ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವೆ ಸಂಚಾರಿ ನಿಯಮ ಪಾಲನೆಗೆ ಮಾದರಿ...

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್: ಪಕ್ಷಿಗಳು, ಇರುವೆಯಂತಹ ಪುಟ್ಟ ಜೀವಿಗಳು ನಿಯಮ ಪಾಲನೆ ಮಾಡಿ ಸರತಿಯಲ್ಲಿ ಸಾಗುತ್ತವೆ. ಆದರೆ ಬುದ್ದಿವಂತ ಪ್ರಾಣಿ ಮನುಷ್ಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸುರಕ್ಷತೆಗೆ ಹಾಗೂ ಸುಗುಮ ಸಂಚಾರಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ನುಡಿದರು.

 ಎಲೆಕ್ಟ್ರಾನಿಕ್‌ಸಿಟಿಯ ಹೊಸೂರು ರಸ್ತೆಯ ಬಳಿ ಸಂಚಾರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಟಾಟಿಸಿ ಮಾತನಾಡಿದರು.

4ಸಾವಿರ ಕಿ.ಮೀಗೂ ಹೆಚ್ಚಿನ ದೂರದ ಸೈಬೀರಿಯಾ ದೇಶದಿಂದ ಪಕ್ಷಿಗಳು ಭಾರತಕ್ಕೆ ವಲಸೆ ಬಂದು ಸುರಕ್ಷಿತವಾಗಿ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ. ಲಕ್ಷಾಂತರ ಇರುವೆಗಳು ಚಿಕ್ಕ ಗೂಡಿನಲ್ಲಿದ್ದರೂ ಸಹ ಸರತಿ ಸಾಲಿನ ನಿಯಮ ಅನುಸರಿಸಿ ನೂಕ್ಕುನುಗ್ಗಲಿಲ್ಲದೆ ಜೀವನವನ್ನು ಸಾಗಿಸುತ್ತವೆ. ಆದರೆ ಜನರು ರಸ್ತೆಗಳಲ್ಲಿ ನಿಯಮಗಳನ್ನು ಪಾಲನೆ ಮಾಡದೆ ಅಪಘಾತ ಗಳಿಗೆ ದಾರಿಮಾಡಿಕೊಡುತ್ತಿದ್ದಾರೆ.

ವಿದೇಶಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ. ಭಾರತದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

ಆಗ್ನೇಯ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಮಾತನಾಡಿ, ವಾಹನ ದಟ್ಟಣೆ ಹೆಚ್ಚುತ್ತಿರುವು ದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ ಇದನ್ನು ತಡೆಯಲು ಹಲವು ಯೋಜನೆಗಳನ್ನು ರೂಪಿಸಿದ್ದರೂ ಜನರು ಪಾಲಿಸುತ್ತಿಲ್ಲ ಎಂದರು. ನಿಯಮ ಪಾಲನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಯಮಗಳನ್ನು ಉಲ್ಲಂಘಿ ಸಿದವರಿಗೆ ಕಟ್ಟುನಿಟ್ಟಾಗಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಟ ಯೋಗೀಶ್ ಮಾತನಾಡಿ, ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಿದರೆ ಸಂಚಾರ ಸುಗಮವಾಗುತ್ತದೆ. ವಾಹನ ಚಾಲನಾ ಪರವಾನಿಗಿ ಇಲ್ಲದೆ ವಾಹನ ಚಾಲನೆ ಮಾಡಬಾರದು ಅತಿ ವೇಗದ ಚಾಲನೆ ಮಾಡಬಾರದು. ಯುವ ಜನರು ಅಡ್ಡಾದಿಡ್ಡಿ ಚಾಲನೆ ಹಾಗೂ ವೀಲಿಂಗ್ ಚಾಲನೆ ಮಾಡುವ ಅಭ್ಯಾಸ ಹೊಂದಿದ್ದಾರೆ ಇದರಿಂದ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಅಖಿಲ ಭಾರತ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರು ಮಾತನಾಡಿ, ಕುಡಿದು ವಾಹನ ಚಾಲನೆ ಮಾಡುವುದು ಅಪಘಾತಗಳಿಗೆ ಕಾರಣವಾಗಿದೆ. ಇಂತಹವರ ಚಾಲನಾ ಪರವಾನಿಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದರು. ರಸ್ತೆ ಅಪಘಾತಗಳಿಂದ ರಾಜ್ಯದಲ್ಲಿ ಒಂದು ವರ್ಷದಲ್ಲಿ 29ಸಾವಿರ ಮಂದಿ ಮೃತಪಟ್ಟಿರುವ ಅಂಕಿಅಂಶಗಳಿವೆ. ಹಾಗಾಗಿ ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದರು.

ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ನಾಗರಾಜು, ನಟರಾದ ಕಿಶೋರ್, ಶೇಖರ್, ಶಂಕರೇಗೌಡ, ಚಂದ್ರು, ನಟಿ ರೂಪಶ್ರೆ ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿಗಳೊಂದಿಗೆ ಜಾಥ ನಡೆಸಿ ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT