ಮಂಡ್ಯ: ಅಧಿಕಾರಿಗಳ ಗೈರು ಹಾಜರಿಯ ನಡುವೆಯೂ ನಗರಸಭೆಯ ಸಾಮಾನ್ಯಸಭೆ ಬುಧವಾರ ಸುಗಮವಾಗಿ ನಡೆಯಿತು.
ನಗರಸಭೆ ಆಯುಕ್ತ ಪ್ರಕಾಶ್ ಸೇರಿದಂತೆ ಎಲ್ಲ ಅಧಿಕಾರಿ ಗಳೂ ಸಭೆ ಗೈರು ಹಾಜರಾಗಿದ್ದರು. ಸಭೆಗೆ ಆಹ್ವಾನಿಸಿ ಗೈರು ಹಾಜರಾದ ಆಯುಕ್ತರ ವಿರುದ್ಧ ಸದಸ್ಯರು ಹರಿಹಾಯ್ದರು.
ಸಾಮಾನ್ಯಸಭೆಗೆ 18 ಮಂದಿ ಸದಸ್ಯರು ಹಾಜದ್ದರು. ಆದರೆ, ಅಧಿಕಾರಿಗಳ್ಯಾರೂ ಆಗಮಿಸಿರಲಿಲ್ಲ. ಇದು ಸದಸ್ಯರನ್ನು ಸಿಟ್ಟಿಗೆ ಏಳಿಸಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ ಮಾತನಾಡಿ, ಆಯುಕ್ತರು ಹಾಗೂ ನೀವು (ಅಧ್ಯಕ್ಷರು) ಕರೆದಿದ್ದೀರಿ. ಆದರೆ, ಆಯುಕ್ತರು ಸಭೆಗೆ ಬಂದಿಲ್ಲ. ಕೆಲವು ಸದಸ್ಯರೂ ಸಭೆ ಕರೆಯಬೇಕು ಎಂದು ಒತ್ತಾಯಿಸುತ್ತಾರೆ. ಸಭೆ ಕರೆದರೆ ಬರುವುದಿಲ್ಲ. ಅಧಿಕಾರಿಗಳು ಯಾಕೆ ಬಂದಿಲ್ಲ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸದಸ್ಯ ಹೊಸಹಳ್ಳಿ ಬೋರೇಗೌಡ ಮಾತನಾಡಿ, ಅಧಿಕಾರಿ ಗಳು ಸಭೆ ಬರದಿರುವುದು ಸರಿಯಲ್ಲ. ಸಭೆ ರದ್ದು ಪಡಿಸಿದ್ದರೆ, ತಿಳಿಸಬೇಕಿತ್ತು. ಸಭೆಗೆ ಬಂದಾದರೂ ಮಾಹಿತಿ ನೀಡಬೇಕಿತ್ತು. ಈ ಬಗ್ಗೆ ನೀವೇ ಸ್ಪಷ್ಟೀಕರಣ ನೀಡಿ ಎಂದು ಅಧ್ಯಕ್ಷರಿಗೆ ಒತ್ತಾಯಿಸಿದರು.
ಸದಸ್ಯ ಪುಟ್ಟಂಕಯ್ಯ ಮಾತನಾಡಿ, ಇಬ್ಬರೂ ಕೂಡಿಯೇ ಸಭೆಗೆ ಆಹ್ವಾನಿಸಿದ್ದೀರಿ. ರದ್ದು ಪಡಿಸಿದ್ದರೆ ತಿಳಿಸುವ ಸೌಜನ್ಯ ಕ್ಕಾದರೂ ಆಯುಕ್ತರು ಬರಬೇಕಿತ್ತು.
ಸದಸ್ಯೆ ಸವಿತಾ ಮಾತನಾಡಿ, ಸಭೆಗೆ ಬನ್ನಿ ಎಂದು ಪತ್ರ ಕಳುಹಿಸಿದವರೇ ಬರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಅಧ್ಯಕ್ಷ ಎಂ.ಪಿ. ಅರುಣ್ಕುಮಾರ್ ಮಾತನಾಡಿ, ಪೌರಾಯುಕ್ತರು ಬರುತ್ತೇನೆ ಎಂದಿದ್ದಾರೆ. ಕಾನೂನು ಸಲಹೆ ಪಡೆದುಕೊಂಡೇ ಸಭೆಯನ್ನು ಆಯೋಜಿಸಲಾಗಿತ್ತು. ಆದರೂ, ಅಧಿಕಾರಿಗಳು ಬಂದಿಲ್ಲ ಎಂದರು.
ಮಂಜುನಾಥ, ಎಂ.ಜೆ. ಚಿಕ್ಕಣ್ಣ ಮತ್ತಿತರ ಕೆಲವು ಸದಸ್ಯರು ಜಿಲ್ಲಾಧಿಕಾರಿಗಳಿಗೆ ಸಭೆ ಕರೆಯಬಾರದು ಎಂದು ದೂರು ನೀಡಿದ್ದಾರೆ. ಈ ಹಿಂದೆ ಇದೇ ಸದಸ್ಯರು ಸಭೆಯನ್ನೇ ಕರೆಯುವುದಿಲ್ಲ. ಸಭೆ ಕರೆಯಬೇಕು ಎಂದು ಆಗ್ರಹಿಸಿತ್ತಿದ್ದರು. ಸಭೆ ಕರೆದರೆ ಬರುವುದಿಲ್ಲ ಎಂದು ಟೀಕಿಸಿದರು.
ಸಭಾಂಗಣದಿಂದಲೇ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಆಗ ಅಧ್ಯಕ್ಷರು, ನಾವೇ ಕೆಳಗೆ ಹೋಗಿ ಅಧಿಕಾರಿಗಳನ್ನು ಕರೆದುಕೊಂಡು ಬರೋಣ ಬನ್ನಿ ಎಂದು ಮನವಿ ಮಾಡಿದರು.
ಬೇಕೆ, ಬೇಕು ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ಬಹುತೇಕ ಸದಸ್ಯರು ಅಧಿಕಾರಿಗಳನ್ನು ಆಹ್ವಾನಿಸಲು ಕೆಳಗಡೆ ಇಳಿಯುತ್ತಿದ್ದಂತೆಯೇ ಅಧಿಕಾರಿಗಳು ಕುರ್ಚಿ ಖಾಲಿ ಮಾಡಿದ್ದರು. ಹೀಗಾಗಿ, ಮರಳಿ ಸಭಾಂಗಣಕ್ಕೆ ಬಂದು ಸಭೆ ಮುಂದುವರೆಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ ಅವರೇ ವಿಷಯಪಟ್ಟಿಯನ್ನು ಓದಿದರು. ನಂತರ ಸದಸ್ಯರು ಚರ್ಚೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.