ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಯರ್‌ಗೆ ಭಾವಪೂರ್ಣ ನಮನ

ಜಿಲ್ಲೆಯಲ್ಲಿ ಅಂಗಡಿ ವ್ಯಾಪಾರ, ಖಾಸಗಿ ಬಸ್‌ ಸಂಚಾರ ಸ್ತಬ್ಧ
Last Updated 12 ಡಿಸೆಂಬರ್ 2013, 6:08 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ರಾಜಮನೆತನವಾದ ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನ ಜಿಲ್ಲೆಯ ಜನರನ್ನು ದುಃಖದ ಮಡಿಲಿಗೆ ದೂಡಿದೆ.

ಒಡೆಯರ್ ಅವರ ನಿಧನದ ಸುದ್ದಿ ತಿಳಿದ ಜಿಲ್ಲೆಯ ನಾಗರಿಕರು ಹಾಗೂ ವಿವಿಧ ಸಂಘ– ಸಂಸ್ಥೆಗಳ ಮುಖಂಡರು ಶೋಕ ಸಾಗರದಲ್ಲಿ ಮುಳುಗಿದರು. ಮೈಸೂರು ಓಡೆಯರು ಹಾಗೂ ಚಾಮರಾಜನಗರ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಚಾಮರಾಜ ಒಡೆಯರ್‌ ಜಿಲ್ಲಾ ಕೇಂದ್ರದಲ್ಲಿಯೇ ಜನಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಕ್ಕೆ ‘ಚಾಮರಾಜನಗರ‘ ಎಂದು ನಾಮಕರಣ ಮಾಡಲಾಗಿದೆ.

ಒಡೆಯರ್‌ 1997ರಲ್ಲಿ ಇಲ್ಲಿನ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಆ ನಂತರ ಇಲ್ಲಿಯವರೆಗೆ ಅವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿಲ್ಲ. ಆದರೆ, ಈ ಮೊದಲು ಚಾಮರಾಜನಗರ ಅವಿಭಜಿತ ಮೈಸೂರು ಜಿಲ್ಲೆಯಲ್ಲಿತ್ತು. ಒಂದು ಕಾಲದಲ್ಲಿ ಈ ಪ್ರದೇಶ ಮೈಸೂರು ಅರಸರ ಹಿಡಿತದಲ್ಲಿತ್ತು.

ಹೀಗಾಗಿ, ಇಲ್ಲಿನ ಜನರು ಹಾಗೂ ಮೈಸೂರು ಅರಸರ ನಡುವೆ ಭಾವನಾತ್ಮಕ ನಂಟಿದೆ. ಹಿರಿತಲೆಗಳು ಮೈಸೂರು ಅರಸರ ರಾಜವೈಭೋಗ, ಆಡಳಿತದ ಬಗ್ಗೆ ಇಂದಿಗೂ ಮೆಲುಕು ಹಾಕುತ್ತಾರೆ. ಒಡೆಯರ್‌ ನಿಧನರಾದ ಸುದ್ದಿ ತಿಳಿದ ತಕ್ಷಣ ಮಂಗಳವಾರ ರಾತ್ರಿಯೇ ಕೆಲವು ಅಂಗಡಿ ಮಾಲೀಕರು ಬಾಗಿಲು ಮುಚ್ಚಿ ಸಂತಾಪ ಸೂಚಿಸಿದರು.

ಬೆಳಿಗ್ಗೆ ಸ್ತಬ್ಧ: ಮೈಸೂರಿನ ಮಧುವನದಲ್ಲಿ ಒಡೆಯರ್‌ ಅವರ ಅಂತ್ಯಸಂಸ್ಕಾರ ಬುಧವಾರ ನಡೆದ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಮಾಲೀಕರು ಅಂಗಡಿಗಳನ್ನು ಬಂದ್‌ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

