ಪಿರಿಯಾಪಟ್ಟಣ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ಲಿಖಿತ ದೂರು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮ್ಯಾಥ್ಯೂಥಾಮಸ್ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಮಾತನಾಡಿದರು. ದಾಳಿ ನಡೆಸುವ ವೇಳೆ ಅಬಕಾರಿ ಇಲಾಖೆಯ ಕೆಲವು ಸಿಬ್ಬಂದಿ ಅಕ್ರಮ ಮದ್ಯ ಮಾರಾಟಗಾರರಿಗೆ ಸುಳಿವು ನೀಡುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಸಿಬ್ಬಂದಿ ಮೇಲೆ ಕ್ರಮ
ಸರ್ಕಾರದಿಂದ ಮಂಜೂರಾದ ಖಾಲಿ ನಿವೇಶನವನ್ನು ಪ.ಪಂ. ಅಧಿಕಾರಿಗಳು ಪ್ರಭಾವಿ ಕಾಂಗ್ರೆಸ್ ಮುಖಂಡರ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿ ದ್ದಾರೆ ಎಂದು ಪ್ರಭಾವತಿ ದೂರಿದರು.
ಹತ್ತಾರು ವರ್ಷಗಳ ಹಿಂದೆ ಪಂಚವಳ್ಳಿ ಗ್ರಾ.ಪಂ. ಯಿಂದ ಮಂಜೂರಾದ ಖಾಲಿ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ನಮಗೆ ಮಣಿಯಯ್ಯ ಎಂಬುವವರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದು ಅಧಿಕಾರಿಗಳು ತಮಗೆ ಸಹಕಾರ ನೀಡುತ್ತಿಲ್ಲ. ಇದೇ ನಿವೇಶನವನ್ನು ಮಣಿಯಯ್ಯರವರ ಪತ್ನಿಯ ಹೆಸರಿಗೆ ಪ.ಪಂ. ತಮ್ಮ ವ್ಯಾಪ್ತಿಗೆ ಬರುವ ಜಾಗವೆಂದು ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಅಳಲು ತೋಡಿಕೊಂಡರು.
ಮನೆಯ ಸಾಮಾನುಗಳನ್ನು ಹೊರಹಾಕಲಾಗುತ್ತಿದ್ದು ಸೂಕ್ತ ರಕ್ಷಣೆ ನೀಡುವಂತೆ ಪ್ರಭಾವತಿ ಎಂಬ ಮಹಿಳೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಾಗ ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಂಡ ಲೋಕಾಯುಕ್ತರು ತನಿಖೆ ನಡೆಸಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದರು.
ಪಟ್ಟಣದ ಅರಸನಕೆರೆಗೆ ಕೊಳಚೆ ನೀರು ಬಿಡಲಾಗುತ್ತಿದ್ದು, ಅದೇ ಕೆರೆಯಲ್ಲಿ ಕೊಳವೆಬಾವಿಯನ್ನು ತೆಗೆಸಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಪ.ಪಂ. ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರೊಬ್ಬರು ದೂರು ದಾಖಲಿಸಿದರು. ನ್ಯಾಯಾಲಯದಲ್ಲಿ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ನಡೆಯುತ್ತಿರುವಾಗಲೇ ತಹಶೀಲ್ದಾರ್ ಆದೇಶ ನೀಡಿರುವ ಬಗ್ಗೆ ದೂರು ದಾಖಲಿಸಿದರು. ಲೋಕಾಯುಕ್ತ ಸಿಬ್ಬಂದಿ ಶಿವಶಂಕರ್, ನರಸೇಗೌಡ, ಸಿಂಧ್ಯಾ ಹಾಜರಿದ್ದರು.