾಲ್ಲೂಕಿನಲ್ಲಿ ಅಬ್ಬರದ ಗಾಳಿ ಮಳೆಗೆ ದ್ರಾಕ್ಷಿ ಗೊನೆಗಳು ನೆಲಕ್ಕುರಿಳಿವೆ. ತಾಲ್ಲೂಕಿನ ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ ಆಲಿಕಲ್ಲು ಮಳೆಗೆ ಹಾಳಾಗಿವೆ.
ಇದಲ್ಲದೆ ಜೋಳ, ಕುಸಬಿ ಹಾಗೂ ಇನ್ನಿತರ ಬೆಳೆಗಳ ರಾಶಿ ಮಾಡಲು ಕೊಯ್ದು ಹೊಲದಲ್ಲಿ ಹಾಕಿದ್ದ ಫಸಲು ನೀರು ಪಾಲಾಗಿದೆ.
ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಉಂಟಾಗಿದೆ. ಆದರೆ ತಾಲ್ಲೂಕಿನಲ್ಲಿ ಯಾವುದೇ ಜೀವ ಹಾನಿ ಅಥವಾ ಬೆಳೆ ಹಾನಿ ಆಗಿಲ್ಲ ಎಂದು ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ತಿಳಿಸಿದ್ದಾರೆ.
ಝಳಕಿ: 67 ಮಿ.ಮೀ. ಮಳೆ
ವಿಜಾಪುರ: ಮಂಗಳವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಝಳಕಿಯಲ್ಲಿ ಅತಿ ಹೆಚ್ಚು 67 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ವಿವರ.
ಬಸವನ ಬಾಗೇವಾಡಿ 10.5 ಮಿ.ಮೀ., ಮನಗೂಳಿ 2.2 ಮಿ.ಮೀ., ವಿಜಾಪುರ ನಗರ 9.6 ಮಿ.ಮೀ., ನಾಗಠಾಣ 2.1 ಮಿ.ಮೀ., ಭೂತನಾಳ 9.4 ಮಿ.ಮೀ., ಹಿಟ್ನಳ್ಳಿ 9 ಮಿ.ಮೀ., ಕುಮಟಗಿ 2.8 ಮಿ.ಮೀ., ಬಬಲೇಶ್ವರ 12.8 ಮಿ.ಮೀ.
ಇಂಡಿ 13 ಮಿ.ಮೀ., ನಾದ ಬಿ.ಕೆ 8.6 ಮಿ.ಮೀ., ಅಗರಖೇಡ 9.4 ಮಿ.ಮೀ., ಹೊರ್ತಿ 14.8 ಮಿ.ಮೀ., ಹಲಸಂಗಿ 14 ಮಿ.ಮೀ., ಚಡಚಣ 19.6 ಮಿ.ಮೀ., ಝಳಕಿ 67 ಮಿ.ಮೀ., ಮುದ್ದೇಬಿಹಾಳ 7.5 ಮಿ.ಮೀ., ಢವಳಗಿ 7.2ಮಿ.ಮೀ., ಸಿಂದಗಿ 1.7 ಮಿ.ಮೀ., ಆಲಮೇಲ 28.4 ಮಿ.ಮೀ., ರಾಮನಹಳ್ಳಿ 5.8 ಮಿ.ಮೀ., ಕಡ್ಲೇವಾಡ 3.2 ಮಿ.ಮೀ., ದೇವರ ಹಿಪ್ಪರಗಿ 2.6 ಮಿ.ಮೀ., ಕೊಂಡಗೂಳಿ 3.8 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಸಾಂಖ್ಯಾ ಸಂಗ್ರಹಣಾಧಿಕಾರಿ ಜಿ.ವಿ. ದಶವಂತ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.