ಜನನಿಬಿಡ ಸ್ಥಳವಾಗಿರುವ ದೊಡ್ಡಅಂಗಡಿ, ಚಿಕ್ಕಅಂಗಡಿ ಬೀದಿ, ಡಿವಿಯೇಷನ್‌ ರಸ್ತೆ, ಜೋಡಿರಸ್ತೆ, ಗುಂಡ್ಲುಪೇಟೆ ವೃತ್ತದಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ಚಲನಚಿತ್ರ ಮಂದಿರಗಳಲ್ಲಿ ದಿನದ 4 ಪ್ರದರ್ಶನ ರದ್ದಾಗಿತ್ತು. ಪೆಟ್ರೋಲ್‌ ಬಂಕ್‌ಗಳು ಸ್ಥಗಿತಗೊಂಡಿದ್ದವು. ಖಾಸಗಿ ಬಸ್‌ ಸಂಚಾರ ಇರಲಿಲ್ಲ. ಇದರಿಂದ ಬಸ್‌ನಿಲ್ದಾಣ ಬಿಕೋ ಎನ್ನುತ್ತಿತ್ತು.

ಕೆಲವು ಹೋಟೆಲ್‌ಗಳು ತೆರೆದಿದ್ದವು. ಕೆಎಸ್‌ಆರ್‌ಟಿಸಿಯಿಂದ ಒಡೆಯರ್‌ ಅವರ ಅಂತಿಮ ದರ್ಶನಕ್ಕೆ ತೆರಳಲು ಮೈಸೂರಿಗೆ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು.

ಕೆಲವು ಬ್ಯಾಂಕ್‌ಗಳು ವಹಿವಾಟು ಸ್ಥಗಿತಗೊಳಿಸಿದ್ದವು. ಸರ್ಕಾರಿ ಕಚೇರಿಗಳು, ಶಾಲಾ– ಕಾಲೇಜಿಗೆ ರಜೆ ಘೋಷಣೆಯಾಗಿತ್ತು. ಆದರೆ, ರಜೆಯ ಸುದ್ದಿ ತಿಳಿಯದೆ ಜಿಲ್ಲಾ ಕೇಂದ್ರಕ್ಕೆ ಬೆಳಿಗ್ಗೆಯೇ ಬಂದಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

‘ಅರಸರ ಕೊಡುಗೆ ಸ್ಮರಣೀಯ’
ಚಾಮರಾಜನಗರ: ‘ಮೈಸೂರು ಅರಸರು ಗಡಿ ಜಿಲ್ಲೆಗೆ ಅನುಪಮ ಕೊಡುಗೆ ನೀಡಿದ್ದಾರೆ. ಜಿಲ್ಲಾ ಕೇಂದ್ರದ ರಥದ ಬೀದಿಯಲ್ಲಿರುವ ಜನನ ಮಂಟಪದಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಅವರ ತೊಟ್ಟಿಲಶಾಸ್ತ್ರ ಕೂಡ ನಡೆದಿತ್ತು.

ಮಹಾರಾಣಿ ಅವರಿಗಾಗಿ ಮಂಗಲದ ಶಂಕರದೇವನಗುಡ್ಡದ ಮೇಲೆ ದೇವಾಲಯ ನಿರ್ಮಿಸಲಾಗಿದೆ. ಚಾಮರಾಜೇಶ್ವರ ದೇವಸ್ಥಾನ ಕೂಡ ಅವರ ಕೊಡುಗೆಯಾಗಿದೆ’ ಎಂದು ಸಿಂಹ ಮೂವೀ ಪ್ಯಾರಡೈಸ್‌ನ ಮಾಲೀಕ ಎ. ಜಯಸಿಂಹ ಹೇಳಿದರು.

ಒಡೆಯರ್‌ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಚಿತ್ರಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ಸೈಯದ್ ಇಕ್ಬಾಲ್, ಸತ್ಯನಾರಾಯಣ, ಸುಂದರ, ರವಿ, ಮಂಜು ಹರದನಹಳ್ಳಿ, ಅಕ್ಷಯಕುಮಾರ್, ಮುರುಳೀಧರ, ಸೈಮನ್‌ ಡಿ ಸಿಲ್ವ, ರಂಗರಾಜು ಹಾಜರಿದ್ದರು.

ಜಟ್ಟಿ ಜನಾಂಗದ ಸಂತಾಪ: ಒಡೆಯರ್‌ ನಿಧನಕ್ಕೆ ನಗರದ ಜಟ್ಟಿ ಜನಾಂಗ ವೇದಿಕೆಯಿಂದ ಸಂತಾಪ ಸೂಚಿಸಲಾಯಿತು.

ದೇವಾಂಗ 1ನೇ ಬೀದಿಯಲ್ಲಿರುವ ಚಿಕ್ಕ ಗರಡಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಸಿ.ಎನ್. ಗೋವಿಂದರಾಜು, ರಾಜವಂಶಸ್ಥರು ಜಟ್ಟಿ ಜನಾಂಗಕ್ಕೆ ಆಶ್ರಯ ನೀಡಿ ಪ್ರೀತಿಯಿಂದ ಕಾಣುತ್ತಿದ್ದರು. ಒಡೆಯರ್‌ ಅವರ ನಿಧನದಿಂದ ಜನಾಂಗ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಸಂಘದ ಖಜಾಂಚಿ ಉಪೇಂದ್ರಕುಮಾರ್, ಗೌರವ ಕಾರ್ಯದರ್ಶಿ ಕಿಶೋರ್‌ಕುಮಾರ್ ಮಾತನಾಡಿದರು.
ಸಭೆಯಲ್ಲಿ ಬಾಲು, ಕಾಮರಾಜ್, ಮೋಹನ್, ವಿಲಾಸ, ಶ್ರೀನಿವಾಸ್, ವಿಜಯಕುಮಾರ್, ರವಿಕುಮಾರ್, ರಘು ಜಟ್ಟಪ್ಪ, ಸುನಿಲ್, ಮೋಹನ್ ಜಟ್ಟಿ ಹಾಜರಿದ್ದರು.

ರಕ್ಷಣಾ ವೇದಿಕೆ: ಒಡೆಯರ್‌ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಒಡೆಯರ್ ಅವರ ಭಾವಚಿತ್ರವಿಟ್ಟು ಸಂತಾಪ ಸೂಚಿಸಲಾಯಿತು. ಕರವೇ ಜಿಲ್ಲಾ ಅಧ್ಯಕ್ಷ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ನಂದೀಶ್, ನಗರಸಭೆ ಸದಸ್ಯೆ ರೇಣುಕಾ ಮಲ್ಲಿಕಾರ್ಜುನ, ರಾಜು ಪಟೇಲ್, ವಾಸು, ಸೂರಿ, ನಾಗೇಂದ್ರ ಹಾಜರಿದ್ದರು.

ವರ್ತಕರ ಸಂಘ: ನಗರದ ವರ್ತಕರ ಭವನದಲ್ಲಿ ಚಾಮರಾಜನಗರ ವರ್ತಕರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಒಡೆಯರ್ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಪ್ರಭಾಕರ್ ಹಾಗೂ ನಿರ್ದೇಶಕರು ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಪ್ರಭಾಕರ್, ಒಡೆಯರ್‌ ನಿಧನದಿಂದ ಹಳೇ ಮೈಸೂರು ಪ್ರಾಂತ್ಯಕ್ಕೆ ತುಂಬಲಾರದ ನಷ್ಟವಾಗಿದೆ

. ಅವರದು ಸರಳ ವ್ಯಕ್ತಿತ್ವ. ಎಲ್ಲರೊಂದಿಗೂ ಬೆರೆತು ಸ್ನೇಹಜೀವಿಯಾಗಿದ್ದರು. ಚಾಮರಾಜನಗರ ಹಾಗೂ ಒಡೆಯರ್‌ ಮನೆತನಕ್ಕೆ ಹೆಚ್ಚಿನ ಬಾಂಧವ್ಯವಿದೆ ಎಂದು ಸ್ಮರಿಸಿದರು.

ವರ್ತಕರಾದ ಜಿ.ಆರ್. ಅಶ್ವತ್ಥನಾರಾಯಣ, ಶ್ರೀನಿವಾಸಶೆಟ್ಟಿ, ಎಪಿಎಂಸಿ ನಿರ್ದೇಶಕ ಎಲ್. ಸುರೇಶ್,
ಸಂಘದ ಉಪಾಧ್ಯಕ್ಷ ಮುರುಗೇಶ್, ನಿರ್ದೇಶಕರಾದ ಎಸ್. ಬಾಲಸುಬ್ರಮಣ್ಯ, ಅಂಥೋನಿ ಡಿ ಸಿಲ್ವ, ರಾಜೇಂದ್ರ, ನಾರಾಯಣ, ಪಿ. ಶ್ರೀನಿವಾಸ, ನಾಗರಾಜು, ಶಾಂತಮಲ್ಲಪ್ಪ, ಬಸವರಾಜಪ್ಪ ಹಾಜರಿದ್ದರು.

