ಶಿವಮೊಗ್ಗ: ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಬಹುವಾಗಿ ಕಾಡುತ್ತಿರುವ ಕಾರ್ಮಿಕರ ಸಮಸ್ಯೆಗಳಿಗೆ ರೈತರು ಸಮಗ್ರ ಕೃಷಿ ವಿಧಾನ ಅಳವಡಿಸಿಕೊಳ್ಳುವುದೇ ಪರಿಹಾರ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಿ.ವಿ. ರಮೇಶ್ ಸಲಹೆ ಮಾಡಿದರು.
ವಲಯ ಕೃಷಿ ಸಂಶೋಧನಾ ಕೇಂದ್ರ ನವಿಲೆ ಹಮ್ಮಿಕೊಂಡಿರುವ ಎರಡು ದಿನಗಳ `ಕೃಷಿ ಮೇಳ~ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ನಾಟಿಯಿಂದ ಒಕ್ಕಣೆಯವರೆಗೆ ಕೃಷಿ ಪರಿಕರಗಳನ್ನು ಬಳಸಿಕೊಂಡು ಕೃಷಿಯನ್ನು ಸರಳೀಕರಣಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರಗಳು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಹಾಗೆಯೇ, ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ಭೂಮಿಯ ಫಲವತ್ತತೆ ಹೆಚ್ಚಿಸಿಕೊಂಡು ಅಧಿಕ ಇಳುವರಿ ಪಡೆಯಬಹುದು ಎಂದರು.ಕೃಷಿ ಸಂಶೋಧನಾ ಕೇಂದ್ರಗಳ ಸಂಶೋಧನೆಗಳು ಫಲಕಾರಿಯಾಗಬೇಕಾದರೆ ರೈತರು ಹಾಗೂ ಕೃಷಿ ಸಂಶೋಧನಾಕರ ನಡುವೆ ವಿಚಾರ ವಿನಿಮಯಗಳಾಗಬೇಕು; ಜ್ಞಾನ ಪರಸ್ಪರ ಹಂಚಿಕೆಯಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಇಂದು ಫಲವತ್ತಾದ ಕೃಷಿಭೂಮಿಗಳು ಲೇಔಟ್ಆಗುತ್ತಿವೆ. ಸರ್ಕಾರವೇ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೃಷಿ ಪದ್ಧತಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದರು.
`ಕೃಷಿ ಮೇಳ~ದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿದ ವ್ಯವಸ್ಥಾಪನಾ ಮಂಡಳಿ ಸದಸ್ಯ ಕುಂಸಿ ಬಸವಕುಮಾರ್ ಮಾತನಾಡಿ, ಕೃಷಿಗೆ ಎಂದಿಗೂ ಸಾವಿಲ್ಲ; ಅದು ಸತ್ತರೆ ನಾವು ಬದುಕುವುದೂ ಇಲ್ಲ. ಮನುಷ್ಯನ ಇಡೀ ಜೀವನ ಆಹಾರಕ್ಕಾಗಿ ಕೃಷಿಯನ್ನೇ ಆಧಾರಿಸಿದೆ ಎಂದು ಹೇಳಿದರು.
ರೈತರು ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಕೃಷಿಯನ್ನು ಸುಲಭಗೊಳಿಸಿಕೊಳ್ಳಬೇಕು. ಹಾಗೆಯೇ, ಕೃಷಿಯಿಂದ ದೂರವಾಗುತ್ತಿರುವ ಯುವಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸಬೇಕು ಎಂದು ಸಲಹೆ ನೀಡಿದರು.
ಕಾಂಪೋಸ್ಟ್ ತಯಾರಿಕೆ ಕೈಪಿಡಿಯನ್ನು ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಎಂ. ಶೇಖರ್ಗೌಡ ಬಿಡುಗಡೆ ಮಾಡಿದರು. ಕೃಷಿ ಸಂಶೋಧನಾ ಕೇಂದ್ರದ ಡೀನ್ ಡಾ.ಎಂ.ಎಸ್. ಗಣೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಆರ್. ಪ್ರಸನ್ನಕುಮಾರ್, ಕೆ. ನಾಗರಾಜ್, ಎಚ್. ಶಿವಪ್ಪ, ಸಂಶೋಧನಾ ನಿರ್ದೇಶಕ ಡಾ.ಎಚ್. ಶಿವಣ್ಣ, ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ, ತೋಟಗಾರಿಕೆ ಉಪ ನಿರ್ದೇಶಕ ಡಾ.ಎಚ್. ವಿಶ್ವನಾಥ್, ಹಿರಿಯ ಸಹಾಯಕ ವಾರ್ತಾಧಿಕಾರಿ ದೇವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸಂಶೋಧನಾ ನಿರ್ದೇಶಕ ಡಾ.ವೈ. ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಸಂಯೋಜಕ ಡಾ.ಎಚ್.ಕೆ. ವೀರಣ್ಣ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.