ತುಮಕೂರು: ಕನಿಷ್ಠ ವೇತನ ಮತ್ತು ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತೆಯರು ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಟೌನ್ಹಾಲ್ ವೃತ್ತದಿಂದ ಮೆರವಣಿಗೆ ಹೊರಟ ಅಕ್ಷರ ದಾಸೋಹ ಯೋಜನೆ ಮಹಿಳೆಯರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಯೋಜನೆಯಲ್ಲಿ ಸುಮಾರು 1 ಲಕ್ಷ ಮಹಿಳೆಯರು ಕನಿಷ್ಠ ವೇತನ ಮತ್ತು ಮೂಲ ಸೌಲಭ್ಯ ಇಲ್ಲದೆ ದುಡಿಯುತ್ತಿದ್ದಾರೆ. ಆರೋಗ್ಯ ಮತ್ತು ಅಪಘಾತ ವಿಮೆ ಸೌಲಭ್ಯ ಇಲ್ಲದೆ ಬೆಂಕಿ ಅನಾಹುತಗಳಿಂದ ರಕ್ಷಣೆ ದೊರೆಯುತ್ತಿಲ್ಲ. ಅಲ್ಲದೆ ಮಕ್ಕಳ ಹಾಜರಾತಿ ನೆಪದಲ್ಲಿ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿದೆ. 70ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ 3 ಮಂದಿ ಅಡುಗೆಯವರು ಇರುತ್ತಿದ್ದರು. ಈಗ 2ಕ್ಕೆ ಇಳಿಸಿ ಒಬ್ಬರನ್ನು ತೆಗೆಯುವುದು ಸರಿಯಲ್ಲ. ಉದ್ಯೋಗ ಭದ್ರತೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಸಂಘದ ಜಿಲ್ಲಾ ಸಂಚಾಲಕಿ ಕೆಂಚಮ್ಮ, ಸಹ ಸಂಚಾಲಕಿ ಎಲ್.ಎಸ್.ಸುಕನ್ಯಾ, ರಂಗಮ್ಮ ಭಾಗವಹಿಸಿದ್ದರು.