ಬೆಂಗಳೂರು: ಇದೇ 14, 15ರಂದು ಚಿಕ್ಕಬಳ್ಳಾಪುರದ ಎಸ್.ಜೆ.ಸಿ. ತಾಂತ್ರಿಕ ವಿದ್ಯಾಲಯದಲ್ಲಿ 2012ನೇ ಸಾಲಿನ ಉದ್ಯೋಗ ಮೇಳ ನಡೆಯಲಿದೆ. ದೇಶ-ವಿದೇಶಗಳ ಒಟ್ಟು 126ಕ್ಕೂ ಹೆಚ್ಚು ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಉದ್ಯೋಗಾಕಾಂಕ್ಷಿಗಳಿಗೆ ನೋಂದಣಿ ಉಚಿತ.
ಮೇಳದಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸುವ ಆಕಾಂಕ್ಷೆ ಉಳ್ಳವರು http://www.udyogamela.com ವೆಬ್ಸೈಟ್ನಲ್ಲಿ ತಮ್ಮ ವಿದ್ಯಾರ್ಹತೆ ಮತ್ತಿತರ ವಿವರ ನೀಡಿ ನೋಂದಾಯಿಸಿಕೊಳ್ಳಬಹುದು. ಅಭ್ಯರ್ಥಿಗಳು ಒದಗಿಸುವ ಮಾಹಿತಿಯನ್ನು ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳಿಗೆ ನೀಡಲಾಗುವುದು. ಇದರಿಂದ ಕಂಪೆನಿಗಳು ತಮಗೆ ಸೂಕ್ತ ಎನಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಬಾರಿಯ ಮೇಳದಲ್ಲಿ ಪಾಲ್ಗೊಳ್ಳಲು 300 ಕಂಪೆನಿಗಳಿಗೆ ಆಹ್ವಾನ ನೀಡಲಾಗಿದೆ. 126 ಕಂಪೆನಿಗಳು ಭಾಗವಹಿಸುವಿಕೆಯನ್ನು ಖಚಿತಪಡಿಸಿವೆ~ ಎಂದರು. ಆನ್ಲೈನ್ ಮೂಲಕ ನೋಂದಣಿ ಮಾಡದಿದ್ದರೂ, ಮೇಳದಲ್ಲಿ ಪಾಲ್ಗೊಳ್ಳಬಹುದು. ಸ್ಥಳದಲ್ಲೇ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಎಸಿಸಿ, ಟೊಯೋಟಾ ಕಿರ್ಲೋಸ್ಕರ್, ಟೈಟಾನ್, ಟಾಟಾ ಎಲೆಕ್ಸಿ, ವಿಪ್ರೊ, ಟಿಸಿಎಸ್, ಎಂಫಸಿಸ್, ಐಸಿಐಸಿಐ, ಎಚ್ಡಿಎಫ್ಸಿ, ಎಕ್ಸಿಸ್ ಬ್ಯಾಂಕ್ ಮತ್ತಿತರ ಕಂಪೆನಿಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಂಬತ್ತು ತಾಲ್ಲೂಕು ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಭಾನುವಾರ ತರಬೇತಿ ನೀಡಲಾಗಿದೆ. ಒಟ್ಟು 1,600 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿಯ ಮೇಳ ಎಲ್ಲರಿಗೂ ಮುಕ್ತವಾಗಿದೆ ಎಂದರು.
ಕಳೆದ ಬಾರಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 13,022 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇವರ ಪೈಕಿ 1,193 ಮಂದಿಗೆ ಮೇಳದ ದಿನವೇ ಉದ್ಯೋಗ ದೊರೆತಿದೆ. 2,628 ಮಂದಿಗೆ ಕಂಪೆನಿಗಳು ಉದ್ಯೋಗ ನೀಡುವ ಭರವಸೆ ನೀಡಿವೆ ಹಾಗೂ 4,298 ಮಂದಿ ವಿವಿಧ ಕಂಪೆನಿಗಳಲ್ಲಿ ತರಬೇತಿಗೆ ಆಯ್ಕೆಯಾಗಿದ್ದರು ಎಂದರು. ಶಾಸಕರಾದ ಎನ್. ಸಂಪಂಗಿ, ವೆಂಕಟಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.