ಮಹದೇವಪುರ: ಕ್ಷೇತ್ರದ ವಿವಿಧೆಡೆ ಅಕ್ರಮ ಫಿಲ್ಟರ್ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಆವಲಹಳ್ಳಿ, ಚೀಮಸಂದ್ರ, ಗುಂಜೂರು ಸಮೀಪದ ಸರ್ಜಾಪುರ, ದೊಮ್ಮಸಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮ ಫಿಲ್ಟರ್ ಮರಳು ತಯಾರಿಕೆ ನಡೆಯುತ್ತಿದೆ. ಚೀಮಸಂದ್ರ ಗ್ರಾಮದಲ್ಲಿ ಮೂರ್ನಾಲ್ಕು ವರ್ಷಗಳಿಂದಲೂ ಈ ದಂಧೆ ನಡೆಯುತ್ತಿದೆ.
ಬಿದರಹಳ್ಳಿ ಗ್ರಾಮದಲ್ಲೂ ಇಂತಹ ಮರಳು ತಯಾರಿಕೆ ಘಟಕಗಳು ಇವೆ. ಅಲ್ಲದೆ ಟ್ರ್ಯಾಕ್ಟರ್ ಹಾಗೂ ಲಾರಿಗಳ ಮೂಲಕ ಇಲ್ಲಿನ ಬಿದರಹಳ್ಳಿ ಕೆರೆಯಿಂದಲೇ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಕಂದಾಯ ಇಲಾಖೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಾರಸಂದ್ರ, ಗುಂಡೂರು ಸೇರಿದಂತೆ ಸುತ್ತಮುತ್ತಲಿನ ಕೆಲ ಇಟ್ಟಿಗೆ ಗೂಡಿನ ಮಾಲೀಕರು ಕೂಡ ಇದೇ ಕೆರೆಯ ಒಡಲಿನಿಂದ ಅಕ್ರಮವಾಗಿ ಮಣ್ಣನ್ನು ತೆಗೆದು ಸಾಗಿಸುತ್ತಿದ್ದಾರೆ. ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರ ಬೆಂಬಲ ಹಾಗೂ ಕುಮ್ಮಕ್ಕಿನಿಂದಲೇ ಅಕ್ರಮ ಮರಳು ಫಿಲ್ಟರ್ ದಂಧೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.