ಹಾಸನ: ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷ ರಾಗಿ ಕಂದಲಿ ಕ್ಷೇತ್ರದ ಸದಸ್ಯ ಡಿ.ಸಿ ಕೃಷ್ಣಕುಮಾರ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಹನುಮೇಗೌಡ ಅವರು ಡಿಸೆಂಬರ್ 22 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿತ್ತು. ಹಾಸನ ತಾಲ್ಲೂಕು ಪಂಚಾಯಿತಿಯ ಎಲ್ಲ 25 ಸ್ಥಾನಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳೇ ಇರುವುದರಿಂದ ಪಕ್ಷದ ಮುಖಂಡರ ತೀರ್ಮಾನವೇ ಇಲ್ಲಿ ಅಂತಿಮವಾಗಿತ್ತು.
ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಅಯೇಶಾ ಪರ್ವೀನ್ ಸಮ್ಮುಖದಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಬೆಳಿಗ್ಗೆ 9 ರಿಂದ 10 ರವರೆಗೆ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಕಾಲವಕಾಶ ನೀಡಲಾಗಿತ್ತು. ಕೃಷ್ಣಕುಮಾರ್ ಅವರನ್ನು ಹೊರತುಪಡಿಸಿದರೆ ಯಾವ ಸದಸ್ಯರೂ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಆಯ್ಕೆ ನಡೆದಿದೆ. ಚುನಾವಣೆ ವೇಳೆ ತಾ.ಪಂ. ನಲ್ಲಿ 24 ಸದಸ್ಯರು ಹಾಜರ್ದ್ದಿದರು.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, `ತಾಲ್ಲೂಕು ಪಂಚಾಯಿತಿ ಆಡಳಿತದಲ್ಲಿ ಚುರುಕು ಮೂಡಿಸಲು ಆದ್ಯತೆ ನೀಡುತ್ತೇನೆ~ ಎಂದರು.ಆಯ್ಕೆ ಘೋಷಣೆಯಾಗುತ್ತಿದ್ದಂತೆ ಪಂಚಾಯಿತಿ ಆವರಣದಲ್ಲಿ ಸೇರಿದ್ದ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರು ಹೂರಬರುತ್ತಿದ್ದಂತೆ ಹೂಮಾಲೆ ಹಾಕಿ ಅಭಿನಂದಿಸಿದರು. ಚುನಾವಣೆಯ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಶಿವೇಗೌಡ ಹಾಜರಿದ್ದರು.