ಡಾ.ದೇವೇಂದ್ರಕುಮಾರ ಹಕಾರಿ ವೇದಿಕೆ (ಕುಷ್ಟಗಿ): ಕೊಪ್ಪಳ ಜಿಲ್ಲೆಯ ರಂಗಭೂಮಿಗೆ ಶತಮಾನದ ಇತಿಹಾಸವಿದೆ ಎಂದು ನಾಟಕ ರಚನೆಕಾರ, ಸಾಹಿತಿ ಎಸ್.ವಿ.ಪಾಟೀಲ ಗುಂಡೂರು ಭಾನುವಾರ ಇಲ್ಲಿ ಹೇಳಿದರು. ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜಿಲ್ಲೆಯ ರಂಗ ಚಟುವಟಿಕೆಗಳು’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, “1903ರಲ್ಲಿ ಶಿರಹಟ್ಟಿ ವೆಂಕೋಬರಾಯರು ಆರಂಭಿಸಿದ ರಂಗ ಚಟುವಟಿಕೆ, 1948ರ ಕಾಲಘಟ್ಟದಲ್ಲಿ ಕೊಪ್ಪಳದ ಭೀಮವ್ವ ಕೇವಲ ಮಹಿಳೆಯರನ್ನು ಕಟ್ಟಿಕೊಂಡು ನಾಟಕವಾಡಿದ್ದು ರಾಜ್ಯದಲ್ಲಿಯೇ ಪ್ರಥಮ ಎಂಬ ದಾಖಲೆ ಇದೆ” ಎಂದು ಹೇಳಿದರು.
ಗರುಡ ಸದಾಶಿವರಾಯರ ರಂಗ ನಾಟಕಗಳನ್ನು ಜವಾಹರಲಾಲ್ ನೆಹರು ಹಾಗೂ ವಲ್ಲಭಬಾಯಿ ಪಟೇಲ ಅವರಂಥ ಮುತ್ಸದ್ಧಿಗಳು ಕುಳಿತು ನೋಡಿದ್ದರು.ಅಳವಂಡಿಯ ಸೋಮನಗೌಡರು ಹಾಗೂ ಕುಕನೂರಿನ ರೆಹೆಮಾನವ್ವ ಅಂಥ ರಂಗಭೂಮಿ ಕಲಾವಿದರ ಕುಟುಂಬಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದರು.
ಗೊಂದಲಿಗರ ಕಥೆ, ಹಗಲ ವೇಷಗಾರರು, ಬಯಲಾಟ, ದೊಡ್ಡಾಟ, ಸಣ್ಣಾಟ, ದಪ್ಪಿನಾಟಕ, ಶ್ರೀಕೃಷ್ಣ ಪಾರಿಜಾತ ಎಲ್ಲವೂ ಜಿಲ್ಲೆಯ ರಂಗವೇದಿಕೆಯ ರೂಪಗಳಾಗಿ ಬೆಳೆದು ಬಂದಿವೆ ಎಂದು ಹೇಳಿದರು. ಅಲ್ಲದೇ ವೇಂಕೋಬರಾವ್ ಅವರ ಕಂಪನಿ ಸ್ವಾತಂತ್ರ್ಯ ಹೊರಾಟಗಾರರಿಗೆ ನಾಟಕಗಳ ಮೂಲಕ ಧನಸಂಗ್ರಹ ಮಾಡಿ ಸಹಾಯ ನೆರವು ನೀಡಿದ ಉದಾಹರಣೆಯೂ ವೃತ್ತಿರಂಗಭೂಮಿಗಿದೆ ಇದೆ ಎಂದರು.