ಕೊಪ್ಪಳ: ಕೊಪ್ಪಳ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ರಾಜ್ಯದ ರಾಜಕೀಯದಲ್ಲಿನ ಬದಲಾವಣೆಗೆ ದಿಕ್ಸೂಚಿಯಾಗಲಿದೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದರು.
ಅವರು ನಗರದಲ್ಲಿ ಸೋಮವಾರ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್ ಪರ ಮತ ಯಾಚನೆಗಾಗಿ ಹಮ್ಮಿಕೊಂಡಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಶನ್, ಕೆಎಐಡಿಬಿ ಹಗರಣಗಳಿಂದ ಬಂದ ಹಣದಿಂದ ದುರಹಂಕಾರದಿಂದ ಮೆರೆಯುತ್ತಿರುವ ಬಿಜೆಪಿಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸುವ ಜವಾಬ್ದಾರಿ ಈ ಕ್ಷೇತ್ರದ ಮತದಾರರ ಮೇಲಿದ ಎಂದು ಹೇಳಿದರು.
ಸೆ. 16ರಿಂದ 24ರ ವರೆಗೆ ತಾವು ಕ್ಷೇತ್ರದಲ್ಲಿ ವಾಸ್ತವ್ಯ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ, ಹಳ್ಳಿ-ಹಳ್ಳಿಗೆ, ಮನೆ-ಮನೆಗೆ ತೆರಳಿ ಮತ ಯಾಚಿಸುವುದಾಗಿ ಹೇಳಿದರು.
ಈ ಉಪಚುನಾವಣೆಯಲ್ಲಿ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ್ ಗೆದ್ದರೆ ಅದು ನನ್ನ ಗೆಲುವೇ ಆಗಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಗೂ ಈ ಚುನಾವಣೆಗೂ ಯಾವುದೇ ವ್ಯತ್ಯಾಸವಿಲ್ಲ.
ಆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆದ್ದಿರುವ ಹಾಗೆಯೇ ಈ ಕ್ಷೇತ್ರದಲ್ಲಿ ಸಹ ಪಕ್ಷದ ಕೆ.ಬಸವರಾಜ ಹಿಟ್ನಾಳ್ ಗೆಲುವು ಸಾಧಿಸಲಿದ್ದಾರೆ.
ಈ ಮಾತು ಸೆ. 29ರಂದು ಸಾಬೀತಾಗಲಿದೆ ಎಂದು ಪಕ್ಷದ ಮುಖಂಡ ಬಿ.ಎಲ್.ಶಂಕರ್ ಹೇಳಿದರು.