ಶ್ರೀನಗರ: ಸತತ ಎರಡನೇ ದಿನವಾದ ಬುಧವಾರವೂ ಉಗ್ರರು ಕಾಶ್ಮೀರದಲ್ಲಿ ಗ್ರೆನೆಡ್ ದಾಳಿ ನಡೆಸಿದ್ದು, ಐವರು ನಾಗರಿಕರು ಗಾಯಗೊಂಡಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಬಿಜ್ಬೆಹಾರದಲ್ಲಿ ಈ ದಾಳಿ ನಡೆದಿದ್ದು, ಎರಡು ದಿನಗಳಲ್ಲಿ ಉಗ್ರರು ನಡೆಸಿರುವ ಐದನೇ ದಾಳಿ ಇದಾಗಿದೆ.
ಈ ನಡುವೆ ಪಾಕ್ ಮೂಲದ ಎಲ್ಇಟಿ ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರ್ಕಾರ, `ಗಲಭೆ ಪೀಡಿತ ಪ್ರದೇಶ ಕಾಯ್ದೆ~ ತೆಗೆದು ಹಾಕಲು ಚಿಂತಿಸುತ್ತಿರುವ ಸಂದರ್ಭದಲ್ಲಿಯೇ ಈ ದಾಳಿಗಳು ನಡೆದಿವೆ. ಹಾಗಾಗಿ ಬುಧವಾರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ.
ಶ್ರೀನಗರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಬಿಜ್ಬೆಹಾರ ನಗರದ ಗೊರಿವಾನ್ ಮಾರುಕಟ್ಟೆ ಪ್ರದೇಶದಲ್ಲಿ ಮಧ್ಯಾಹ್ನ 1.40ರ ಸುಮಾರಿಗೆ ಅಪರಿಚಿತ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದಾರೆ. ಇದುವರೆಗೂ ದಾಳಿಯ ಹೊಣೆ ಯಾವುದೇ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ.
ಈ ಮಾರ್ಗದಲ್ಲಿ ಹಾದು ಹೋಗು ತ್ತಿದ್ದ ಪೊಲೀಸ್ ವಾಹನವನ್ನು ಗುರಿಯಾ ಗಿರಿಸಿಕೊಂಡು ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ಕಣಿವೆ ರಾಜ್ಯದ ನಾಲ್ಕು ಕಡೆಗಳಲ್ಲಿ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯನ್ನು ತಾನು ನಡೆಸಿರುವುದಾಗಿ ನಿಷೇಧಿತ ಜಮೈತುಲ್ ಮುಜಾಹಿದ್ದೀನ್ (ಜೆಇಎಂ) ಹೊತ್ತು ಕೊಂಡಿತ್ತು. ಕಾಶ್ಮೀರದಿಂದ ಉಗ್ರರನ್ನು ಹೊರ ಹಾಕಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡು ವುದು ದಾಳಿಯ ಉದ್ದೇಶವಾಗಿತ್ತು ಎನ್ನಲಾಗಿದೆ.
ಸೇನೆಯೇ ಇಂತಹ ಕೃತ್ಯವನ್ನು ನಡೆಸಿದೆ ಎಂದು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ವಕ್ತಾರ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಚಿಕ್ಕಪ್ಪ ಡಾ.ಮುಸ್ತಫಾ ಕಮಾಲ್ ಆರೋಪಿಸಿದ್ದರು. ಆದರೆ ಸೇನೆ ಈ ಆರೋಪವನ್ನು ತಳ್ಳಿಹಾಕಿತ್ತು. ಕಮಾಲ್ ಅವರ ಹೇಳಿಕೆ ತಿರುಚ ಲಾಗಿದೆ ಎಂದು ಬುಧವಾರ ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.