ಅಂಕೋಲಾ: `ಕಿರಿಯ ವಯಸ್ಸಿನಲ್ಲಿಯೇ ರಾಜಕೀಯ, ಯಕ್ಷರಂಗ, ಕ್ರೀಡಾ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆಗಳನ್ನು ಕೈಗೊಂಡು ಅಕಾಲಿಕವಾಗಿ ಅಗಲಿದ ಸಂದೀಪ ನಾಯಕ ಜೀವಕ್ಕೆ ಜೀವ ಕೊಡುವ ವ್ಯಕ್ತಿಯಾಗಿದ್ದರು~ ಎಂದು ಕೆ.ಪಿ.ಸಿ.ಸಿ. ಸದಸ್ಯ ರಮಾನಂದ ನಾಯಕ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಂದೀಪ ನಾಯಕರಿಗೆ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೇರ ನಡೆ ನುಡಿ ವ್ಯಕ್ತಿತ್ವದ ಸಂದೀಪ ಅವರನ್ನು ರಾಜಕೀಯವಾಗಿ ಹಿಂದಕ್ಕೆ ನೂಕಲು ಆಡಳಿತ ಪಕ್ಷದವರು ಅವಮಾನಿಸಿದ ಘಟನೆಯನ್ನು ನಾಯಕ ನೆನಪಿಸಿಕೊಂಡರು.
`ಸಂದೀಪ ಪತ್ನಿ, ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದು ತೊಂದರೆಗೆ ಒಳಗಾಗಿರುವ ಕುಟುಂಬದ ನೆರವಿಗೆ ಎಲ್ಲರೂ ಮುಂದಾಗಬೇಕಾಗಿದೆ~ ಎಂದರು. ಜಿ.ಪಂ. ಸದಸ್ಯ ಉದಯ ನಾಯ್ಕ ಮಾತನಾಡಿ, `ಅತಿಯಾದ ಸ್ವಾಭಿಮಾನಿಯಾಗಿದ್ದ ಸಂದೀಪ ದುಡುಕಿನಲ್ಲಿ ನಮ್ಮೆಲ್ಲರನ್ನು ಅಗಲಿದರು~ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ನಾಯ್ಕ, ಮಾಜಿ ಶಾಸಕ ಕೆ.ಎಚ್. ಗೌಡ, ಜಿ.ಪಂ. ಸದಸ್ಯ ವಿನೋದ ನಾಯಕ, ಎಲ್.ಸಿ. ನಾಯ್ಕ, ಚಂದ್ರಕಾಂತ ಬಲೆಗಾರ, ನಾರಾಯಣ ನಾಯಕ, ಪುರುಷೋತ್ತಮ ನಾಯ್ಕ ಮುಂತಾದವರು ಅಗಲಿದ ಮುಖಂಡನನ್ನು ಸ್ಮರಿಸಿಕೊಂಡು ಮಾತನಾಡಿದರು. ಡಿ.ಎನ್. ನಾಯಕ, ತಾ.ಪಂ. ಅಧ್ಯಕ್ಷ ಜಗನ್ನಾಥ ಗೌಡ, ಉಪಾಧ್ಯಕ್ಷೆ ದೀಪಾ ಆಗೇರ, ಜಿ.ಪಂ. ಮಾಜಿ ಸದಸ್ಯೆ ಶಾಂತಿ ಆಗೇರ, ಪ.ಪಂ. ಸದಸ್ಯರಾದ ಸವೇರಾ ಫರ್ನಾಂಡಿಸ್, ಶಮ್ಷಾದ್ ಶೇಖ್, ಮಂಜೇಶ್ವರ ನಾಯಕ, ಉದಯ ವಾಮನ ನಾಯಕ ಉಪಸ್ಥಿತರಿದ್ದರು. ರಾಜೇಶ ಮಿತ್ರಾ ನಾಯ್ಕ ವಂದಿಸಿದರು.