ಇತ್ತೀಚಿಗೆ ಕರ್ನಾಟಕ ಉಚ್ಚ ನ್ಯಾಯಲಯವು ಕೇಂದ್ರದ ಪಠ್ಯಕ್ರಮ ಪಾಲಿಸುವ ಐ.ಸಿ.ಎಸ್.ಸಿ ಮತ್ತು ಸಿ.ಬಿ.ಎಸ್.ಸಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಬರುತ್ತದೆ ಅನ್ನುವ ಮಹತ್ವದ ತೀರ್ಪನ್ನು ಕೊಟ್ಟಿದೆ.ಕರ್ನಾಟಕದಲ್ಲಿನ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಮತ್ತಷ್ಟು ಸುಧಾರಿಸುವ ದಿಕ್ಕಿನಲಿ ್ಲಈ ತೀರ್ಪು ಬಂದಿರುವುದು ಕರ್ನಾಟಕದ ಜನತೆಗೆ ಸಂತೋಷ ತಂದಿದೆ.
ಈ ಶಾಲೆಗಳು ತಮಗೆ ಮನಬಂದಂತೆ ಶುಲ್ಕ ಪಡೆದುಕೊಳ್ಳುವುದಕ್ಕೂ ಈ ತೀರ್ಪು ಕಡಿವಾಣ ಹಾಕಿದ್ದು ಪೋಷಕರ ನಿಟ್ಟುಸಿರಿಗೆ ನಾಂದಿ ಹಾಡಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನ್ಯಾಯಾಲಯ ತೀರ್ಪು ಕೊಟ್ಟಿರುವುದರಿಂದ ಈ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಮಾಡುವುದಕ್ಕೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೆ ಬರಲಾರದು.
ಜೊತೆಗೆ ಐ.ಸಿ.ಎಸ್.ಸಿ ಮತ್ತು ಸಿ.ಬಿ.ಎಸ್.ಸಿ ಪಠ್ಯಕ್ರಮದಲ್ಲಿ ಕನ್ನಡ ನಾಡಿನ ಇತಿಹಾಸ, ಕರ್ನಾಟಕದಲ್ಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವಿಷಯಗಳು, ನಾಡು ಕಂಡ ಧೀಮಂತ ವ್ಯಕ್ತಿಗಳಾದ ವಿಶ್ವೇಶ್ವರಯ್ಯ, ಕುವೆಂಪು, ಬಸವಣ್ಣ ಮುಂತಾದವರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವತ್ತ ಪಠ್ಯಕ್ರಮವನ್ನು ತಿದ್ದುಪಡಿ ಮಾಡಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೆ ತರಬೇಕಾದದ್ದು ಕರ್ನಾಟಕ ಶಿಕ್ಷಣ ಇಲಾಖೆಯ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ.
ಐ.ಸಿ.ಎಸ್.ಸಿ ಮತ್ತು ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಕನ್ನಡ ಮಕ್ಕಳ ಜೊತೆ ಹೊರ ರಾಜ್ಯಗಳಿಂದ ಬಂದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೂ ಕರ್ನಾಟಕದ ವೈವಿಧ್ಯತೆಯ ಬಗ್ಗೆ ತಿಳಿಸಬೇಕಾದ ನೈತಿಕ ಜವಾಬ್ದಾರಿಯನ್ನು ಶಾಲೆಗಳು ಹೊರಬೇಕು. ಈ ರೀತಿಯಾಗಿ ಪಠ್ಯಕ್ರಮ ರಚನೆಯಾದಲ್ಲಿ ಕನ್ನಡದ ಮಕ್ಕಳ ಜೊತೆ ಕನ್ನಡೇತರರ ಮಕ್ಕಳು ರಾಜ್ಯದ ಮುಖ್ಯವಾಹಿನಿಗೆ ಬರಲು ಉಪಯೋಗವಾಗುತ್ತದೆ.
ಕರ್ನಾಟಕದಲ್ಲಿ ನೀರು, ವಿದ್ಯುತ್, ಆಸ್ತಿ ತೆರಿಗೆ ರಿಯಾಯಿತಿ ಮುಂತಾದ ಸವಲತ್ತುಗಳನ್ನು ಪಡೆದುಕೊಳ್ಳುವ ಈ ಶಾಲೆಗಳು ನಾಡಿಗೆ ಪ್ರತ್ಯುತ್ತರವಾಗಿ ತೋರಿಸುವ ಗೌರವವೂ ಇದೇ.