ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ಪರಿಹಾರವಲ್ಲದ ಮಾರ್ಗ

ನೇಣು ಹಾಕಿಕೊಂಡು ಯುವಕ, ಯುವತಿಯ ಆತ್ಮಹತ್ಯೆ, ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ  ವಿದ್ಯಾರ್ಥಿ, ವಿದ್ಯಾರ್ಥಿನಿಯರ ಆತ್ಮಹತ್ಯೆ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ, ಕೌಟುಂಬಿಕ ಶೋಷಣೆ ತಾಳಲಾರದೆ ವಿಷ ಸೇವಿಸಿದ ಮಹಿಳೆ, ಸಾಲದ ಬಾಧೆ ತಾಳಲಾರದೆ ರೈತ ನೇಣಿಗೆ ಶರಣು, ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿ... ಆತ್ಮಹತ್ಯೆಗೆ ಸಂಬಂಧಿಸಿದ ಇಂತಹ ಹಲವಾರು  ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ.

ಮನುಷ್ಯ, ಜಗತ್ತಿಗೆ ಬಂದಾಗಿನಿಂದ ಅನೇಕ ಬಗೆಯ ಕಷ್ಟ ಕಾರ್ಪಣ್ಯಗಳನ್ನು, ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಿದ್ದಾನೆ ಮತ್ತು ಎದುರಿಸುತ್ತಿದ್ದಾನೆ. ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಜೀವನ ಅಥವಾ ಸಂಘರ್ಷದ ಮತ್ತೊಂದು ಹೆಸರೇ ಜೀವನ. ಇದರಲ್ಲಿ ಸಾಫಲ್ಯ ಹಾಗೂ ವೈಫಲ್ಯ ಎರಡೂ ಇವೆ. ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಏನನ್ನಾದರೂ ಪಡೆಯಬೇಕಾದರೆ ಅದಮ್ಯ ಸಾಹಸ, ದೃಢ  ಸಂಕಲ್ಪ ಮಾಡಬೇಕು ಮತ್ತು ಶ್ರಮಿಸಬೇಕು, ನಿರಂತರ ಪ್ರಯತ್ನಗಳಿರಬೇಕು. ಇವುಗಳಿದ್ದಾಗ ಮಾತ್ರ ಬದುಕು ಅರ್ಥ ಕಂಡುಕೊಳ್ಳುತ್ತದೆ. ನೆಮ್ಮದಿ, ಶಾಂತಿ, ಯಶಸ್ಸು ಲಭಿಸುತ್ತದೆ.

ಮನುಷ್ಯ ಸ್ವಾಭಾವಿಕವಾಗಿ ಸಂವೇದನಾಶೀಲ. ತನ್ನ ಆತ್ಮಪ್ರತಿಷ್ಠೆಗೆ ಧಕ್ಕೆ ಉಂಟಾದಾಗ ತನಗೆ ಸುಲಭ ಎನಿಸುವ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಸಣ್ಣ ವಿವಾದ, ಸಮಸ್ಯೆ ಅಥವಾ ಕ್ಷುಲ್ಲಕ ಕಾರಣಗಳೂ ಆತ್ಮಾಭಿಮಾನದ ಕಾರಣದಿಂದ ಕೆಲವೊಮ್ಮೆ ಮನಸ್ಸಿಗೆ ಅಸಹನೀಯ ವೇದನೆಯನ್ನು ತರುತ್ತವೆ. ಸಮಸ್ಯೆ ತೀವ್ರವಾದಾಗ ಮನಸ್ಸಿನಲ್ಲಿ ಆವೇಗ ಅಥವಾ ಉದ್ವೇಗ ಹೆಚ್ಚಿ ಆಲೋಚನೆಯ ದಾರಿಗಳು ಮುಚ್ಚಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಆತ ವಿಚಾರ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಈ ಕ್ಷಣಿಕ ಆವೇಶದಲ್ಲಿ ಎಲ್ಲವೂ ಏರುಪೇರಾಗುತ್ತವೆ. ಈ ಸಂದರ್ಭವು ಆತನನ್ನು ಆತ್ಮಹತ್ಯೆಯತ್ತ  ಸೆಳೆದುಕೊಂಡು ಹೋಗುತ್ತದೆ.

