ರಾಯಚೂರು: ಇಲ್ಲಿನ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದ ಮೂಲ ಸ್ಥಾಪಕ ಜೀವಕ್ಯ ಕೊಳಂಕಿ ಗುರುಪಾದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ 962ನೇ ಜಯಂತ್ಯೋತ್ಸವ ಅಂಗವಾಗಿ ಭಾನುವಾರ 7ನೇ ಸದ್ಭಾವನಾ ಪಾದಯಾತ್ರೆ ನಡೆಯಿತು.
ಮಠದ ಸ್ವಾಮೀಜಿ ಶಾಂತಮಲ್ಲ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಮಠದಲ್ಲಿ ಪಲ್ಲಕ್ಕಿ ಪೂಜೆ ನಡೆಯಿತು. ಬಳಿಕ ಸದ್ಭಾವನೆ ಯಾತ್ರೆ ಆರಂಭಗೊಂಡಿತು. ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ವೃತ್ತ, ರೈಲ್ವೆ ಸ್ಟೇಷನ್ ರಸ್ತೆ, ಆಶಾಪುರ ಕ್ರಾಸ್ ಹಾಗೂ ಗಂಗಾನಗರ ಮಾರ್ಗವಾಗಿ ಕೊಳಂಕಿಗೆ ತಲುಪಿತು.
ಸದ್ಭಾವನೆ ಯಾತ್ರೆ ಆರಂಭಕ್ಕೂ ಮುನ್ನ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್.ಶಂಕರಪ್ಪ, ಶಿವಯೋಗಿ ಶಿವಾಚಾರ್ಯರು ಪವಾಡಪುರುಷರು. ಆಗಿನಿಂದಲೂ ಮಠ ಧರ್ಮ ರಕ್ಷಣೆ, ಧರ್ಮ ಜಾಗೃತಿ, ಸಮಾಜ ಒಳಿತಿಗೆ ಉಪಯುಕ್ತ ಕಾರ್ಯ ಮಾಡಿಕೊಂಡು ಬಂದಿದೆ ಎಂದರು.
ಸಾಲೂರು ಮಠಾಧೀಶ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮಗಳ ಸಾರ ಜಗತ್ತಿಗೆ ಒಳಿತು ಮಾಡುವುದು. ಮಾನವ ಕುಲ ಉದ್ಧಾರ. ಮಠವು ಆ ಕಾರ್ಯವನ್ನು ಮಾಡಿಕೊಂಡು ಬಂದಿದೆ ಎಂದರು.
ಶಾಸಕ ಶಿವರಾಜ ಪಾಟೀಲ್, ನಗರಸಭೆ ಅಧ್ಯಕ್ಷೆ ಮಹಾದೇವಿ ತಾಯಣ್ಣ ನಾಯಕ, ಬಿಜೆಪಿ ಮುಖಂಡ ತ್ರಿವಿಕ್ರಮ ಜೋಶಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ರವೀಂದ್ರ ಜಾಲ್ದಾರ್,ನಗರಸಭೆ ಸದಸ್ಯರಾದ ಎಂ. ಪವನಕುಮಾರ, ವಿನಯಕುಮಾರ, ಪಿ ಯಲ್ಲಪ್ಪ, ಆಂಜನೇಯ ಯಕ್ಲಾಸಪುರ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಶಿವಶಂಕರ ಹಾಗೂ ಇತರರು ಪಾಲ್ಗೊಂಡಿದ್ದರು.