ನರಗುಂದ: `ಗ್ರಾಮ ಪಂಚಾಯಿತಿ ಮೂಲಕ ಜಾರಿಯಾಗುವ ಹಲವಾರು ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಅದರಲ್ಲೂ ಬಡವರಿಗಾಗಿ ಇರುವ ಆಶ್ರಯ ಮನೆಗಳನ್ನು ಬಡವರಿಗೆ ದೊರೆಯದೇ ಉಳ್ಳವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೇ ಪಡೆಯುತ್ತಿದ್ದಾರೆ~ ಎಂದು ಗ್ರಾಮಸ್ಥರು ಆಕ್ರೋಶಗೊಂಡ ಘಟನೆ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಶನಿವಾರ ಜರುಗಿದ ಜನಸ್ಪಂದನ ಸಭೆಯಲ್ಲಿ ನಡೆಯಿತು.
ಇದರಿಂದ ಅರ್ಹ ಫಲಾನುಭವಿಗಳಿಗೆ ಆಶ್ರಯ ದೊರಕುವುದು ಯಾವಾಗ? ಇದಕ್ಕೆ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳು ಗಮನ ಹರಿಸುವಂತೆ ಆಗ್ರಹಿಸಿದ್ದು ಕಂಡು ಬಂತು. ಇದರ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಅಧಿಕಾರಿಗಳು ನೀಡ್ದ್ದಿದೂ ಕಂಡು ಬಂತು.
ಐದು ವರ್ಷವಾದರೂ ಆರಂಭ ವಾಗದ ಕೊಳವೆ ಬಾವಿ: ಭೈರನಹಟ್ಟಿಗೆ ನೀರು ಪೂರೈಕೆ ಮಾಡಲು ನರಗುಂದ ಹಳೆ ಎಪಿಎಂಸಿಯಿಂದ ಕೊಳವೆ ಬಾವಿ ತೋಡಿ ಪೈಪ್ಲೈನ್ ಅಳವಡಿಸಿ ಐದು ವರ್ಷಗಳೇ ಗತಿಸಿವೆ. ಆದರೆ ಇಲ್ಲಿಯವರೆಗೂ ಅಲ್ಲಿಂದ ಮಾತ್ರ ನೀರು ಪೂರೈಕೆಯಾಗಿಲ್ಲ. ಹೀಗಾದರೆ ಇದಕ್ಕೆ ಹೊಣೆ ಯಾರು ಎಂದು ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡಿದ್ದು ಕಂಡು ಬಂದು ಕೂಡಲೆ ಕೊಳವೆ ಬಾವಿ ಆಂಭಿಸಲು ಆಗ್ರಹಿಸಲಾಯತು.
ಗ್ರಾಪಂ ಸದಸ್ಯರೇ ಗುತ್ತಿಗೆದಾರರು ! : ಗ್ರಾಮ ಪಂಚಾಯಿತಿ ಮೂಲಕ ಜಾರಿ ಯಾಗುವ ಕೆಲಸಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರೇ ಗುತ್ತಿಗೆ ದಾರರಾಗಿದ್ದು. ಇದರಿಂದ ಗುಣ ಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಆದ್ದರಿಂದ ಗ್ರಾಪಂ ಕಾಮಗಾರಿಗಳನ್ನು ಬೇರೆ ಗುತ್ತಿಗೆದಾರರಿಗೆ ವಹಿಸುವಂತೆ ಅಧಿಕಾರಿಗಳಗೆ ಆಗ್ರಹಿಸಿದರು.
ಸದಸ್ಯರ ಗೈರು ! : ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಉತ್ತರಿಸಬೇಕಾದ ಗ್ರಾಮ ಪಂಚಾಯತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದರಿಂದ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದ್ದು ಕಂಡು ಬಂತು. ಸಂಧ್ಯಾ ಸುರಕ್ಷಾ ಯೋಜನೆ ಅರ್ಹರಿಗೆ ದೊರೆಯುತ್ತಿಲ್ಲ ಎಂದು ಕಂದಾಯ ಇಲಾಖೆ ವಿರುದ್ಧ ಗ್ರಾಮಸ್ಥರು ತೀವ್ರವಾಗಿ ಹರಿಹಾಯ್ದದ್ದು ಕಂಡು ಬಂತು. ಗ್ರಾಮಕ್ಕೆ ಕೃಷಿ ಸಹಾಯಕರೇ ಇಲ್ಲದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಬೇಗನೇ ಆ ಹುದ್ದೆ ಒದಗಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಹನಮಂತಪ್ಪ ಐನಾಪೂರ, ತಾಪಂ ಅಧಿಕಾರಿ ಬಿ.ವಿ.ಪಾಟೀಲ, ಎಸ್.ಎಸ್. ಉಳ್ಳೇಗಡ್ಡಿ, ಡಾ.ವೆಂಕಟೇಶ, ಆರ್.ಎಸ್.ಬುರುಡಿ, ಜಿಪಂ ಎಂಜಿನಿಯರ್ ಪಿ.ವೈ.ಹುಣಸಿಕಟ್ಟಿ, ಪಿಡಿಓ ಪೂಜಾರ, ವೆಂಕಪ್ಪ ಐನಾಪೂರ, ಮಲ್ಲಪ್ಪ ಐನಾಪೂರ, ಬಸಪ್ಪ ಮೊರಬದ ಸಭೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.