ಈ ಬಾರಿಯ ಗಣರಾಜ್ಯೋತ್ಸವದಂದು ಮಿಲ್ಲರ್ಸ್ ರಸ್ತೆಯಲ್ಲಿನ ಸೇಂಟ್ ಆ್ಯನ್ಸ್ ಶಾಲೆಯಲ್ಲಿ ಬಾಲಕಿಯರದ್ದೇ ರಾಜ್ಯ. ಕೆಂಪು-ಬಿಳಿ, ಹಸಿರು-ಬಿಳಿ ಹಾಗೂ ನೀಲಿ-ಬಿಳಿ, ಹಳದಿ-ಬಿಳಿ ರಂಗುಗಳ ಸಮವಸ್ತ್ರ ಧರಿಸಿದ್ದ ಪ್ರೌಢಶಾಲೆ ವಿದ್ಯಾರ್ಥಿನಿಯರ ಪರೇಡ್, ಅವರ ನಡುವೆ ಕೆಂಪು ದಿರಿಸಿನ ಬಾಲೆಯರ ಕವಾಯತು, ವಿವಿಧ ವ್ಯಾಯಾಮಗಳು ಬಣ್ಣದ ಲೋಕವನ್ನೇ ಸೃಷ್ಟಿಸಿತ್ತು.
ಭಾಷೆ ಹಲವು, ಆದರೆ ದೇಶ ಒಂದೇ ಎಂದು ಸಂದೇಶ ನೀಡುವ ಭಾರತಾಂಬೆಯ ನೃತ್ಯ ರೂಪಕ ನೆರೆದಿದ್ದ ಜನರಲ್ಲಿ ದೇಶಾಭಿಮಾನ ಹುಟ್ಟಿಸಿತು.
ನಿರೂಪಣೆ, ಗಣರಾಜ್ಯೋತ್ಸವದ ಕುರಿತಾದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸಕಲ ಕಾರ್ಯಕ್ರಮವನ್ನೂ ಬಾಲಕಿಯರೇ ನಡೆಸಿಕೊಟ್ಟಿದ್ದು ಇಲ್ಲಿಯ ವಿಶೇಷತೆ.
ದೇಶದಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ತೊಲಗಿಸಲು ಯುವ ಪೀಳಿಗೆ ಒಂದಾಗಿ ದುಡಿಯಬೇಕು ಎನ್ನುವ ಮೂಲಕ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಅರುಣ್ ಮೇರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮಾರ್ಗೇಟ್ ಹಾಗೂ ಅಸಿಸ್ಟೆಂಟ್ ಜನರಲ್ ಸಿಸ್ಟರ್ ಗ್ರೇಸಿ ಅಂಥೋನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣರಾಜ್ಯೋತ್ಸವದ ಶುಭ ಕೋರಿದರು.