ಸಮಾಜಶಾಸ್ತ್ರಜ್ಞ ಡರ್ಖೀಂ ಅವರು ಹೇಳುವ ಹಾಗೆ, ಮನುಷ್ಯ ನೈತಿಕವಾಗಿ ಅಧಃಪತನಗೊಳ್ಳುತ್ತಾ ಹೋದಂತೆಲ್ಲ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತವೆ. ಹೀಗಾಗಿ ನಮ್ಮ ಸಮಾಜದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ನೈತಿಕ ಅಧಃಪತನ ಕೂಡ ಕಾರಣ ಎನ್ನಬಹುದು.

ಹೆಚ್ಚಿನ ಆತ್ಮಹತ್ಯೆಗಳಿಗೆ ಬಂಧುಗಳು ಹಾಗೂ ಇತರರಿಂದ ವ್ಯಕ್ತಿ ಅಪಮಾನಿತನಾಗುವುದೇ ಪ್ರಮುಖ ಕಾರಣವಾಗಿರುತ್ತದೆ. ಇತರರಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ವಿಚಾರ ಮಾಡದೆ, ನೊಂದು ಆತ್ಮಹತ್ಯೆಯ ಬಗ್ಗೆ ಯೋಚಿಸುವುದು ದುರಂತ ಅಂತ್ಯಕ್ಕೆ ಕಾರಣವಾಗುತ್ತದೆ. ಸಮಸ್ಯೆಗಳಿಂದ ತೊಳಲಾಡುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮನಸ್ಸು ಮಾಡಿದರೂ ಬದುಕಬೇಕೆಂಬ ಆಸೆಯೂ ಆತನ ಮನಸ್ಸಿನಲ್ಲಿ ತುಡಿಯುತ್ತಿರುತ್ತದೆ. ಆದರೆ ಸಮಸ್ಯೆಗಳಲ್ಲೇ ಹೆಚ್ಚಾಗಿ ಮನಸ್ಸನ್ನು ಕೇಂದ್ರಿಕೃತಗೊಳಿಸಿದವರು ತಮ್ಮ ಅಸ್ತಿತ್ವವನ್ನು ಮರೆತು ಆತ್ಮಹತ್ಯೆಗೆ ಶರಣಾಗುತ್ತಾರೆ.

ಮನಸ್ಸಿನಲ್ಲಿ ಕಲ್ಪಿಸಿಕೊಂಡ ಆಸೆಗಳು, ಕನಸುಗಳಿಗೆ ತದ್ವಿರುದ್ಧವಾಗಿ ದುಃಖ-ದುಮ್ಮಾನಗಳು ಎದುರಾದರೆ ವ್ಯಕ್ತಿಯ ಸ್ಥೈರ್ಯ, ಶಕ್ತಿ ಕುಸಿಯುತ್ತದೆ. ಭವಿಷ್ಯದ ಬಗ್ಗೆ ವಿಶ್ವಾಸ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಳೆದುಕೊಂಡಂತಾಗುತ್ತದೆ. ಅರೆ ಪ್ರಯತ್ನದಿಂದ ಮಾಡಿದ ಕೆಲಸಗಳು ವಿಫಲವಾದಾಗ ನಿರಾಸೆ ಆವರಿಸಿಕೊಳ್ಳುತ್ತದೆ. ಭಾವನೆಗಳು ದುರ್ಬಲಗೊಳ್ಳುತ್ತವೆ.

ದೃಢವಿಶ್ವಾಸದ ಕೊರತೆಯಿಂದ ಪ್ರತಿರೋಧಕ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ತಾನು ನಂಬಿದವರಿಂದ ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗದಿದ್ದಾಗ ಮತ್ತು ಅವರಿಂದ ಅಸಹಕಾರ, ವ್ಯತಿರಿಕ್ತ ವರ್ತನೆಗಳು ಕಂಡುಬಂದಾಗ ವ್ಯಕ್ತಿ ತನ್ನ ಮೇಲೇ ವಿಶ್ವಾಸ ಕಳೆದುಕೊಳ್ಳುವಂತೆ ಆಗುತ್ತದೆ. ಹೀಗೆ ಒಬ್ಬ ವ್ಯಕ್ತಿ ತನ್ನ ಬಗ್ಗೆಯೇ ನಂಬಿಕೆ ಕಳೆದುಕೊಂಡರೆ ಅವನಲ್ಲಿನ ಮಾನಸಿಕ ಶಕ್ತಿ ದುರ್ಬಲವಾಗುತ್ತದೆ. ನಿರಾಸೆಯ ಉತ್ತುಂಗದ ಸ್ಥಿತಿ ತಲುಪಿದಾಗ ಅದರಿಂದ ಪಾರಾಗಲು ಆತ್ಮಹತ್ಯೆಯ ಸುಲಭ ಮಾರ್ಗ ಹುಡುಕಿಕೊಳ್ಳುತ್ತಾನೆ ಎಂದು ಅನೇಕ ಸಮಾಜ ವಿಜ್ಞಾನಿಗಳು ಮತ್ತು  ಮನಃಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ನಗರಗಳ ಆಡಂಬರದ ಜೀವನ ಹಾಗೂ ಮಾನವರಲ್ಲಿ ಹೆಚ್ಚುತ್ತಿರುವ ಆಸೆ ಆಕಾಂಕ್ಷೆಗಳು ಅವರ ಜೀವನದ ಚೌಕಟ್ಟನ್ನು ಕೂಡ ಅಸ್ತವ್ಯಸ್ತಗೊಳಿಸುತ್ತವೆ. ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದಿದ್ದಾನೆ. ಈ ರೀತಿ ಅತಿ ಆಸೆಯ ಪರಿಣಾಮವಾಗಿ ಲಾಭ, ನಷ್ಟದ ಲೆಕ್ಕಾಚಾರ ಹೆಚ್ಚಾಗಿ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತಿದೆ.

ಹಣ ಸಂಪಾದಿಸುವ ಸ್ಪರ್ಧೆ ಹಾಗೂ ಇಂದಿನ ಯಾಂತ್ರಿಕ ಯುಗದಲ್ಲಿ ಮಾನವೀಯ, ಭಾವನಾತ್ಮಕ ಸಂಬಂಧಗಳಿಂದ ದೂರ ಸರಿಯುತ್ತಿದ್ದೇವೆ. ಪ್ರೀತಿ, ವಿಶ್ವಾಸ, ಹೊಂದಾಣಿಕೆ, ಸಹನೆ, ತಾಳ್ಮೆಯಂತಹ ಗುಣಗಳು ಮಾಯವಾಗುತ್ತಿವೆ. ನಮ್ಮ ಸುತ್ತಲೂ ಸ್ವಾರ್ಥ, ಅಹಂಕಾರದ ಗೋಡೆಗಳನ್ನು ಕಟ್ಟಿಕೊಂಡಿದ್ದೇವೆ. ಇದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಒಂಟಿತನ, ದ್ವೇಷ, ಕ್ಷುಲ್ಲಕ ಜಗಳಗಳು ಮಾನಸಿಕ ಒತ್ತಡವನ್ನು ಹಾಗೂ ತೀವ್ರ  ಆತಂಕವನ್ನು ತಂದೊಡ್ಡುತ್ತಿವೆ. ಪರಸ್ಪರರು ಹೊಂದಿಕೊಂಡು ಹೋಗುವ ಹೃದಯ ವೈಶಾಲ್ಯ ತೋರಿಸುತ್ತಿಲ್ಲ. ಇತರರ ಸುಖ ದುಃಖಗಳನ್ನು ಅರಿತುಕೊಳ್ಳಲು ಯಾರಿಗೂ ಸಮಯವೇ ಇಲ್ಲದಂತಾಗಿದೆ. ಇದರಿಂದ ನೊಂದವರಿಗೆ ಸಾಂತ್ವನ ಸಿಗದೆ  ಅವರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ.

