ಬೆಳಗಾವಿ: ತಾಲ್ಲೂಕಿನ ಮಾರೀಹಾಳ ಗ್ರಾಮದ ರೈತ ಈರಪ್ಪ ಪಾಟೀಲ ಅವರು ತಮ್ಮ 1 ಎಕರೆ 19 ಗುಂಟೆ ಕೃಷಿ ಜಮೀನಿನಲ್ಲಿ ಸಿಂಪಡಿಸಿದ ಕೀಟನಾಶಕದಿಂದಾಗಿ ಕ್ಯಾಬೇಜ್ ಹಾಗೂ ಬಿನ್ಸ್ ಬೆಳೆಗಳು ಹಾಳಾಗಿದ್ದು, ಸುಮಾರು 4 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.
ಈರಪ್ಪ ಪಾಟೀಲ ಅವರು ಬೆಳೆದ ಕ್ಯಾಬೇಜ್ ಹಾಗೂ ಬಿನ್ಸ್ ಬೆಳೆಗಳು ಕಟಾವಿನ ಹಂತದಲ್ಲಿದ್ದಾಗ ಸ್ಥಳೀಯ ಔಷಧಿ ಮಾರಾಟಗಾರರಾದ ಬಸವೇಶ್ವರ ಅಗ್ರೋ ಕೇಂದ್ರದ ಮಾಲೀಕರ ಸಲಹೆಯ ಮೇರೆಗೆ ಇಂಡೋಫೆಲ್ 2.78 ಪೇಡರ್ ಮತ್ತು ಹೈದರಾಬಾದ್ ಮೂಲದ ಕೆಂಟೂ ಎಂಬ ಕೀಟನಾಶಕ ಸಿಂಪರಣೆ ಮಾಡಲಾಗಿದೆ. ಆದರೆ, ಇದು ನಕಲಿ ಆಗಿರುವುದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಹೀಗಾಗಿ ರೈತರ ಜಮೀನಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಾಲ್ಲೂಕು ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ನಕಲಿ ಔಷಧ ಕಂಪೆನಿಗಳು ಹಾಗೂ ನಕಲಿ ಔಷಧ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ರೈತನಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದಗೌಡ ಮೋದಗಿ ಒತ್ತಾಯಿಸಿದ್ದಾರೆ.