ಜಿಲ್ಲಾ ಕಾಂಗ್ರೆಸ್‌ ಘಟಕ
ಒಡೆಯರ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ನಮನ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪುಟ್ಟಬುದ್ಧಿ ಮಾತನಾಡಿ, ಒಡೆಯರು ಬಹುಮುಖ ಪ್ರತಿಭೆಯಾಗಿದ್ದರು. ಅವರು ಅತ್ಯುತ್ತಮ ಕ್ರಿಕೆಟ್‌ ಪಟುವಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿಯೂ ಹೆಚ್ಚು ಪ್ರಸಿದ್ಧಿ ಹೊಂದಿದ್ದರು ಎಂದು ಸ್ಮರಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಬಿಂಬಿಸುವಲ್ಲಿ ಒಡೆಯರ್ ಅವರ ಕೊಡುಗೆ ಅಪಾರ. ಜನಸಾಮಾನ್ಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಅವರು, ಮೈಸೂರಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಆದ್ಯತೆ ನೀಡಿದ್ದರು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ರಫೀ, ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್, ಎ.ಎಚ್. ನಸ್ರುಲ್ಲಾಖಾನ್ ಹಾಜರಿದ್ದರು.

ಮಂಡೇಲಾ, ಒಡೆಯರ್‌ಗೆ ನಮನ
ಚಾಮರಾಜನಗರ: ಇತ್ತೀಚೆಗೆ ವಿಧಿವಶರಾದ ಮಾನವತಾವಾದಿ ನೆಲ್ಸನ್ ಮಂಡೇಲಾ ಹಾಗೂ ಒಡೆಯರ್‌ ಅವರ ನಿಧನಕ್ಕೆ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ದಲಿತ ಪ್ರಗತಿಪರ ಸಂಘಟನೆಗಳಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಪಿ. ದೇವರಾಜು ಮಾತನಾಡಿ, ನೆಲ್ಸನ್ ಮಂಡೇಲಾ ಮಹಾನ್ ಮಾನವತಾವಾದಿ. ಅವರು ಕಪ್ಪು ಜನಾಂಗದವರ ಸ್ವಾಭಿಮಾನದ ಸಂಕೇತ. ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸಿ, ಕಪ್ಪುಜನರಿಗೆ ಸ್ವಾತಂತ್ರ್ಯ ದೊರೆಕಿಸಿಕೊಟ್ಟ ಚೇತನ ಎಂದು ಬಣ್ಣಿಸಿದರು.

ದೇಶದ ಎಲ್ಲ ಸಂಸ್ಥಾನಗಳಿಗಿಂತ ಮೈಸೂರು ಮಹಾಸಂಸ್ಥಾನ ಸಾಮಾಜಿಕ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ರಾಜ ವಂಶಸ್ಥರ ಕೊಡುಗೆ ಅಪಾರ. ಅಂತಹ ವಂಶದ ಕೊನೆಯ ಕುಡಿಯನ್ನು ಕಳೆದುಕೊಂಡಿರುವುದು ಜಿಲ್ಲೆ, ರಾಜ್ಯಕ್ಕೆ ತುಂಬಲಾರದ ನಷ್ಟ ಎಂದರು.

ಹಿರಿಯ ರಂಗಕರ್ಮಿ ಕೆ. ವೆಂಕಟರಾಜು, ದಲಿತ ಮುಖಂಡ ವೆಂಕಟರಮಣಸ್ವಾಮಿ, ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಆಲೂರು ನಾಗೇಂದ್ರ, ರವಿಚಂದ್ರಪ್ರಸಾದ್, ಕುನ್ನಮಾದಯ್ಯ, ಶಿವಕುಮಾರ್ ಹಾಜರಿದ್ದರು.

‘ಸರಳ ಸಜ್ಜನಿಕೆಯ ಅರಸು’
ಕೊಳ್ಳೇಗಾಲ: ಮೈಸೂರು, ಚಾಮರಾಜನಗರ ಜಿಲ್ಲೆಗಳ ಅಭಿವೃದ್ಧಿಯಲ್ಲಿ ಮೈಸೂರು ಅರಸರ ಕೊಡುಗೆ ಅಪಾರ ಎಂದು ದಿನೇಶ್‌ಗುಪ್ತ ತಿಳಿಸಿದರು.

ಪಟ್ಟಣದ ದಕ್ಷಿಣ ಬಡಾವಣೆಯಲ್ಲಿ ಬುಧವಾರ ದಕ್ಷಿಣ ಬಡಾವಣೆ ವ್ಯಾಪಾರಿಗಳ ವೇದಿಕೆ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭಾ ಸದಸ್ಯ ಗಿರೀಶ್‌, ನಂಜುಂಡಸ್ವಾಮಿ, ಶಶಿಧರ್‌, ವೆಂಕಟೇಶ್‌, ಗುರುಸ್ವಾಮಿ, ಡಿ.ನಟರಾಜು, ರಾಜೇಂದ್ರ  ಸಭೆಯಲ್ಲಿ ಇದ್ದರು.

‘ಸಂಸ್ಕೃತಿಗೆ ಒಡೆಯರ್‌ ಕೊಡುಗೆ’
ಕೊಳ್ಳೇಗಾಲ: ಒಡೆಯರ ನಿಧನದಿಂದ ಮೈಸೂರು ಅರಸು ಮನೆತನ ಪರ್ಯವಸಾನ ಕಂಡಿರುವುದು ಬೇಸರದ ಸಂಗತಿ ಎಂದು ಅಪರ ಸಿವಿಲ್‌ ನ್ಯಾಯಾಧೀಶ ಎಂ. ಪುರುಷೋತ್ತಮ್‌ ತಿಳಿಸಿದರು.

ಪಟ್ಟಣದ ವಕೀಲರ ಸಂಘದ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ವಕೀಲ ಶಶಿಬಿಂಬ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ನಿರ್ಮಲಾ, ಮಹಾದೇವ, ಮಾದಪ್ಪ,
ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಲಕ್ಷ್ಮಣ್‌ರಾವ್‌ ಮಿಸ್ಕಿನ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಜಿ. ಗೀತಾಂಜಲಿ, ವಕೀಲರಾದ ಶಿವಸ್ವಾಮಿ, ಮಸಣನಾಯಕ, ಮೋಹನ್‌ಕುಮಾರ್‌, ರವಿ, ನಾಗರಾಜು, ರಾಧಾಕೃಷ್ಣ, ನೇತ್ರಾವತಿ, ಕೆಂಪಣ್ಣ, ಸೆಲ್ವರಾಜ್‌, ಬಸವಣ್ಣ, ಸಂತೋಷ್‌, ಸೆಂದಿಲ್‌, ಹೇಮಂತ್‌ಕುಮಾರ್‌, ಡಿ.ಎಸ್‌. ಬಸವರಾಜು, ಸಿದ್ದರಾಜು ಇತರರು ಇದ್ದರು.

ಯಳಂದೂರು ಅಘೋಷಿತ ಬಂದ್‌
ಯಳಂದೂರು:  ಒಡೆಯರ್‌ ನಿಧನರಾದ ಹಿನ್ನೆಲೆಯಲ್ಲಿ ಯಳಂದೂರು ಪಟ್ಟಣದಲ್ಲಿ ಬುಧವಾರ ಅಂಗಡಿ ಮುಂಗಟ್ಟೆಗಳು ವಹಿವಾಟು ನಿಲ್ಲಿಸುವ ಮೂಲಕ ಪಟ್ಟಣ ಅಘೋಷಿತ ಬಂದ್ ಆಗಿತ್ತು.

ತಾಲ್ಲೂಕು ವರ್ತಕರ ಸಂಘ ಹಾಗೂ ಡಾ.ರಾಜ್‌ಕುಮಾರ್ ಅಭಿಮಾನಿ ಬಳಗದ ಸದಸ್ಯರು ಬಳೇಪೇಟೆಯ ವೃತ್ತದಲ್ಲಿರುವ ಕನ್ನಡ ಧ್ವಜಸ್ತಂಭದ ಬಳಿ ಒಡೆಯರ್‌ಗೆ ನಮನ ಸಲ್ಲಿಸಿದರು.

ಇದಕ್ಕೂ ಮುಂಚೆ ಪಟ್ಟಣದಲ್ಲಿನ ಅಂಗಡಿಗಳನ್ನು ಸಂಘದ ಸದಸ್ಯರು ಮುಚ್ಚುವಂತೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಂಗಡಿಗಳು ವಹಿವಾಟು ನಿಲ್ಲಿಸಿದ್ದವು. ಬಸ್‌ ನಿಲ್ದಾಣದಲ್ಲಿ ಜನರಿಲ್ಲದೆ ನಿಲ್ದಾಣ ಭಣಗುಡುತ್ತಿತ್ತು.

ಕಾವಲು ಪಡೆ ಶೋಕಾಚರಣೆ
ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಘಟಕದ ಸದಸ್ಯರು ಒಡೆಯರ್‌ ನಿಧನಕ್ಕೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸುವ ಮೂಲಕ ಅಗಲಿದ ರಾಜರಿಗೆ ಅಶ್ರುತರ್ಪಣ ಅರ್ಪಿಸಿದರು.

ಸಂಘದ ಅಧ್ಯಕ್ಷ ಸುರೇಶ್‌ಕುಮಾರ್‌, ಉಪಾಧ್ಯಕ್ಷ ವೈ.ಕೆ. ಮೋಳೆ ಬಸವರಾಜು, ಸದಸ್ಯರಾದ ಕಿರಣ್‌ಕುಮಾರ್ಉಪ್ಪಾರ್‌, ರಾಕಿ, ಅಂಬಳೆ ಶಿವು, ಟೈಲರ್‌ ನಾಗೇಂದ್ರ, ಕಂದಹಳ್ಳಿ ದೊರೆ, ಪ್ರಸನ್ನ, ಹೇಮಂತ್‌, ಶಂಕರ್‌, ಪ್ರತಾಪ್‌ ಇತರರು ಇದ್ದರು.

ಸಂತಾಪ ಸೂಚನಾ ಸಭೆ
ಗುಂಡ್ಲುಪೇಟೆ: ಬಹುಮುಖ ಪ್ರತಿಭೆಯಾಗಿದ್ದ   ಶ್ರೀಕಂಠದತ್ತ ನರಸಿಂಹರಾಜ ಒಡೆಯರು  ಜನರ ನಡುವೆ ಜನ ಸಾಮಾನ್ಯರ ಮನಸ್ಸಿನಲ್ಲಿ ಬೇರುಬಿಟ್ಟಿದ್ದರು ಎಂದು ಪುರಸಭಾ ಸದಸ್ಯ ಪಿ. ಚಂದ್ರಪ್ಪ ಹೇಳಿದರು.

ಪಟ್ಟಣದ ನೆಹರು ಉದ್ಯಾನ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ  ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣ ಸಂಪೂರ್ಣ ಬಂದ್
ಇಲ್ಲಿನ ವರ್ತಕರ ಸಂಘ, ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಕರೆಯ ಮೇರೆಗೆ ಪಟ್ಟಣದ ಅಂಗಡಿ -ಮುಂಗಟ್ಟುಗಳು ಸಂಪೂರ್ಣ ಶಾಂತಿಯುತ ಬಂದ್ ಮಾಡಿ ಒಡೆಯರ್‌ ಅವರಿಗೆ ಗೌರವ ಸಲ್ಲಿಸಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಡೆಯರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಒಡೆಯರ್ಗೆ ನಮನ ಸಲ್ಲಿಸಿದರು. ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನವನ್ನು ರದ್ದುಗೊಳಿಸಿ  ಒಡೆಯರ್‌  ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೌನಚರಣೆ:- ಒಡೆಯರ್‌ ಆತ್ಮಕ್ಕೆ ಶಾಂತಿ ಸಿಗಲೆಂದು ಪಟ್ಟಣದಲ್ಲಿನ ನೆಹರು ಪಾರ್ಕ್‌ ನ  ಮುಂಭಾಗದಲ್ಲಿ ಇಲ್ಲಿನ ಕನ್ನಡ ಪರ ಸಂಘಟನೆಯ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಮೌನಾಚರಣೆ ನಡೆಸಿದರು.