ಮನಸ್ಸಿನಲ್ಲಿ ನಿರಾಸೆ ತುಂಬಿಕೊಳ್ಳುವ ವ್ಯಕ್ತಿ ಧೈರ್ಯ ಕಳೆದುಕೊಂಡು, ಮುಂದಾಗುವ ವಿಪತ್ತುಗಳನ್ನು ಊಹಿಸುತ್ತಾ ಚಿಂತೆಗೊಳಗಾಗುತ್ತಾನೆ. ನಿರಾಸೆಯ ಭಾವನೆ ಎಂದಿಗೂ ಒಳ್ಳೆಯದಲ್ಲ. ಸ್ಪರ್ಧಾಳುಗಳ ಗೆಲುವು ಅಗೋಚರವಾಗಿರುತ್ತದೆ. ಹಾಗೆಯೇ  ಮನುಷ್ಯನ ಜೀವನದ ಸಾಫಲ್ಯ ಮೊದಲೇ ಗೋಚರಿಸದಿರಬಹುದು.  ಪರಿಶ್ರಮಪಟ್ಟರೆ ಯಶಸ್ಸು ದೊರೆಯುತ್ತದೆ.

ಕಚೇರಿಗೆ, ಕಾಲೇಜಿಗೆ ಅಥವಾ ಊರಿಗೆ ಹೊರಟಾಗ ಬಸ್ಸು ಕೆಟ್ಟು ಹೋದರೆ ಮತ್ತೊಂದು ಬಸ್ಸನ್ನು ಹಿಡಿದು ಹೋಗುವುದಿಲ್ಲವೇ? ಬಸ್ಸು ಕೆಟ್ಟು ಹೋಯಿತೆಂದು  ಯಾರೂ ಮನೆಗೆ ಹಿಂದಿರುಗುವುದಿಲ್ಲ. ಅದೇ ರೀತಿ ಸಮಸ್ಯೆಗಳು ಎದುರಾದಾಗ ಆತ್ಮಹತ್ಯೆಗೆ ಶರಣಾಗುವ ಬದಲು, ಪರಿಹಾರ ಕಂಡುಕೊಂಡು ಮುಂದಡಿ ಇಟ್ಟಾಗ ಜೀವನ ಸುಂದರವಾಗುತ್ತದೆ. ತಾನು ಆತ್ಮಹತ್ಯೆ ಮಾಡಿಕೊಂಡರೆ ತನ್ನ ಕುಟುಂಬ ಎಂಥ ಸಮಸ್ಯೆಗಳನ್ನು, ತಲ್ಲಣಗಳನ್ನು ಎದುರಿಸುತ್ತದೆ ಎಂಬ ಬಗ್ಗೆ ವಿಚಾರ ಮಾಡಬೇಕು.

ಸಮಾಜಶಾಸ್ತ್ರಜ್ಞರ ಪ್ರಕಾರ, ಅನೇಕ ಘಟನೆಗಳ ಸರಮಾಲೆಯೇ ಮಾನವನ ಬದುಕು. ಜೀವನದಲ್ಲಿ ದುಃಖವಿರುವಂತೆ ಸುಖವೂ ಇದೆ. ಭಾವನೆಗಳ ಲೋಕದಲ್ಲಿ ವಾಸ್ತವದ ಬಗ್ಗೆ ಜಾಗೃತರಾಗಿರಬೇಕು. ದುಃಖ ಶಾಶ್ವತ ಎಂಬ ಕಲ್ಪನೆ ಎಂದಿಗೂ ಸರಿಯಲ್ಲ. ಸಮಸ್ಯೆಗಳನ್ನು ಎದುರಿಸಲು ನಮ್ಮ ಮನಸ್ಸು ಸದಾ ಸಿದ್ಧವಾಗಿರಬೇಕು. ಸಮಸ್ಯೆಗಳಿಗೆ ಹಿಂಜರಿಯದೆ ಅವುಗಳನ್ನು ಎದುರಿಸಿ ಮುನ್ನಡೆಯಬೇಕು. ಅದೇ ನಿಜವಾದ ಜೀವನ ಮತ್ತು ಆಗಲೇ ಜೀವನಕ್ಕೆ ಒಂದು ಅರ್ಥ ಬರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT