ಕಾವೇರಿ ಜಲವಿವಾದದ ಬಗ್ಗೆ ನ್ಯಾಯಮಂಡಳಿಯು, 2007ರ ಫೆಬ್ರುವರಿ 5ರಂದು ತನ್ನ ಅಂತಿಮ ತೀರ್ಪು ನೀಡಿರುವುದನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಬೇಕಾಗಿದೆ.
ಈ ಅಧಿಸೂಚನೆಯು ಗೆಜೆಟ್ನಲ್ಲಿ ಪ್ರಕಟವಾದ ಕೂಡಲೇ ನ್ಯಾಯಮಂಡಳಿಯ ತೀರ್ಪು ಸುಪ್ರೀಂ ಕೋರ್ಟಿನ ಆದೇಶವಿದ್ದಂತೆ ಜಾರಿಗೊಳ್ಳುತ್ತದೆ. ನ್ಯಾಯಮಂಡಳಿಯ ಶಿಫಾರಸ್ಸಿನಂತೆ ತನ್ನ ಆದೇಶವನ್ನು ಜಾರಿಗೊಳಿಸಲು ಕಾವೇರಿ ಕಾರ್ಯನಿರ್ವಹಣಾ ಮಂಡಳಿ ರಚಿಸಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರವು ನೇಮಿಸುವ ಒಬ್ಬ ಪೂರ್ಣಾವಧಿ (3ರಿಂದ 5ವರ್ಷಗಳ ವರೆಗೆ) ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರಿರುತ್ತಾರೆ. ಸಂಬಂಧಿಸಿದ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಅರೆಕಾಲಿಕ ಸದಸ್ಯರಾಗಿರುತ್ತಾರೆ.