ವರ್ತಕರ ಸಂಘದ ಅಧ್ಯಕ್ಷ ಅಂಗಡಿ ಶಿವಕುಮಾರ್, ಪುರಸಭಾ ಸದಸ್ಯ ಜಿ.ಕೆ. ನಾಗೆಂದ್ರ, ಎಸ್. ಸುರೇಶ್ , ಪಿ. ಶಶಿಧರ್, ಪುಟ್ಟಸ್ವಾಮಾಚಾರ್, ಎಂ.ಸಿ. ಶಿವಪ್ರಸಾದ್, ಸುಧೀಂದ್ರ ವೈದ್ಯ, ರಾಧಾಕೃಷ್ಣ, ವೈ.ಎನ್. ಉಮೇಶ್, ಧರ್ಮೇಂದ್ರ, ರಾಜ್‌ಗೋಪಾಲ್‌ರಾವ್, ರವಿಕುಮಾರ್, ಶಾಂತಾರಾಮು, ಕುಮಾರ್, ಎಚ್.ಎನ್. ಬಸವರಾಜು, ಜಿ.ಎಲ್. ರಾಜು, ಸುಬ್ರಮಣ್ಯ, ಎಸ್.ಕೆ.ಎಸ್. ಮಣಿ, ಎಂ. ಜಯಣ್ಣ, ಎಲ್.ಐ.ಸಿ. ಮಹೇಶ್, ಮೈಕ್ ತಮ್ಮಣ್ಣ, ವಿಶ್ವ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಸಂತಾಪ: ಪಟ್ಟಣದಲ್ಲಿ ಒಡೆಯರ್ ಭಾವಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ  ಕರವೇ ಅಧ್ಯಕ್ಷ ಸುರೇಶನಾಯಕ್, ಶ್ರೀನಿವಾಸ್, ರಾಜೇಂದ್ರ, ನಾಗರಾಜು ಹಾಗೂ ಪದಾಧಿಕಾರಿಗಳು ಒಡೆಯರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ಸಂತಾಪ ಸೂಚಿಸಿದ ಯುವಸೇನೆ
ಗುಂಡ್ಲುಪೇಟೆ: ಒಡೆಯರ್‌ ನಿಧನಕ್ಕೆ ಬಸವ ಯುವಸೇನೆ ವತಿಯಿಂದ ಸಂತಾಪ ಸೂಚಿಸಲಾಯಿತು.
ಪಟ್ಟಣದ ಮದ್ದಾನೇಶ್ವರ ಮಹಾಮನೆ ಆವರಣದಲ್ಲಿ ಬುಧವಾರ ಸಂತಾಪ ಸಭೆ ನಡೆಸಿದರು.

ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಬಸವ ಯುವ ಸೇನೆ ಕಾರ್ಯಕರ್ತರಾದ ಚನ್ನಮಲ್ಲಿಪುರ ಬಸವಣ್ಣ, ವಕೀಲ ಶಾಂತಮಲ್ಲಪ್ಪ, ಬೊಮ್ಮಲಾಪುರ ಮಹದೇವಸ್ವಾಮಿ, ಗವಿ, ಅಭೀಷೇಕ್‌ ಗುಡಿಮನೆ, ಛತ್ರಿ ಮಂಜು, ಚೌಡಹಳ್ಳಿ ಗಣೇಶ್‌, ಗರಗನಹಳ್ಳಿ ಮಧು, ಹುಲಸಗುಂದಿ ಕುಮಾರ,ಎಸ್‌.ಸಿ. ಮಂಜು, ಗೌರಿಶಂಕರ್‌, ಪಡಗೂರು ಶಿವರಾಜ್‌, ಬೆಂಡಗಳ್ಳಿರವಿ, ಜಿ.ಕೆ. ಲೋಕೇಶ್‌, ಲೋಕೇಶ್‌ ಅಗತಗೌಡನಹಳ್ಳಿ, ಶಿಂಡನಪುರ ರವಿ, ಕಲ್ಲಹಳ್ಳಿ ಮಹೇಶ್‌, ಮಾಡ್ರಹಳ್ಳಿ ನಾಗೇಂದ್ರ, ಮಹದೇವಪ್ಪ, ಮಲ್ಲೇಶ್‌, ಮಹೇಶ್‌, ಮಹದೇವಪ, ಕುರಟ್ಟಿ ರವಿ, ಸಂತೋಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT