ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮದ ಸಮೀಪ ಸೋಮವಾರ ಖಾಸಗಿ ಬಸ್ಸೊಂದು ಕಬ್ಬಿನ ಗದ್ದೆಗೆ ಉರುಳಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಮಂಡ್ಯದಿಂದ ಕೀಲಾರ-ಆಲಕೆರೆ ಮಾರ್ಗವಾಗಿ ಬೆಸಗರಹಳ್ಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಆಲಕೆರೆ ಗ್ರಾಮಸ್ಥರು, ಬಸ್ಸಿನ ಗಾಜು ಒಡೆದು ಪ್ರಯಾಣಿಕರನ್ನು ಹೊರಗಡೆ ಎಳೆದುಕೊಂಡರು. ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಿದಾಗಿರುವ ರಸ್ತೆಯಲ್ಲಿ ಟ್ರ್ಯಾಕ್ಟರ್ವೊಂದಕ್ಕೆ ಕಬ್ಬು ತುಂಬಲಾಗುತ್ತಿತ್ತು. ಅದರ ಪಕ್ಕದಿಂದಲೇ ವಾಹನ ಸಾಗಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಕೆಳಗುರುಳಿತು.
ಆಗ್ರಹ: ಕೀಲಾರ-ಆಲಕೆರೆ-ಮುದುಂಗೆರೆ ಗ್ರಾಮಗಳ ನಡುವಿನ ರಸ್ತೆ ತೀರ ಹದಗೆಟ್ಟಿದ್ದು, ಹಲವಾರು ಹೊಂಡಗಳು ಬಿದ್ದಿವೆ. ರಸ್ತೆಯನ್ನು ಅಗಲೀಕರಣಗೊಳಿಸಿ ಕೂಡಲೇ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.