ಭಾಲ್ಕಿ: ನೂರಾರು ಕೋಟಿ ವ್ಯವಹಾರ ಮಾಡುವ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇರುವ ಏಕೈಕ ಕಚೇರಿಯಲ್ಲಿ ಒಬ್ಬನೇ ಸಿಬ್ಬಂದಿ ಅಂದ್ರೆ ನಂಬಬಹುದಾ? ಮಹತ್ವದ ದಾಖಲೆಗಳು ಇರುವ ಕಚೇರಿಗೆ 2 ಕೋಣೆಗಳ ಹಳೆ ಕಟ್ಟಡ ಇರಬೇಕೆಂದರೆ ಏನ್ ವಿಶೇಷ ಇರಬಹುದು? ಇರುವ ಆ ಹಳೆಯ ಕಟ್ಟಡಕ್ಕೆ ಹತ್ತಾರು ವರ್ಷಗಳಿಂದ ಸುಣ್ಣ ಬಣ್ಣ ಕೂಡ ಹೊಡೆದಿಲ್ಲ ಅಂದ್ರೆ ಇದೇನು ತಮಾಷೆ ಅಂತೀರಾ?
ಈ ಎಲ್ಲ ಪ್ರಶ್ನೆಗಳಿಗೆ ಭಾಲ್ಕಿಯಲ್ಲಿ ಇರುವ ಸಹಕಾರ ಸಂಘಗಳ ಹಿರಿಯ ಲೆಕ್ಕ ಪರಿಶೋಧಕರ ಕಚೇರಿಯ ಶಿಥಿಲಾವಸ್ಥೆಯೇ ಉತ್ತರಿಸುತ್ತದೆ. ಜಿಲ್ಲೆಯಲ್ಲೇ ಭಾಲ್ಕಿ ತಾಲ್ಲೂಕಿನಲ್ಲಿ ಮಾತ್ರ ಪ್ರತ್ಯೇಕವಾಗಿ ಈ ಕಚೇರಿ ಇದೆ. ಆದರೆ ಇದು ತಾಲ್ಲೂಕು ಪಂಚಾಯಿತಿ ಕಚೇರಿಯ ಆವರಣದಒ್ಲಂದು ಮೂಲೆಯ ಪಾಳು ಬಿದ್ದ 2 ಕೋಣೆಯ ಪಿಡಬ್ಲ್ಯುಡಿ ಕಾರ್ಟರ್ಸ್ನಲ್ಲಿ ಈ ಕಚೇರಿ ಇದೆ.
ತಾಲ್ಲೂಕಿನಾದ್ಯಂತ ಇರುವ ಸುಮಾರು 36 ವ್ಯವಸಾಯ ಸೇವಾ ಸಹಕಾರ ಸಂಘಗಳು (ವಿಎಸ್ಎಸ್ಎನ್)ಗಳ ಲೆಕ್ಕ ಪರಿಶೀಲನೆಯ ಜವಾಬ್ದಾರಿ ಈ ಕಚೇರಿಯದ್ದು. ಜೊತೆಗೆ ಭಾಲ್ಕಿ ತಾಲ್ಲೂಕಿನ ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ, ಪಿಎಲ್ಡಿ ಬ್ಯಾಂಕ್, 60ಕ್ಕೂ ಅಧಿಕ ಹಾಲಿನ ಸೊಸೈಟಿಗಳು, 1 ಹೌಸಿಂಗ್ ಸೊಸೈಟಿ, 2 ಮೀನುಗಾರಿಕೆ ಸಹಕಾರ ಸಂಘಗಳು, 10ಕ್ಕೂ ಅಧಿಕ ಪತ್ತಿನ ಸಹಕಾರ ಸಂಘಗಳು, ಅರ್ಬನ್ ಬ್ಯಾಂಕ್, ಟಿಎಪಿಸಿಎಂಎಸ್, 23 ಕಾಡಾ ನೀರು ಬಳಕೆದಾರರ ಸಹಕಾರ ಸಂಘಗಳು ಮುಂತಾದ ಬೃಹತ್ ಸಂಘ ಸಂಸ್ಥೆಗಳ ಲೆಕ್ಕವನ್ನು ಪರಿಶೀಲನೆ ಮಾಡುವ ಜವಾಬ್ದಾರಿ ಈ ಕಚೇರಿಯದ್ದಾಗಿದೆ.
ಇಷ್ಟೊಂದು ಜವಾಬ್ದಾರಿ ಇದ್ದರೂ ಇವನ್ನೆಲ್ಲಾ ನೋಡಿಕೊಳ್ಳಲು ಬೇಕಾದಷ್ಟು ಸಿಬ್ಬಂದಿಗಳಿಲ್ಲ, ಬೃಹತ್ ಕಟ್ಟಡವೂ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಸಿದ್ರಾಮಪ್ಪ ಅಣರೂರೆ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಹೇಳುತ್ತಾರೆ.
ಹುದ್ದೆಗಳು ಖಾಲಿ: ಸೀನಿಯರ್ ಆಡಿಟರ್, ಲೆಕ್ಕ ಪರಿಶೀಲನಾ ಅಧಿಕಾರಿ, ಎಫ್ಡಿಸಿ, ಎಸ್ಡಿಸಿ, ಅಟೆಂಡರ್, ಕ್ಲರ್ಕ್ ಎಲ್ಲಾ ಒಂದು ಕಾಲಕ್ಕೆ ಸರ್ಕಾರದಿಂದ ಮಂಜೂರಾಗಿತ್ತು. ಆದರೆ ಈಗ ಅವರ್ಯಾರು ಇಲ್ಲಿಲ್ಲ.
ವಿಠಲರಾವ ಸಿಂದಬಂದಗಿ ಎಂಬವರೊಬ್ಬರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆಗೆ ಒಬ್ಬ ಕ್ಲರ್ಕ್ ನಿಯೋಜನೆಯಲ್ಲಿದ್ದಾರೆ. ಇಂಥ ಮಹತ್ವದ ಕಚೇರಿಗೆ ಇಂಥ ದುರ್ದೆಸೆ ಯಾಕೆ? ಮಿನಿ ವಿಧಾನ ಸೌಧದಲ್ಲಾದರೂ ಒಂದು ಕಚೇರಿಗಾಗಿ ಸ್ಥಳ ಕೊಡಬಾರದೆ? ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.