ಬೆಂಗಳೂರು: ಯಲಹಂಕ ಬಳಿಯ ಯಶೋಧಾ ನಗರದಲ್ಲಿ ನಡೆದಿದ್ದ ಸುಜಾತಾ (45) ಎಂಬ ಮಹಿಳೆಯ ಕೊಲೆ ಪ್ರಕರಣ ಸಂಬಂಧ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಸಿದ್ದಪ್ಪ ಅಮರಪ್ಪ ಸಿಂಧನೂರು (51) ಎಂಬಾತನನ್ನು ಬಂಧಿಸಿದ್ದಾರೆ.
ಮೂಲತಃ ರಾಯಚೂರಿನ ಸಿದ್ದಪ್ಪ, ಸುಜಾತಾ ಅವರಿಗೆ ಹಲವು ವರ್ಷಗಳಿಂದ ಪರಿಚಿತನಾಗಿದ್ದ. ಅಲ್ಲದೇ, ಆತ ಆಗಾಗ್ಗೆ ಅವರ ಮನೆಗೂ ಹೋಗುತ್ತಿದ್ದ. ಅದೇ ರೀತಿ ಮಾ.19ರಂದು ರಾತ್ರಿ ಮನೆಗೆ ಹೋಗಿದ್ದ ಆತ ಚಾಕುವಿನಿಂದ ಅವರ ಕತ್ತು ಕೊಯ್ದು ಕೊಲೆ ಮಾಡಿ ರೂ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.`ಡಿಪ್ಲೊಮಾ ಓದಿರುವ ಸಿದ್ದಪ್ಪ ನಿರುದ್ಯೋಗಿಯಾಗಿದ್ದ. ಸಾಂಖಿಕ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಆತನ ಪತ್ನಿಗೆ ಆರು ವರ್ಷಗಳ ಹಿಂದೆ ರಾಯಚೂರಿನಿಂದ ನಗರಕ್ಕೆ ವರ್ಗಾವಣೆಯಾಗಿತ್ತು.
ಈ ಕಾರಣಕ್ಕಾಗಿ ಆತ ಪತ್ನಿ ಮತ್ತು ಕುಟುಂಬ ಸದಸ್ಯರೊಂದಿಗೆ ನಗರಕ್ಕೆ ಬಂದು ಮಲ್ಲೇಶ್ವರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಜೂಜಾಟ, ಕುದುರೆ ರೇಸ್ ಹಾಗೂ ವೇಶ್ಯೆಯರ ಸಹವಾಸದಂತಹ ದುಶ್ಚಟಗಳಿಗೆ ಬಲಿಯಾಗಿದ್ದ ಆತ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲದ ಹಣ ತೀರಿಸುವ ಉದ್ದೇಶಕ್ಕಾಗಿ ಸುಜಾತಾ ಅವರನ್ನು ಕೊಲೆ ಮಾಡಿ, ಅವರ ಮೈ ಮೇಲಿನ ಆಭರಣಗಳನ್ನು ದೋಚಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು 2012ರ ಸೆಪ್ಟೆಂಬರ್ನಲ್ಲಿ ಮಂತ್ರಾಲಯಕ್ಕೆ ಪ್ರವಾಸ ಹೋಗುವುದಾಗಿ ಕುಟುಂಬ ಸದಸ್ಯರಿಗೆ ಸುಳ್ಳು ಹೇಳಿ ಬಳ್ಳಾರಿಗೆ ಹೋಗಿ ಅತ್ತೆ ಗುಲ್ಷನ್ಬಿ (65) ಅವರನ್ನು ಕೊಲೆ ಮಾಡಿ,ರೂ 4 ಲಕ್ಷ ಮೌಲ್ಯದ ಆಭರಣಗಳನ್ನು ದೋಚಿದ್ದ. ಆ ನಂತರ ಕೊಲೆ ಘಟನೆಯ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಗುಲ್ಷನ್ಬಿ ಅವರ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದ. ಸುಜಾತಾ ಅವರ ಕೊಲೆ ಪ್ರಕರಣ ಸಂಬಂಧ ಆತನನ್ನು ಬಂಧಿಸಿದಾಗ ಗುಲ್ಷನ್ಬಿ ಕೊಲೆ ಪ್ರಕರಣವೂ ಬೆಳಕಿಗೆ ಬಂತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಬೈಲ್ ಕರೆ ಆಧರಿಸಿ ಪತ್ತೆ: `ಆರೋಪಿಯು ಸುಜಾತಾ ಅವರ ಮೊಬೈಲ್ಗೆ ಆಗಾಗ್ಗೆ ಕರೆ ಮಾಡುತ್ತಿದ್ದ. ಅದೇ ರೀತಿ ಕೊೆ ಘಟನೆ ನಡೆದ ದಿನ ಸಂಜೆ ರೇಸ್ಕೋರ್ಸ್ ಬಳಿಯ ಕಾಯಿನ್ ಬೂತ್ನಿಂದ ಅವರಿಗೆ ಕರೆ ಮಾಡಿದ್ದ. ಸುಜಾತಾ ಹಾಗೂ ಸಿದ್ದಪ್ಪನ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಪ್ರಕರಣ ಭೇದಿಸಲಾಯಿತು. ಆರೋಪಿಯಿಂದ ್ಙ 8 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ' ಎಂದು ತನಿಖಾಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.