ಮಂಡ್ಯ: 2012-13ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ನಗರದ ಆರು ಕೇಂದ್ರಗಳಲ್ಲಿ ಸೋಮವಾರದಿಂದ ಆರಂಭಗೊಂಡಿದೆ.
ಲಕ್ಷ್ಮಿ ಜನಾರ್ದನ ಬಾಲಕಿಯರ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ, ಕಾರ್ಮೆಲ್ ಕಾನ್ವೆಂಟ್ನಲ್ಲಿ ಕನ್ನಡ ಭಾಷೆ, ರೋಟರಿ ಶಾಲೆಯಲ್ಲಿ ವಿಜ್ಞಾನ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಕಲ್ಲುಕಟ್ಟಡ) ಇಂಗ್ಲಿಷ್ ಭಾಷೆ, ಸೆಂಟ್ ಜಾನ್ಸ್ ಶಾಲೆಯಲ್ಲಿ ಹಿಂದಿ ಭಾಷೆ, ಸೆಂಟ್ ಜೋಸೆಫ್ ಶಾಲೆಯಲ್ಲಿ ಗಣಿತ ವಿಷಯಗಳ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದಿದೆ.
`ಜಿಲ್ಲೆಯಲ್ಲಿ ವಿವಿಧ ವಿಷಯಗಳ ಮೌಲ್ಯಮಾಪನಕ್ಕೆ 2267 ಮಂದಿ ಸಹ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಶೇ 95ರಷ್ಟು ಮಂದಿ ಸೋಮವಾರ ಆರಂಭಗೊಂಡ ಮೌಲ್ಯ ಮಾಪನದಲ್ಲಿ ಭಾಗವಹಿಸಿದ್ದಾರೆ' ಎಂದು ಎಸ್ಎಸ್ಎಲ್ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಚಂದ್ರಶೇಖರ್ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.