ರಾಂಚಿ: ಸತತ ಎರಡು ಸೋಲುಗಳಿಂದ ನಿರಾಸೆ ಅನು ಭವಿಸಿದ್ದ ಕರ್ನಾಟಕದ ಪುರುಷರ ವಾಲಿಬಾಲ್ ತಂಡ ದವರು ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ಗೆಲುವು ಪಡೆದರು.
ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಕರ್ನಾಟಕ ಪುರುಷ ತಂಡದವರು 25-13, 25-14, 25-22ರಲ್ಲಿ ಜಾರ್ಖಂಡ್ ಮೇಲೆ ಗೆಲುವು ಪಡೆದರು. ಒಟ್ಟು 51 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಕರ್ನಾಟಕ ತಂಡಕ್ಕೆ ಮೂರನೇ ಸುತ್ತಿನಲ್ಲಿ ಮಾತ್ರ ಜಾರ್ಖಂಡ್ ತಂಡದಿಂದ ಕೊಂಚ ಪೈಪೋಟಿ ಎದುರಾಯಿತು.
ಟೇಕ್ವಾಂಡೊ, ಕರ್ನಾಟಕಕ್ಕೆ ಕಂಚು: ಕರ್ನಾಟಕದ ಬಿ. ತೇಜಸ್ವಿನಿ ಅವರು ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ವಿಭಾಗದ 53 ಕೆಜಿ ಟೇಕ್ವಾಂಡೊ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು.
ಮಧ್ಯ ಪ್ರದೇಶದ ಲತಿಕಾ ಭಂದಾರಿ ಅವರು ಮಣಿಪುರದ ಕೆ. ನಾನ್ಚನ್ ದೇವಿ ಅವರನ್ನು ಮಣಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ನಾನ್ಚನ್ ದೇವಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಶೂಟಿಂಗ್: ಕವಿತಾಗೆ ಕಂಚು: ಬೆಂಗಳೂರಿನ ಹುಡುಗಿ ಕವಿತಾ ಯಾದವ್ ಮಂಗಳವಾರ 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆರಂಭವಾದ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾದರು. ಟಿಕಾಯತ್ ಉಮ್ರಾವ್ ಶೂಟಿಂಗ್ ರೇಂಜ್ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಶೂಟಿಂಗ್ನಲ್ಲಿ 494.6 ಪಾಯಿಂಟ್ ಗಳಿಸಿದ ಕವಿತಾ ಕಂಚು ಪಡೆದರು. ಮಹಾರಾಷ್ಟ್ರದ ಪ್ರಿಯಾ ನರೇಂದ್ರ ಅಗರವಾಲ್ ಚಿನ್ನ ಪಡೆದರು.