ಹಿರಿಯೂರು: ಇಲ್ಲಿನ ಪುರಸಭೆಯ 27 ಸ್ಥಾನಗಳಲ್ಲಿ 16 ಸದಸ್ಯರನ್ನು ಹೊಂದಿದ್ದರೂ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ‘ಒಳ ರಾಜಕೀಯ’ ನಡೆಸುವ ಮೂಲಕ ಜೆಡಿಎಸ್ಗೆ ದಕ್ಕುವಂತೆ ಮಾಡಿರುವುದಕ್ಕೆ ತಮ್ಮ ತೀವ್ರ ವಿರೋಧ ಇದೆ ಎಂದು ಕಾಂಗ್ರೆಸ್ ಸದಸ್ಯರಾದ ಜಿ. ಧನಂಜಯ ಕುಮಾರ್, ಎ. ಮಂಜುನಾಥ್ ಹಾಗೂ ಸುಂದರಮ್ಮ ಪೋತರಾಜು ತಿಳಿಸಿದ್ದಾರೆ.
ನಗರದಲ್ಲಿ ಪಕ್ಷ ಬಲಗೊಳಿಸುವ ಹಿನ್ನೆಲೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ಗೆ ಉಳಿಸಿಕೊಳ್ಳಬೇಕು ಎಂದು ಈಚೆಗೆ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಚ್. ಮಂಜುನಾಥ್, ಡಿ. ಶಿವಣ್ಣ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾನಂದಿನಿ ಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮೀಸಲು ಕಾರಣಕ್ಕೆ ಉಪಾಧ್ಯಕ್ಷ ಸ್ಥಾನ ಜೆಡಿಎಸ್ಗೆ ಹೋಗಿತ್ತು. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತಾವು, ಕೆ.ಆರ್. ವೆಂಕಟೇಶ್ ಹಾಗೂ ಕೆ. ಗೋಪಿನಾಥ್ ಆಕಾಂಕ್ಷಿಯಾಗಿದ್ದೆವು ಎಂದು ಧನಂಜಯ ತಿಳಿಸಿದ್ದಾರೆ.
ಜ. 19 ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್ನ ಕೆಲ ಸದಸ್ಯರು ಪಕ್ಷ ನಿಷ್ಠೆ ಕಡೆಗೆಣಿಸಿ ಜೆಡಿಎಸ್ನ ಗಂಗಾಧರ್ ಆಯ್ಕೆ ಆಗುವಂತೆ ಷಡ್ಯಂತ್ರ ರೂಪಿಸಿದ್ದು, ಕಾಂಗ್ರೆಸ್ಗೆ ಮಾಡಿರುವ ಅವಮಾನ ಎಂದು ಅವರು ಆರೋಪಿಸಿದ್ದಾರೆ.
ಪಕ್ಷದ ಮುಖಂಡರು ಸ್ಥಳೀಯವಾಗಿ ನಡೆಯುತ್ತಿರುವ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪಕ್ಷ ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಕೇವಲ 11 ಸದಸ್ಯರಿರುವ ಜೆಡಿಎಸ್ಗೆ ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಿದೆ. ಆದರೆ, ಕಾಂಗ್ರೆಸ್ಗೆ ಬಹುಮತವಿದ್ದರೂ ಅಧಿಕಾರ ಪಡೆಯುವಲ್ಲಿ ವಿಫಲವಾಗಿರುವುದು ವಿಷಾದನೀಯ. ಈ ಕುರಿತು ಪಕ್ಷದ ಮುಖಂಡರಿಗೆ ಮನವಿ ಮಾಡಲು ತಾವು ನಿರ್ಧರಿಸಿರುವುದಾಗಿ ಧನಂಜಯ ಕುಮಾರ್ ಹಾಗೂ ಇತರ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.