ಅಳ್ನಾವರ: ಪ್ರಕೃತಿಯ ಸಮತೋಲನ ಕಾಪಾಡುವ ಕಾಡುಗಳು ದೇಶದ ಸಮೃದ್ಧಿಯ ಸೂಚಕ. ಕಾಡುಗಳಿಂದ ಶುದ್ಧ ಗಾಳಿ, ಕಾಲಕಾಲಕ್ಕೆ ಮಳೆ, ಬೆಳೆ ಸಿಗುತ್ತದೆ ಎಂದು ಸೇಂಟ್ ತೆರೇಜಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಎಸ್ .ಲೂಕಾಸ್ ಅಭಿಪ್ರಾಯಪಟ್ಟರು.
ಇಲ್ಲಿನ ಸೇಂಟ್ ತೆರೇಜಾ ಪ್ರೌಢ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಸಿ ನೆಟ್ಟು ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಡುಗಳಿಂದ ವನ್ಯಜೀವಿಗಳು ಆಸರೆ ಪಡೆಯುತ್ತವೆ ಹಾಗೂ ಭೂಕುಸಿತ ತಡೆಗಟ್ಟಬಹುದು ಎಂದು ಹೇಳಿದರು.
ಮಾನವನ ಅತಿಯಾದ ಆಸೆಯಿಂದ ಕಾಡು ನಾಶವಾಗಿ ಮಳೆ ಬೆಳೆ ಸರಿಯಾಗಿ ದೊರಕುತ್ತಿಲ್ಲ. ಕಾಡು ಬರಿದಾಗಿ ಪ್ರಾಣಿಗಳು ನಾಡಿನ ಮೇಲೆ ದಾಳಿ ನಡೆಸುತ್ತಿವೆ. ಆದ್ದರಿಂದ ಎಳೆಯ ವಯಸ್ಸಿನ ಮಕ್ಕಳಲ್ಲಿ ಗಿಡ ಮರಗಳ ಪ್ರಾಮುಖ್ಯತೆ ಅರ್ಥೈಸುವ ಕೆಲಸಕ್ಕೆ ವನಮಹೋತ್ಸವ ಸಹಕಾರಿಯಾಗಿದೆ ಎಂದರು.
ಸಚಿನ ಮಿಟಗಾರ, ಕನ್ನಡ ನಾಡು ಶ್ರೀಗಂಧದ ಬೀಡು ಎಂಬ ಹೆಗ್ಗಳಿಕೆ ಮಾತುಗಳು ಕಾಡು ನಾಶದಿಂದ ದೂರವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಅರಣ್ಯ ನಾಶಗೊಳಿಸಿದ ಸ್ಥಳದಲ್ಲಿ ಮರು ಅರಣ್ಯಕೀಕರಣ ಮಾಡಿ ಸಂರಕ್ಷಿಸಿದರೆ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಶಾಲಾ ಮುಖ್ಯಾಧ್ಯಾಪಕ ಧರ್ಮಗುರು ರಾಜೇಂದ್ರ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರದ ವನ ಸಂಪತ್ತು ರಕ್ಷಿಸಲು ಗಿಡ ಮರಗಳನ್ನು ನೆಟ್ಟು ಪೋಷಣೆ ಮಾಡಬೇಕು. ಇದರಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದರು.
ರಾಜು ಅಷ್ಟೇಕರ, ಸಿಲ್ವಿ ಡಿಸೋಜಾ, ಮಹಾಂತೇಶ ಸಂಪಗಾಂವಿ, ಗ್ಲೋರಿಯಾ ಸೋಜ, ಕೆ. ಸಂಗೀತಾ, ದೀಪಾ ಬಿಜಾಪುರ, ರಘು ಕುಲಕರ್ಣಿ, ಎಸ.ಬಿ. ಸಾಗರೇಕರ ಹಾಜರಿದ್ದರು.
ನಿಕಿತಾ ಕಡಕೋಳ ಸ್ವಾಗತಿಸಿದರು. ಸಾನಿಯಾ ಬಾತಖಂಡೆ ನಿರೂಪಿಸಿದರು. ನವೀನ್ ಕಡಕೋಳ ವಂದಿಸಿದರು. ಮಕ್ಕಳು ವನ ಮಹೋತ್ಸವದ ಮಹತ್ವ ಕುರಿತು ಗೀತೆ ಹಾಡಿದರು. ಸುಗಂಧಾ ಆನಂತಪುರ, ಸುಪ್ರಿತಾ ಕಂಬಾರ, ಉಸೃತಬಾನು ನದಾಫ ವನ ಮಹೋತ್ಸವದ ಮಹತ್ವ ಕುರಿತು ಮಾತನಾಡಿದರು.